ಮೈಸೂರಿನಲ್ಲಿ ಡೆಲ್ಟಾ ಪ್ಲಸ್ ಪ್ರಕರಣ ಖಾತ್ರಿ: ಡಿಸಿ ಬಗಾದಿ ಗೌತಮ್
ಮೈಸೂರು, ಜೂನ್ 23: ಕೊರೊನಾ ಎರಡನೇ ಅಲೆಯ ಸುಳಿಯಿಂದ ಹೊರಬರಲಾಗದೆ ಕಂಗೆಟ್ಟಿರುವ ಮೈಸೂರಿನ ಜನತೆ ಇದೀಗ ಮತ್ತೊಂದು ಮಾರಣಾಂತಿಕ ವೈರಾಣುವಿನ ಸುಳಿಗೆ ಸಿಲುಕಿದ್ದಾರೆ.
ಕೊರೊನಾದ ರೂಪಾಂತರ ಡೆಲ್ಟಾ ಪ್ಲಸ್ನ ಒಂದು ಪ್ರಕರಣ ಮೈಸೂರಿನಲ್ಲಿ ಇರುವುದು ಖಾತ್ರಿಯಾಗಿದೆ. ಈ ಕುರಿತು ಖಾತ್ರಿಪಡಿಸಿರುವ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, "ಮೈಸೂರು ಜಿಲ್ಲೆಯಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಸದ್ಯ ಅವರು ಗುಣಮುಖರಾಗಿದ್ದಾರೆ. ಸೋಂಕಿತರ ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಅವರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ,'' ಎಂದು ಸ್ಪಷ್ಟಪಡಿಸಿದರು.
"ಕಳೆದ ಏಳು ದಿನಗಳಲ್ಲಿ ಜಿಲ್ಲೆಯಿಂದ 40 ಸ್ಯಾಂಪಲ್ಸ್ ಕಳುಹಿಸಲಾಗಿದೆ. ಮೈಸೂರಿನ ಮೆಡಿಕಲ್ ಕಾಲೇಜಿನಿಂದ ಬೆಂಗಳೂರಿನ ನಿಮಾನ್ಸ್ಗೆ ಸ್ಯಾಂಪಲ್ ಕಳುಹಿಸಲಾಗಿದೆ. ಇನ್ನಷ್ಟೇ ಫಲಿತಾಂಶ ಬರಬೇಕಿದೆ,'' ಎಂದರು.

ಶೇ.3 ಮಕ್ಕಳಲ್ಲಿ ಕೊರೊನಾ ಸೋಂಕು
ಮೈಸೂರು ಜಿಲ್ಲೆಯ ಮಕ್ಕಳಲ್ಲಿ ಕೊರೊನಾ ಹೆಚ್ಚಿದೆ ಎಂಬ ವದಂತಿ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಕೆ.ಎಚ್. ಪ್ರಸಾದ್, "ಶೇಕಡ 3ರಷ್ಟು ಮಕ್ಕಳಿಗೆ ಮಾತ್ರ ಸೋಂಕು ಇದೆ. ಮಾರ್ಚ್ 2020ರಿಂದ ಜೂನ್ 2021ರವರೆಗೆ 1 ಲಕ್ಷದ 63 ಸಾವಿರ ಕೊರೊನಾ ಪ್ರಕರಣಗಳು ದಾಖಲಾಗಿದೆ. ಇದರಲ್ಲಿ 0- 10 ವರ್ಷದ ಮಕ್ಕಳಲ್ಲಿ ಶೇಕಡಾ 2ರಿಂದ 3ರಷ್ಟು ಪ್ರಮಾಣದಲ್ಲಿ ಪಾಸಿಟಿವ್ ಇದೆ. ಜೂನ್ 2021ರಲ್ಲಿ 19 ಸಾವಿರ ಪಾಸಿಟಿವ್ ಇದ್ದು, ಇದರಲ್ಲಿ 700 ಮಕ್ಕಳಲ್ಲಿ ಸೋಂಕಿಗೆ ಒಳಗಾಗಿದ್ದಾರೆ,'' ಎಂದು ತಿಳಿಸಿದ್ದಾರೆ.
"16 ತಿಂಗಳಲ್ಲಿ 0- 10 ವರ್ಷದ 9 ಮಕ್ಕಳು ಸಾವನ್ನಪ್ಪಿದ್ದು, 9 ಪ್ರಕರಣಗಳ ಮಾಹಿತಿ ಸಂಗ್ರಹಿಸಲಾಗಿದೆ. ಆ ಮಕ್ಕಳಿಗೆ ಕೋವಿಡ್ ಜೊತೆ ಬೇರೆ ಆರೋಗ್ಯದ ಸಮಸ್ಯೆ ಇತ್ತು ಎಂದಿರುವ ಅವರು, ಮೈಸೂರು ಜಿಲ್ಲೆಯಲ್ಲಿ ಮೂರನೇ ಅಲೆ ಅನ್ನುವ ಮಾಹಿತಿ ತಪ್ಪು,'' ಎಂದು ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications