ಮೈಸೂರು: ಹುಲಿ ಹುಡುಕಾಟಕ್ಕೆ ಸಾಕಾನೆ ಅಭಿಮನ್ಯು ಬಳಕೆ!
ಮೈಸೂರು, ಜನವರಿ 5: ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಭಯ ಹುಟ್ಟಿಸಿರುವ ಹುಲಿಯನ್ನು ಸೆರೆಹಿಡಿಯಲು ಕಾರ್ಯಾಚರಣೆ ಮುಂದುವರೆದಿದೆ.
ಹುಲಿ ಸಿಗದ ಕಾರಣ ಈ ವ್ಯಾಪ್ತಿಯ ರೈತರು ಸೇರಿದಂತೆ ಸಾರ್ವಜನಿಕರು ಭಯಭೀತರಾಗಿದ್ದು, ಶೀಘ್ರ ಹುಲಿಯನ್ನು ಸೆರೆಹಿಡಿಯುವಂತೆ ಆಗ್ರಹಿಸಿದ್ದಾರೆ. ಇದರಿಂದ ಹುಲಿಯನ್ನು ಸೆರೆ ಹಿಡಿಯಲು ಸಾಕಾನೆ ಅಭಿಮನ್ಯುವನ್ನು ಸ್ಥಳಕ್ಕೆ ಕರೆತರಲಾಗಿದೆ.
ಕಳೆದೊಂದು ವಾರದಿಂದ ಹುಲಿಯನ್ನು ಸೆರೆಹಿಡಿಯಲು ಸಾಕಾನೆಗಳ ಸಹಾಯದಿಂದ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ.

ಕಾಡಿನೊಳಗೆ ಹೋಗಲು ಸಾಕಾನೆ ಅರ್ಜುನ ಹಿಂದೇಟು ಹಾಕುತ್ತಿರುವುದರಿಂದ ಇದೀಗ ಅಭಿಮನ್ಯುವನ್ನು ಕರೆಯಿಸಿಕೊಳ್ಳಲಾಗಿದ್ದು, ಇನ್ನಾದರೂ ಹುಲಿ ಸಿಗಬಹುದೆಂಬ ನಿರೀಕ್ಷೆಯಲ್ಲಿ ಕಾರ್ಯಾಚರಣೆ ತಂಡವಿದೆ.
ಸದ್ಯ ನಾಗರಹೊಳೆ ವ್ಯಾಪ್ತಿಯ ಸಿಎಫ್ ಮಣಿಕಂಠ, ಎಸಿಎಫ್ ಪೂವಯ್ಯ, ಆರ್ಎಫ್ಓ ವಿನಯ್, ವನ್ಯಜೀವಿ ವಾರ್ಡನ್ ಕೃತಿಕಾ, ಎಸ್ಟಿಪಿಎಫ್ ಡಾ.ಮುಜೀಬ್, ಎಸ್ಟಿಪಿಎಫ್ ಸಿಬ್ಬಂದಿ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಹುಲಿಯ ಹುಡುಕಾಟ ನಡೆಸುತ್ತಲೇ ಇದ್ದಾರೆ.

ಕಳೆದ ಮೂರು ತಿಂಗಳಿನಿಂದ ಅಡ್ಡಾಡುತ್ತಲೇ ಇರುವ ಹುಲಿ ಜಾನುವಾರುಗಳನ್ನು ಹೊಂಚು ಹಾಕಿ ಹಿಡಿದು ತಿನ್ನುತ್ತಿದೆ. ಹೀಗಾಗಿ ಇದನ್ನು ಸೆರೆ ಹಿಡಿಯುವುದು ಅನಿವಾರ್ಯವಾಗಿದೆ. ಆದ್ದರಿಂದ ಹುಲಿಯನ್ನು ಸೆರೆಹಿಡಿಯುವವರೆಗೂ ಕಾರ್ಯಾಚರಣೆ ಸ್ಥಗಿತಗೊಳಿಸುವ ಲಕ್ಷಣಗಳು ಕಾಣುತ್ತಿಲ್ಲ.












Click it and Unblock the Notifications