ಗಜಪಯಣಕ್ಕೆ ಚಾಲನೆ, ಸಂಪ್ರದಾಯದ ಬಗ್ಗೆ ಎಚ್ ವಿಶ್ವನಾಥ್ ಹೇಳಿದ್ದು ಕೇಳಿ
ಮೈಸೂರು, ಆಗಸ್ಟ್ 30: ಮೈಸೂರು ದಸರಾ ಮಹೋತ್ಸವದ ಮುನ್ನುಡಿ ಆಗಿರುವ ಗಜಪಯಣಕ್ಕೆ ಈ ಹಿಂದಿನಂತೆಯೇ ಹುಣಸೂರಿನ ವೀರನಹೊಸಹಳ್ಳಿ ಗೇಟ್ ಬಳಿಯಿಂದಲೇ ನೀಡಲಾಗುತ್ತದೆ ಎಂದು ಶಾಸಕ ಎಚ್.ವಿಶ್ವನಾಥ್ ಹೇಳಿದ್ದಾರೆ.
ನಾಗರಹೊಳೆ ರಾಷ್ಟ್ರಿಯ ಉದ್ಯಾನವನದ ವೀರನಹೊಸಹಳ್ಳಿ ವಲಯಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ನಾನು ಈ ಹಿಂದೆ ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ನಿಂತು ಹೋಗಿದ್ದ ಗಜಪಯಣವನ್ನು ಮತ್ತೆ ಆರಂಭಿಸಿ ವೀರನಹೊಸಹಳ್ಳಿ ಗೇಟ್ ಬಳಿಯಿಂದ ಚಾಲನೆ ನೀಡುವ ಸಂಪ್ರದಾಯವನ್ನು ತಂದಿದ್ದೆ ಎಂದು ಹೇಳಿದರು.
ಆದರೆ, ನಂತರದ ದಿನಗಳಲ್ಲಿ ಕಾನೂನು ನೆಪವೊಡ್ಡಿ ಗಜಪಯಣವನ್ನು ವೀರನಹೊಸಹಳ್ಳಿಯಿಂದ ನಾಗಪುರ ಗೇಟ್ ಗೆ ಸ್ಥಳಾಂತರಿಸಲಾಯಿತು. ಈ ಬಾರಿ ಮತ್ತೆ ಮೊದಲಿನಂತೆ ವೀರನಹೊಸಹಳ್ಳಿಯಿಂದಲೇ ಚಾಲನೆ ನೀಡಲಾಗುತ್ತದೆ ಎಂದರು.

ಗಜಪಯಣವು ಸೆಪ್ಟೆಂಬರ್ 2ರಂದು ಬೆಳಗ್ಗೆ 9 ಗಂಟೆಗೆ ನಡೆಯಲಿದ್ದು, ಈ ಸಂಬಂಧ ಪೂರ್ವಸಿದ್ಧತೆಯನ್ನು ಶಾಸಕರು ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ರಾಜ-ಮಹಾರಾಜರ ಕಾಲದಲ್ಲಿ ದಸರಾ ಮಹೋತ್ಸವ ಮೆರವಣಿಗೆಯ ಕೇಂದ್ರ ಬಿಂದುಗಳಾದ ಆನೆಗಳನ್ನು ಮೈಸೂರಿಗೆ ಕರೆತರುವ ಮುನ್ನ ಖುದ್ದು ರಾಜರೇ ನಾಗರಹೊಳೆ ಕಾಡಿಗೆ ತೆರಳಿ ಆದಿವಾಸಿ ಸಮುದಾಯದ ಸಂಪ್ರಾದಾಯಗಳನ್ನು ಪಾಲಿಸಿ ಮಾವುತರಿಗೆ ಗೌರವಪೂರ್ಣ ಆಹ್ವಾನ ನೀಡಿ ಆನೆಗಳನ್ನು ಬರಮಾಡಿಕೊಳ್ಳುತ್ತಿದ್ದರು ಎಂದರು.
ಇತ್ತೀಚೆಗಿನ ದಿನಗಳಲ್ಲಿ ಕಾನೂನು ನೆಪವೊಡ್ಡಿ ಸಂಪ್ರದಾಯಗಳನ್ನು ಮೂಲೆಗುಂಪು ಮಾಡುವುದರೊಂದಿಗೆ ಬೇಕಾಬಿಟ್ಟಿ ಆಚರಣೆ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದ ಅವರು, ನಮ್ಮ ನಾಡಿನ ಸಂಸ್ಕೃತಿಯನ್ನು ಪಸರಿಸುವ ಸಲುವಾಗಿ ಯುವ ಜನಾಂಗದ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವ ಮೂಲಕ ಯುವ ದಸರಾವನ್ನು ಮಾದರಿಯಾಗಿ ಆಚರಿಸಲು ಸಿದ್ಧತೆ ಮಾಡಿಕೊಳುವಂತೆ ಇದೇ ವೇಳೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿ ವರ್ಷವೂ ವಿಐಪಿ ಕಾರ್ಡ್ ಹಂಚಿಕೆಯಲ್ಲಿ ಕೆಲ ಅಧಿಕಾರಿಗಳ ಎಡವಟ್ಟು ಎದ್ದು ಕಾಣುತ್ತಿದ್ದು, ಅದರ ಬಿಸಿ ಮುಖ್ಯಮಂತ್ರಿಗಳಿಗೂ ತಟ್ಟಿದ ಉದಾಹರಣೆ ಇರುವುದರಿಂದ ಈ ಬಾರಿ ಶಿಸ್ತುಬದ್ಧವಾಗಿ ಕಾರ್ಡ್ ಗಳನ್ನು ಹಂಚುವ ಮೂಲಕ ಪ್ರವಾಸಿಗರಿಗೆ ಆದ್ಯತೆ ನೀಡಬೇಕೆಂದು ಸೂಚಿಸಿದ್ದಾರೆ.












Click it and Unblock the Notifications