Mysuru Dasara: ದಸರಾ ಆನೆಗಳ ಪಾದ ಪರೀಕ್ಷೆ; ಜಂಬೂ ಸವಾರಿಗೆ ತಾಲೀಮು ಆರಂಭ
ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದ್ದು, ಮೊದಲ ಹಂತದಲ್ಲಿ ಅಭಿಮನ್ಯು ನೇತೃತ್ವದಲ್ಲಿ ಈಗಾಗಲೇ 9 ಆನೆಗಳು ಅರಮನೆ ಆವರಣದಲ್ಲಿ ಬೀಡುಬಿಟ್ಟಿವೆ. ಈ ನಡುವೆ ತಾಲೀಮು ನಡೆಸುತ್ತಿರುವ ಆನೆಗಳ ಪಾದದಲ್ಲಿ ಲೋಹದ ವಸ್ತುಗಳು ಸೇರಿರುವ ಬಗ್ಗೆ ಪರೀಕ್ಷೆ ನಡೆಸಲಾಯಿತು. ಆನೆಗಳ ತೂಕ ಪರೀಕ್ಷೆ ಮಾಡಿದ ಬಳಿಕ, ತಾಲೀಮಿಗೆ ಸಜ್ಜಾಗುತ್ತಿದ್ದು, ಅಂಬಾರಿ ಹೊರಲು ಎಲ್ಲಾ ರೀತಿಯಲ್ಲಿ ಸಜ್ಜುಗೊಳಿಸಲಾಗುತ್ತಿದೆ.
ನಿತ್ಯವೂ ಬೆಳಗ್ಗೆ ಮತ್ತು ಸಂಜೆ ಅರಮನೆ ಆವರಣದಿಂದ ಆಯುರ್ವೇದ ವೃತ್ತ ಇಲ್ಲವೇ ಹೈವೆ ವೃತ್ತದವರೆಗೆ ದಸರಾ ಆನೆಗಳಿಗೆ ತಾಲೀಮು ನಡೆಸಲಾಗುತ್ತಿದೆ. ಬೆಳಗ್ಗೆ 2.5 ಕಿ.ಮೀ. ಹಾಗೂ ಸಂಜೆ 4.1 ಕಿ.ಮೀ. ವರೆಗೆ ತಾಲೀಮು ನಡೆಸಲಾಗುತ್ತಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಮೆಟಲ್ ಡಿಟೆಕ್ಟರ್ ಮೂಲಕ ಎಲ್ಲಾ ಆನೆಗಳ ಪಾದವನ್ನು ಪರೀಕ್ಷೆ ಮಾಡಲಾಯಿತು. ಆದರೆ, ಯಾವುದೇ ಲೋಹದ ವಸ್ತುಗಳು ಪತ್ತೆಯಾಗಿಲ್ಲ.

ಗಜಪಡೆಗೆ ಭಕ್ತಿ ಸಮರ್ಪಣೆ
ಪ್ರತಿದಿನವೂ ಸಯ್ಯಾಜಿರಾವ್ ರಸ್ತೆಯಲ್ಲಿ ಬೆಳಗ್ಗೆ ದಸರಾ ಗಜಪಡೆ ಆಗಮಿಸುತ್ತಿದ್ದಂತೆ ವ್ಯಾಪಾರಿಗಳು ಗಜಪಡೆಗೆ ನಮಿಸುವ ಮೂಲಕ ಭಕ್ತಿ ಪ್ರದರ್ಶಿಸುತ್ತಿದ್ದು, ಹೂವಿನ ವ್ಯಾಪಾರಿಗಳು ಎಲ್ಲಾ ಆನೆಗಳಿಗೂ ಹೂವು ಸಮರ್ಪಿಸಿದರು. ಅಭಿಮನ್ಯುಗೆ ತುಳಸಿ ಹಾರವನ್ನು ಹಾಕಿದರು. ಕಾಲು ನೋವಿನ ಬಾಧೆಗೆ ಒಳಗಾಗಿದ್ದ ಕಂಜನ್ ಆನೆ ಚೇತರಿಸಿಕೊಳ್ಳುತ್ತಿದ್ದರೂ ವಿಶ್ರಾಂತಿ ನೀಡಲಾಯಿತು.
ಮುಂಚೂಣಿಯಲ್ಲಿ ಸಾಗಿದ ಏಕಲವ್ಯ
ಕೆಲಕಾಲ ವಿಶ್ರಾಂತಿ ನೀಡಿದ ಬಳಿಕ ಅರಮನೆಗೆ ವಾಪಸಾಗುವ ವೇಳೆ ಹೊಸ ಆನೆ ಏಕಲವ್ಯನಿಗೆ ಗಜಪಡೆಯ ತಾಲೀಮಿನ ನಾಯಕತ್ವ ನೀಡಲಾಯಿತು. ಕಳೆದ ಆರು ದಿನಗಳಿಂದ ಹಿರಿಯ ಆನೆಗಳನ್ನು ಹಿಂಬಾಲಿಸುತ್ತಿದ್ದ ಏಕಲವ್ಯ ಅರಣ್ಯಾಧಿಕಾರಿಗಳು ಮಾಡಿದ ಪ್ರಯೋಗಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿತು. ತಾನೇ ಮುಂದೆ ಸಾಗುವ ಮೂಲಕ ಭವಿಷ್ಯದಲ್ಲಿ ಅಂಬಾರಿ ಆನೆಯಾಗುವ ಭರವಸೆ ಮೂಡಿಸಿತು
ಈವರೆಗೆ ತಾಲೀಮು ಹೊರಡುವ ಆನೆಗಳ ಮುಂಭಾಗದಲ್ಲಿ ಲೋಹದ ವಸ್ತುಗಳನ್ನು ಸೆಳೆದುಕೊಳ್ಳುವ ಆಯಸ್ಕಾಂತವಿರುವ ವಾಹನ ತೆರಳುತ್ತಿತ್ತು. ಇದೇ ಮೊದಲ ಬಾರಿಗೆ ಲೋಹದ ವಸ್ತುಗಳನ್ನು ಪತ್ತೆ ಮಾಡುವ ಉಪಕರಣವನ್ನು ಖರೀದಿಸಿ ಅವುಗಳ ಸಹಾಯದಿಂದ ಎಲ್ಲಾ ಆನೆಗಳ ಪಾದದಲ್ಲಿ ಯಾವುದಾದರೂ ಲೋಹ ಸೇರಿದೆಯೇ ಎಂಬುದನ್ನು ಪರೀಕ್ಷಿಸಲಾಯಿತು. ಇನ್ನು ಮುಂದೆ ಪ್ರತಿದಿನ ತಾಲೀಮು ಮುಕ್ತಾಯ ಗೊಂಡ ಬಳಿಕ ಈ ಪರೀಕ್ಷೆ ನಡೆಸಲಾಗುವುದು ಎಂದು ಡಿಸಿಎ ಐ.ಬಿ.ಪ್ರಭುಗೌಡ ತಿಳಿಸಿದ್ದಾರೆ.
ಈ ಬಾರಿ ಅದ್ಧೂರಿಯಾಗಿ ಮೈಸೂರು ದಸರಾ ಆಚರಣೆಗೆ ಸರ್ಕಾರ ನಿರ್ಧಾರ ಮಾಡಿದ್ದು, ಎಲ್ಲಾ ಸಿದ್ಧತೆ ಆರಂಭವಾಗಿದೆ.












Click it and Unblock the Notifications