ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಆನೆಗಳ ದಿನಚರಿ ಹೇಗಿದೆ ನೋಡಿ...
ಮೈಸೂರು, ಸೆಪ್ಟೆಂಬರ್ .10: ನಾಡಹಬ್ಬ ದಸರೆಗೆ ಮೊದಲ ತಂಡದ ಆನೆಗಳು ಆಗಮಿಸಿದ್ದು, ನಿಧಾನವಾಗಿ ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳಲು ಪ್ರಾರಂಭಿಸಿವೆ. ಈ 6 ಆನೆಗಳ ಜತೆ ಮಾವುತ, ಕಾವಾಡಿ ಸೇರಿ 12 ಕುಟುಂಬಗಳು ತಾತ್ಕಾಲಿಕ ಟೆಂಟ್ ಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ನಿನ್ನೆ ಅಮಾವಾಸ್ಯೆಯ ಕಾರಣ ತಾಲೀಮಿನಿಂದ ದೂರ ಉಳಿದಿದ್ದ ಗಜಪಡೆ ರಿಲ್ಯಾಕ್ಸ್ ಮೂಡಿನಲ್ಲಿತ್ತು. ಇನ್ನು ಇಂದು ಸೂರ್ಯ ನೆತ್ತಿಗೆ ಬರುತ್ತಿದ್ದಂತೆ ಆನೆಗಳನ್ನು ಕರೆದ್ಯೊಯ್ದ ಮಾವುತರು ಹಾಗೂ ಕಾವಾಡಿಗಳು ಅವುಗಳಿಗೆ ತಣ್ಣನೆಯ ನೀರಿನ ಮಜ್ಜನ ಮಾಡಿಸಿದರು. ಬಿಸಿಲಿನ ಬೇಗೆಯಿಂದ ಬಳಲಿದ್ದ ಆನೆಗಳು ಆನಂದದಿಂದ ಮಜ್ಜನಕ್ಕೆ ಮೈಯೊಡ್ಡಿದ್ದವು.
ಇನ್ನು ಪ್ರತಿದಿನ ಬೆಳಗ್ಗೆ ಸಂಜೆ ಆನೆಗಳಿಗೆ ತಾಲೀಮು ನಡೆಯುತ್ತಿದೆ. ಪ್ರತಿದಿನ ಅರಮನೆಯಿಂದ ಕೆ.ಆರ್. ವೃತ್ತ ಸಯ್ಯಾಜಿರಾವ್ ರಸ್ತೆ ತಿಲಕ್ ನಗರ ಬಂಬೂಬಜಾರ್, ಹೈವೆ ವೃತ್ತದ ಮೂಲಕ ಬನ್ನಿಮಂಟಪ ತಲುಪುತ್ತಿವೆ.. ಮೈಸೂರಿನ ಒಳಗೆ 40 ದಿನ ಗಜಪಡೆಯೂ ವಾಕಿಂಗ್ ಮಾಡುತ್ತಿದೆ.
ದಸರಾ ತಾಲೀಮು ರೂಪದ ವಾಕಿಂಗ್ ಅನ್ನು ಗಜಪಡೆ ಬೆಳಗ್ಗೆ ಮತ್ತು ಸಂಜೆ ಮಾಡಲಿವೆ. ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆಯ ವಾಕಿಂಗ್ ಪ್ರತಿದಿನ ಅರಮನೆಯ ಆವರಣದಿಂದ ಆರಂಭವಾಗುತ್ತದೆ. ಆನೆಗಳಿಗೆ ಜನರ ಗದ್ದಲ, ವಾಹನಗಳ ಧ್ವನಿ ಮತ್ತು ರಸ್ತೆಯ ಪರಿಚಯ ಮಾಡುವ ಉದ್ದೇಶದಿಂದ ಈ ತಾಲೀಮು ಮಾಡಿಸಲಾಗುತ್ತದೆ.
ಅಂದಹಾಗೆ ಈಗ ದಸರಾ ಆನೆಗಳು ಏನು ಮಾಡುತ್ತಿವೆ? ತಾಲೀಮು ಹೇಗಿದೆ? ದಿನಚರಿ ಏನು? ಎಂದು ತಿಳಿದುಕೊಳ್ಳುವ ಕುತೂಹಲವಿದ್ದರೆ ಒಮ್ಮೆ ಈ ಲೇಖನ ಓದಿ...

ಸುಸ್ತಾಗದಂತೆ ನೋಡಿಕೊಳ್ಳುವುದು ಮುಖ್ಯ
ಕಾಡಿನಲ್ಲಿ ಓಡಾಡುವ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ನಡೆಯುವುದನ್ನು ಅಭ್ಯಾಸ ಮಾಡಿಸುವುದು ಈ ತಾಲೀಮಿನ ಉದ್ದೇಶವಾಗಿದೆ. ತಾಲೀಮು ಮುಗಿದ ನಂತರ ಆನೆಗಳಿಗೆ ಪೌಷ್ಠಿಕ ಆಹಾರ ನೀಡಿ ಅವು ಸದೃಢವಾಗಿರುವಂತೆ ನೋಡಿಕೊಳ್ಳಲಾಗುತ್ತದೆ.
ಯಾವುದೇ ಹಂತದಲ್ಲೂ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ಸಾಗಿ ಸುಸ್ತಾಗದಂತೆ ನೋಡಿಕೊಳ್ಳುವುದು ಅತಿ ಮುಖ್ಯವಾಗಿದೆ.

