ಮೈಸೂರಿನಲ್ಲಿ ಡೆಂಗ್ಯೂ ಭೀತಿ: ತುಂಬಿ ತುಳುಕುತ್ತಿದೆ ಚೆಲುವಾಂಬ ಆಸ್ಪತ್ರೆ
ಮೈಸೂರು, ಜೂನ್ 23 : ಸಾಮಾನ್ಯವಾಗಿ ದಿನವೊಂದಕ್ಕೆ 15 ರಿಂದ 20 ರೋಗಿಗಳು ಆಸ್ಪತ್ರೆ ದಾಖಲಾಗುವುದು ಸಹಜ. ಆದರೆ ಮೈಸೂರಿನ ಪ್ರತಿಷ್ಠೀತ ಮಕ್ಕಳ ಆಸ್ಪತ್ರೆ ಚೆಲುವಾಂಬಕ್ಕೆ ದಿನವೊಂದಕ್ಕೆ 35-40 ಕ್ಕೂ ಹೆಚ್ಚು ಮಕ್ಕಳು ದಾಖಲಾಗುತ್ತಿದ್ದಾರೆ. ಹೌದು, ಈಚೆಗೆ ವೈರಾಣು ಜ್ವರದಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.
ಜಿಲ್ಲೆಯಲ್ಲಿ ಡೆಂಗ್ಯೂ, ವೈರಾಣು ಜ್ವರ, ಶ್ವಾಸಕೋಶ ಸೋಂಕು ಉಲ್ಬಣಿಸಿರುವುದರಿಂದ ಇಲ್ಲಿನ ಚೆಲುವಾಂಬ ಮಕ್ಕಳ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ತುರ್ತು ನಿಗಾ ಘಟಕದಲ್ಲಿ ಒಂದೇ ಹಾಸಿಗೆಯಲ್ಲಿ 2-3 ಮಕ್ಕಳನ್ನು ಮಲಗಿಸಿ ಚಿಕಿತ್ಸೆ ನೀಡುವ ಅನಿವಾರ್ಯ ಎದುರಾಗಿದೆ. ನಿತ್ಯ 35 ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
ನ್ಯೂಮೋನಿಯಾ ಹಾಗೂ ವಿವಿಧ ಸೋಂಕುಗಳ ಸಮಸ್ಯೆಯಿಂದ ಮೂರೂವರೆ ತಿಂಗಳಿನಲ್ಲಿ 49 ಮಕ್ಕಳು ಸಾವನ್ನಪ್ಪಿವೆ. ಮಾರ್ಚ್ನಲ್ಲಿ 19, ಏಪ್ರಿಲ್ನಲ್ಲಿ 6, ಮೇನಲ್ಲಿ 16 ಹಾಗೂ ಈ ತಿಂಗಳಲ್ಲಿ ಇದುವರೆಗೆ 8 ಮಕ್ಕಳು ಮೃತಪಟ್ಟಿವೆ. ಆದರೆ, ಡೆಂಗ್ಯೂಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂಬುದು ವೈದ್ಯರ ಸ್ಪಷ್ಟನೆ.

ಇದು ಡೆಂಗ್ಯೂ ಅಲ್ಲ, ವೈರಾಣು ಜ್ವರ
ಸಾಮಾನ್ಯವಾಗಿ 15ರಿಂದ 20 ರೋಗಿಗಳು ಆಸ್ಪತ್ರೆ ದಾಖಲಾಗುತ್ತಾರೆ. ಆದರೆ, ಈಚೆಗೆ ವೈರಾಣು ಜ್ವರದಿಂದ ದಾಖಲಾಗುವ ಸಂಖ್ಯೆ ಹೆಚ್ಚಿದೆ. ಡೆಂಗ್ಯೂ ಜ್ವರ ಹಾಗೂ ಇತರ ಕಾಯಿಲೆಗಳಿಂದಲೂ ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ನೆರೆಯ ಜಿಲ್ಲೆಗಳಿಂದಲೂ ಬರುತ್ತಿದ್ದಾರೆ. ಹೀಗಾಗಿ, ಬೆಡ್ ಕೊರತೆ ಉಂಟಾಗಿದೆ' ಎಂದು ಆಸ್ಪತ್ರೆ ವೈದ್ಯ ರಾಜೇಂದ್ರ ಕುಮಾರ್ ಒನ್ ಇಂಡಿಯಾಗೆ ತಿಳಿಸಿದರು. 'ಡೆಂಗ್ಯೂಗೆ ಸಂಬಂಧಿಸಿದಂತೆ ಪ್ರಾರಂಭಿಕ ಹಂತದ ರಕ್ತ ಪರೀಕ್ಷೆಯನ್ನು ಇಲ್ಲಿಯೇ ಮಾಡುತ್ತಿದ್ದೇವೆ. ಎಲಿಸಾ ಪರೀಕ್ಷೆಗೆಂದು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯ ಪ್ರಯೋಗಾಲಯಕ್ಕೆ ಕಳಿಸುತ್ತಿದ್ದೇವೆ. ಸಾಮಾನ್ಯ ಜ್ವರಗಳಿಗೆ ನೀಡುವ ಚಿಕಿತ್ಸೆಯನ್ನೇ ಡೆಂಗ್ಯೂ ಜ್ವರಕ್ಕೂ ನೀಡುತ್ತೇವೆ. ಅದಕ್ಕೆಂದು ಪ್ರತ್ಯೇಕ ಚಿಕಿತ್ಸೆ ಇಲ್ಲ' ಎಂದರು.

