ಉಪ ಚುನಾವಣೆ: ಮಾಜಿ ಸ್ಪೀಕರ್ ಕೃಷ್ಣ ಬೆಂಬಲ ಕೋರಿದ ಡಿಸಿಎಂ
ಮೈಸೂರು, ನವೆಂಬರ್ 22: ಪ್ರತಿಷ್ಠೆಯ ಕಣವಾಗಿರುವ ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ನಾಯಕರು, ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಅವರ ಬೆಂಬಲ ಪಡೆಯಲು ಮುಂದಾಗಿದ್ದಾರೆ.
ಕೆಆರ್ ಪೇಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಮೈಸೂರಿನ ಕುವೆಂಪು ನಗರದಲ್ಲಿರುವ ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿದ ಡಿಸಿಎಂ ಅಶ್ವಥ್ ನಾರಾಯಣ್, ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದರು. ಅಲ್ಲದೇ ಕೆಆರ್ ಪೇಟೆ ಉಪ ಚುನಾವಣೆಯಲ್ಲಿ ಅನರ್ಹ ಶಾಸಕ ನಾರಾಯಣಗೌಡ ಅವರಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, "ನಾವು ಒಳ್ಳೆಯ ಉದ್ದೇಶ ಇಟ್ಟುಕೊಂಡು ಚುನಾವಣೆ ನಡೆಸುತ್ತಿದ್ದೇವೆ. ನಮ್ಮ ಪರ ಸಹಾಯ ಮಾಡಿ" ಎಂದು ಮನವಿ ಮಾಡಿಕೊಂಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸ್ಪಿಕರ್ ಕೃಷ್ಣ, "ನಾನು ಕಳೆದ ಮೂರು ವರ್ಷದಿಂದ ತಟಸ್ಥವಾಗಿದ್ದೇನೆ. ನಾನು ಚುನಾವಣೆಗೆ ಬರುವುದಿಲ್ಲ. ಒಳ್ಳೆ ವ್ಯಕ್ತಿಗಳಿಗೆ ತಡವಾಗಿಯಾದರೂ ದೇವರು ಕೈ ಹಿಡಿಯುತ್ತಾನೆ" ಎಂದರು.

ಇದೇ ವೇಳೆ ಅಶ್ವಥ್ ನಾರಾಯಣ್ ಅವರಿಗೆ ರಾಜಕೀಯವಾಗಿ ಸಲಹೆ ನೀಡಿದ ಕೆ.ಆರ್ ಪೇಟೆ ಕೃಷ್ಣ, "ಕ್ಷೇತ್ರದಲ್ಲಿ ನೀವು ಮಾಡಿರುವ ಕೆಲಸ ನೋಡಿದೆ, ತುಂಬಾ ಚೆನ್ನಾಗಿದೆ. ದೇವರು ಒಳ್ಳೆಯದು ಮಾಡಲಿ, ಕ್ಷೇತ್ರದ ಜನರು ಒಳ್ಳೆಯವರು. ಆದರೆ ಜಾತಿ, ಹಣದ ಮುಂದೆ ಯಾರು ಏನೂ ಮಾಡಲು ಸಾಧ್ಯವಿಲ್ಲ" ಎಂದು ವಿಷಾದ ವ್ಯಕ್ತಪಡಿಸಿದರು.












Click it and Unblock the Notifications