ದಿನೇದಿನೇ ಹೆಚ್ಚುತ್ತಿದೆ ನೀರಲ್ಲಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ
ಮೈಸೂರು, ಜೂನ್ 8: ನೀರು ಎಂದರೆ ಮೋಜು ಮಸ್ತಿ ಎಂಬ ಭಾವನೆ ಬಹುಪಾಲು ಯುವಕರಲ್ಲಿದೆ. ಹೀಗಾಗಿಯೇ ನೀರಿನಲ್ಲಿ ಆಡಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಸಂಗಗಳೂ ದಿನೇ ದಿನೇ ನಮ್ಮ ಹೆಚ್ಚುತ್ತಿವೆ.
ಇದಕ್ಕೆ ಪೂರಕವಾಗಿ, ಕಳೆದ ಒಂದು ವಾರದಿಂದ ಮೈಸೂರು - ಮಡಿಕೇರಿ ಭಾಗದಲ್ಲಿ ಐವರು ಜಲ ಸಮಾಧಿಯಾದ ಉದಾಹರಣೆಯೂ ಇದೆ. ಅಷ್ಟೇ ಅಲ್ಲ, ಇದುವರೆಗೂ ಕಳೆದ ಎರಡು ತಿಂಗಳ ಅವಧಿಯಲ್ಲಿ ಮೈಸೂರು ಮಡಿಕೇರಿಯಲ್ಲೇ 18 ಮಂದಿ ನೀರಿನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳ ಪಾಲೇ ಹೆಚ್ಚು ಎಂಬುದು ಬೇಸರ ಸಂಗತಿ.
ಜಲಸಮಾಧಿಗೆ ಕಾರಣಗಳನ್ನು ಹುಡುಕುತ್ತಾ ಹೋದರೆ, ಹತ್ತಾರು ಉದಾಹರಣೆಗಳು ದೊರೆಯುತ್ತವೆ. ಕ್ರೇಜ್ ಗೆಂದು ನೀರಿಗೆ ಹಾರುವುದು, ಈಜು ಬರಲಿಲ್ಲವೆಂದರೂ ಪ್ರಯತ್ನ ಪಡಲು ಮುಂದಾಗುವುದು ಹಾಗೂ ಆ ನದಿ ಅಥವಾ ಕೆರೆಯ ಆಳದ ಅರಿವಿಲ್ಲದಿರುವುದು ಕೂಡ ಸಾವಿಗೆ ಪ್ರಮುಖ ಕಾರಣವೆನ್ನಬಹುದು. ನೀರಿಗಿಳಿಯುವ ಮುನ್ನ ಅನೇಕ ಕಡೆ ಎಚ್ಚರಿಕೆ ಫಲಕಗಳನ್ನು ಹಾಕಿದ್ದರೂ ಅದರ ಬಗ್ಗೆ ನಿರ್ಲಕ್ಷ್ಯ ತಾಳಿ ನೀರಿಗಿಳಿದುಬಿಡುತ್ತಾರೆ. ಇದೂ ಅವಘಡಕ್ಕೆ ಮುನ್ನುಡಿ ಬರೆದಂತೆಯೇ.
ಮತ್ತೂ ಒಂದು ಆಘಾತಕಾರಿ ವಿಷಯವೆಂದರೆ, ಘಟನೆ ನಡೆದ ಜಾಗದಲ್ಲಿನ ಸ್ಥಳೀಯರು ಹೇಳುವಂತೆ, ಮದ್ಯ ಸೇವಿಸಿ ನೀರಿಗಿಳಿಯುವವರ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿರುವುದು.

ಕೆ ಆರ್ ಎಸ್ ಹಿನ್ನೀರಿನಲ್ಲಿ ಕೂಡ ಪ್ರತಿ ವರ್ಷ ಐದಕ್ಕೂ ಹೆಚ್ಚು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಿದ್ದಾರೆ. ಕೆಆರ್ ಎಸ್ ನಲ್ಲಿ ನೀರು ಕಡಿಮೆಯಾದ ವೇಳೆ ಹಿನ್ನೀರು ಪ್ರದೇಶದಲ್ಲಿ ಸುತ್ತಮುತ್ತಲಿನ ರೈತರು ಅಲ್ಲಿನ ಮಣ್ಣನ್ನು ಅಗೆದು ತಮ್ಮ ಜಮೀನುಗಳಿಗೆ ಸಾಗಿಸುತ್ತಾರೆ. ಈ ವೇಳೆ ಅಲ್ಲಿ ಹೊಂಡಗಳ ನಿರ್ಮಾಣವಾಗುತ್ತದೆ. ನೀರು ಬಂದ ಮೇಲೆ ಹೊಂಡಗಳಿರುವುದು ಗೊತ್ತಾಗುವುದಿಲ್ಲ. ಹೀಗಾಗಿ ಅದರ ಅರಿವಿಲ್ಲದೆ ನೀರಿಗೆ ಇಳಿಯುವವರು ಮುಳುಗಿ ಸಾವನ್ನಪ್ಪುತ್ತಾರೆ ಎನ್ನುತ್ತಾರೆ ಸ್ಥಳೀಯರು.
ಮಡಿಕೇರಿಯ ಚಿಕ್ಲಿಹೊಳೆ, ನಿಸರ್ಗ ಧಾಮ, ಸಣ್ಣ- ಪುಟ್ಟ ಜಲಪಾತಗಳು ಸೇರಿದಂತೆ ಇನ್ನಿತರ ಕಡೆಗಳಲ್ಲಿ ಎಚ್ಚರಿಕೆ ಫಲಕ ಅಳವಡಿಸಿದ್ದರೂ ಆಳದ ಅರಿವಿಲ್ಲದೆ ಇಳಿದು ನೀರಿನಲ್ಲಿ ಮುಳುಗುತ್ತಾರೆ. ಸುಳಿ ಇರುವ ಪ್ರದೇಶಗಳ ಬಗ್ಗೆ ಮಾಹಿತಿ ನೀಡಿದರೂ, ಸ್ಥಳೀಯ ವ್ಯಾಪಾರಿಗಳು ಎಚ್ಚರಿಕೆ ನೀಡಿದರೂ ಅವರ ಮಾತನ್ನು ಲೆಕ್ಕಿಸಿದೇ ಈಜುತ್ತೇವೆಂದು ಹೋಗಿ ಸಾವಿಗೀಡಾಗುವವರೇ ಅನೇಕರು.
ಆದರೆ ಈ ಸನ್ನಿವೇಶಗಳನ್ನು ತಡೆಯಲು ಸಾಧ್ಯವಿದೆ. ಪ್ರಜ್ಞಾವಂತ ನಾಗರೀಕರು ಈ ಕುರಿತು ಗಂಭೀರವಾಗಿ ಚಿಂತಿಸುವ ಅಗತ್ಯವೂ ಇದೆ. ಜೊತೆಗೆ ಈ ವಿಷಯದಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸವೂ ಆಗಬೇಕಿದೆ.












Click it and Unblock the Notifications