ತಾಲೀಮು ಶುರು
ಅರಮನೆ ಆವರಣದಲ್ಲಿ ಬಿಡಾರ ಹೂಡಿರುವ ಮಾವುತರ ಕುಟುಂಬಗಳ ಚಟುವಟಿಕೆಗಳೆಲ್ಲವೂ ಇಲ್ಲಿ ಸರಾಗವಾಗಿ ನಡೆಯುತ್ತಿವೆ. ಅಗತ್ಯ ರೀತಿಯ ಮೂಲಸೌಕರ್ಯಗಳನ್ನು ಕಲ್ಪಿಸಿದೆ. ಮಕ್ಕಳಿಗೆ ಬೇಕಾದ ಶಾಲೆ, ವೈದ್ಯಕೀಯ ಆಸ್ಪತ್ರೆ, ವಿಶಾಲವಾದ ಊಟದ ಹಾಲ್ ಸಿದ್ಧಗೊಂಡಿದೆ.
ಆದರೆ, ಮೊದಲ ತಂಡದಲ್ಲಿ ಮಕ್ಕಳ ಸಂಖ್ಯೆ ಇಲ್ಲವಾದ್ದರಿಂದ ಟೆಂಟ್ ಶಾಲೆಯ ಬೀಗವಿನ್ನೂ ಕಳಚಿಲ್ಲ. ಮೊದಲನೇ ತಂಡದ ಆನೆಗಳಿಗೆ ಬೇಕಾದ ಊಟೋಪಚಾರಗಳು ನಡೆಯುತ್ತಿದ್ದು , ದಸರಾ ಮೆರವಣಿಗೆ ಸಾಗುವ ಜಾಗದಲ್ಲಿ ತಾಲೀಮು ಶುರು ಮಾಡಿವೆ.

ವಿಟಮಿನ್ ಇಂಜೆಕ್ಷನ್, ಮಿನರಲ್ಸ್
ಇಲ್ಲಿಗೆ ಬಂದ ಆನೆಗಳ ಆರೋಗ್ಯ ಉತ್ತಮವಾಗಿದೆ. ಅವುಗಳಿಗೆ ಜಂತುಹುಳ ಮಾತ್ರೆಗಳನ್ನು ನೀಡಿದ್ದು, ಈ ಮೂಲಕ ಅವುಗಳು ಆಹಾರ ಸೇವನೆ ಉತ್ತಮವಾದರೆ ಇದರಿಂದ ಆನೆಗಳು ಮೈ ತುಂಬಿಕೊಳ್ಳುತ್ತವೆ.
ಆನೆಗಳಿಗೆ ತಾಲೀಮಿನ ಮುಂಚೆ ಮತ್ತು ನಂತರ ವಿಶೇಷವಾದ ಬೇಯಿಸಿದ ರಾಗಿಮುದ್ದೆ, ಹೆಸರು ಕಾಳು, ಉದ್ದು, ಗೋಧಿ, ತರಕಾರಿ, ಭತ್ತ, ಹಿಂಡಿ, ತೆಂಗಿನಕಾಯಿ, ಸೊಪ್ಪು, ಹುಲ್ಲನ್ನು ನೀಡಲಾಗುತ್ತಿದೆ. ಈ ಆಹಾರಗಳಿಂದ ಆನೆಗಳ ತೂಕ ವೃದ್ಧಿಸುತ್ತಿದೆ. ಅಗತ್ಯಬಿದ್ದರೆ ವಿಟಮಿನ್ ಇಂಜೆಕ್ಷನ್, ಮಿನರಲ್ಸ್ ಗಳನ್ನು ಕೊಡಲಾಗುವುದು.

ಎರಡನೇ ತಂಡ ಬರುತ್ತಿದೆ
ಅಂಬಾರಿ ಆನೆಗಳಾದ ಅರ್ಜುನ, ಬಲರಾಮ, ಅಭಿ ಮನ್ಯು ಆನೆಗಳ ಮೇಲೆ ಹೆಚ್ಚಿನ ಗಮನವಹಿಸುತ್ತೇವೆ ಎಂದು ಪಶುವೈದ್ಯಾಧಿಕಾರಿ ಡಾ.ಡಿ.ಎನ್.ನಾಗರಾಜ್ ಹೇಳಿದರು.
ಮುಂದಿನ ವಾರದಲ್ಲಿ ಎರಡನೇ ತಂಡವು ಒಳ್ಳೆ ಸಮಯ ನೋಡಿ ಆಗಮಿಸಲಿದ್ದು, ಅದಕ್ಕೆ ಬೇಕಾದ ವ್ಯವಸ್ಥೆಗಳೆಲ್ಲ ಮುಂದಿನ ಎರಡು, ಮೂರು ದಿನಗಳಲ್ಲಿ ಆರಂಭಗೊಳ್ಳಲಿವೆ. ಟೆಂಟ್ ಶಾಲೆಯು ಆ ಮಕ್ಕಳು ಬಂದ ನಂತರ ತನ್ನ ಕಾರ್ಯ ಪ್ರಾರಂಭಿಸಲಿದ್ದು, ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎಂದರು.












Click it and Unblock the Notifications