ಆಸ್ಪತ್ರೆಯ ಬೇಜಾವಾಬ್ದಾರಿತನ: ಪೋಷಕರ ಆರೋಪ
ಆಸ್ಪತ್ರೆಯಲ್ಲಿ ಒಟ್ಟು 120 ಬೆಡ್ಗಳಿವೆ. ಅದರಲ್ಲಿ 30 ಬೆಡ್ಗಳು ನವಜಾತ ಶಿಶುಗಳಿಗೆ ಮೀಸಲಾಗಿವೆ. ಇನ್ನುಳಿದ 90 ಬೆಡ್ಗಳು ಭರ್ತಿಯಾಗಿವೆ. ಅದರಲ್ಲಿ ತುರ್ತು ನಿಗಾ ಘಟಕದಲ್ಲಿರುವ 20 ಬೆಡ್ಗಳೂ ಸೇರಿವೆ. ಒಂದೇ ಬೆಡ್ನಲ್ಲಿ 2-3 ಮಕ್ಕಳನ್ನು ಮಲಗಿಸುತ್ತಿರುವುದರಿಂದ ಒಬ್ಬರಿಂದ ಒಬ್ಬರಿಗೆ ಸೋಂಕು ಹರಡುತ್ತಿದೆ. ಆಸ್ಪತ್ರೆಯಲ್ಲಿ ಸುಮಾರು 120 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. 'ನಮಗಿರುವುದು ಒಂದೇ ಮಗು. ಆದರೆ, ಇಲ್ಲಿ ಕಾಳಜಿ ವಹಿಸಿ ಚಿಕಿತ್ಸೆ ನೀಡುತ್ತಿಲ್ಲ. ಡೆಂಗ್ಯೂ ಜ್ವರ ಇದೆ ಎಂದು ಗೊತ್ತಿದ್ದರೂ ಒಂದೇ ಬೆಡ್ನಲ್ಲಿ ಎರಡು ಮಕ್ಕಳನ್ನು ಮಲಗಿಸಿದ್ದಾರೆ. ತುಂಬಾ ಭಯ ವಾಗುತ್ತಿದೆ' ಎಂದು ಚಾಮರಾಜನಗರ ತಾಲ್ಲೂಕಿನ ಸಾವಿತ್ರಮ್ಮ ಆತಂಕ ವ್ಯಕ್ತಪಡಿಸಿದರು.

ಪರೀಕ್ಷೆ ಮಾಡಿಸುವುದರಲ್ಲಿಯೂ ವಿಳಂಬ
ಡೆಂಗ್ಯೂ ಲಕ್ಷಣ ಹೊಂದಿರುವ ರೋಗಿಯ ರಕ್ತದ ಮಾದರಿ ಯನ್ನು ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಪರೀಕ್ಷೆಗಾಗಿ ಇಲಾಖೆ ಪ್ರಯೋಗಾಲಯಕ್ಕೆ ಕಳುಹಿ ಸಬೇಕು. ಎಲಿಸಾ ಪರೀಕ್ಷೆಗೆ ಒಳಪಡಿಸಿದ ಬಳಿಕವಷ್ಟೇ ಡೆಂಗ್ಯೂ ದೃಢಪಡಿಸಿಕೊಳ್ಳಬೇಕೆಂಬ ಸೂಚನೆ ಇದೆ. ಎಲಿಸಾ ಪರೀಕ್ಷೆಯನ್ನು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ರುವ ಪ್ರಯೋಗಾಲಯದಲ್ಲಿ ಮಾತ್ರ ಮಾಡಲಾಗುತ್ತಿದೆ. ಜಿಲ್ಲೆಯ ವಿವಿಧೆಡೆಯಿಂದ ಪರೀಕ್ಷೆಗೆ ಮಾದರಿ ಕಳುಹಿಸುತ್ತಿದ್ದು ವಿಳಂಬವಾಗುತ್ತಿದೆ.

ಆತಂಕದಲ್ಲಿ ರೋಗಿಗಳ ಕುಟುಂಬ
ಇದು ರೋಗಿಗಳು, ಅವರ ಕುಟುಂಬದರಲ್ಲಿ ಆತಂಕಕ್ಕೆ ಕಾರಣವಾಗುತ್ತಿದೆ. 'ರಕ್ತ ಮಾದರಿ ಪಡೆದು ನಾಲ್ಕೈದು ದಿನಗಳ ಮೇಲೆ ವರದಿ ನೀಡುತ್ತಿದ್ದಾರೆ. ಇದರಿಂದ ಭಯ ಉಂಟಾಗುತ್ತಿದೆ' ಎಂದು ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಪೋಷಕರು ತಿಳಿಸಿದರು. 'ಡೆಂಗ್ಯೂಗೆ ಪ್ರತ್ಯೇಕ ಚಿಕಿತ್ಸೆ ಇಲ್ಲ. ವೈರಾಣು ಜ್ವರಕ್ಕೆ ನೀಡುವ ಚಿಕಿತ್ಸೆಯನ್ನು ಈ ಕಾಯಿಲೆಗೂ ನೀಡಲಾಗುತ್ತದೆ. ರಕ್ತದ ಪರೀಕ್ಷೆ ಪಾಸಿಟಿವ್ ಬಂದಾಕ್ಷಣ ಅದಕ್ಕೆ ಪ್ರತ್ಯೇಕ ಚಿಕಿತ್ಸೆ ಇರುವುದಿಲ್ಲ' ಎಂದು ಜಿಲ್ಲಾ ವೈದ್ಯಾಧಿಕಾರಿ ಬಿ.ಬಸವರಾಜು ತಿಳಿಸಿದರು. ಒಟ್ಟಾರೆ ಡೆಂಗ್ಯೂ ಜ್ವರ ಜನರಲ್ಲಿ ಆತಂಕ ಮೂಡಿಸಿರುವುದಂತೂ ನಿಜ.












Click it and Unblock the Notifications