11 ತಿಂಗಳ ಬಳಿಕ ತೆರೆದ ನಂಜುಂಡೇಶ್ವರ ದಾಸೋಹ ಭವನ
ಮೈಸೂರು, ಫೆಬ್ರವರಿ 15; ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ದಾಸೋಹ ಭವನ 11 ತಿಂಗಳ ಬಳಿಕ ಭಾನುವಾರ ಬಾಗಿಲನ್ನು ತೆರೆದಿದೆ. ಕೋವಿಡ್ ಲಾಕ್ ಡೌನ್ ಘೋಷಣೆಯಾದ ಬಳಿಕ ದಾಸೋಹ ಭವನವನ್ನು ಮುಚ್ಚಲಾಗಿತ್ತು.
2020ರ ಮಾರ್ಚ್ ತಿಂಗಳಿನಲ್ಲಿ ಕಾಣಿಸಿಕೊಂಡ ಕೊರೊನಾ ಸಾಂಕ್ರಮಿಕ ರೋಗದ ಕಾರಣದಿಂದ ದೇಶದ ಎಲ್ಲಾ ದೇವಾಲಯಗಳನ್ನು ಬಂದ್ ಮಾಡಲಾಗಿತ್ತು. ನಂತರ ಹಲವಾರು ನಿರ್ಬಂಧಗಳನ್ನು ವಿಧಿಸಿ ಭಕ್ತರಿಗೆ ಪೂಜೆಗೆ ಅವಕಾಶ ನೀಡಲಾಗಿತ್ತು.
ಆದರೆ, ಅನೇಕ ದೇವಾಲಯಗಳಲ್ಲಿ ಅನ್ನ ದಾಸೋಹವು ಆರಂಭಗೊಂಡಿರಲಿಲ್ಲ. ಮೈಸೂರು ಸಮೀಪದ ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ದಾಸೋಹ ಭವನವೂ ಸಹ 11 ತಿಂಗಳ ಬಳಿಕ ಭಾನುವಾರ ಬಾಗಿಲನ್ನು ತೆರೆದಿದೆ.

ರಾಜ್ಯದ ಎಲ್ಲಾ ದೇವಾಲಯಗಳ ದಾಸೋಹ ಭವನಗಳು ತೆರೆಯುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದ ಬಳಿಕ ನಂಜುಂಡೇಶ್ವರ ದೇವಾಲಯದ ಸಮೀಪವಿರುವ ದಾಸೋಹ ಭವನ ಭಕ್ತಾದಿಗಳಿಗೆ ಮುಕ್ತವಾಗಿದೆ.
ಬರೋಬ್ಬರಿ 11 ತಿಂಗಳ ಬಳಿಕ ದಾಸೋಹ ಭವನದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದೆ. ಇಷ್ಟು ದಿನ ದೇವಾಲಯಕ್ಕೆ ಆಗಮಿಸುತಿದ್ದ ಭಕ್ತರು ಹೋಟೆಲ್ಗಳಿಗೆ ತೆರಳಿ ಹಣ ನೀಡಿ ಊಟ ಮಾಡಬೇಕಾಗಿತ್ತು. ಇದೀಗ ದೇವಾಲಯದಲ್ಲಿಯೇ ಪ್ರಸಾದ ವ್ಯವಸ್ಥೆ ಮತ್ತೆ ಮುಂದುವರೆದಿದೆ. ಇದರಿಂದಾಗಿ ಭಕ್ತರು ಸಹ ಸಂತಸಗೊಂಡಿದ್ದಾರೆ.
ಮೈಸೂರಿನ ನಂಜನಗೂಡು ದೇವಾಲಯಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. 2020ರ ಡಿಸೆಂಬರ್ ವರದಿಯಂತೆ ನಂಜನಗೂಡು ಶ್ರೀಕಂಠೇಶ್ವರ ದೇವಾಲಯದಲ್ಲಿ 12.6 ಲಕ್ಷ ರೂ. ಆದಾಯ ಸಂಗ್ರಹವಾಗಿತ್ತು. 2019ರ ಡಿಸೆಂಬರ್ ತನಕ 20.8 ಕೋಟಿ ಆದಾಯ ಬಂದಿತ್ತು.











Click it and Unblock the Notifications