ಮಾವುತರಿಗೆ ಸ್ಪೆಷಲ್ ಊಟ ಬಡಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಮೈಸೂರು, ಸೆಪ್ಟೆಂಬರ್. 23: ಚಾಲೆಂಜಿಂಗ್ ಸ್ಟಾರ್ ದರ್ಶನ್ ದಸರಾ ಗಜಪಡೆಗೆ ಹಾಗೂ ಮಾವುತ, ಕಾವಾಡಿಗಳಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಿ ಸ್ವತಃ ಉಣಬಡಿಸಿದರು.
ದರ್ಶನ್ ಜೊತೆ ಸೃಜನ್ ಲೋಕೇಶ್, ಪ್ರಜ್ವಲ್ ದೇವರಾಜ್, ಹಾಸ್ಯ ನಟರಾದ ವಿಶ್ವ, ಮಂಡ್ಯ ರಮೇಶ್ ಸೇರಿದಂತೆ ಹಲವು ನಟರು ಇಂದು ಅರಮನೆ ಆವರಣಕ್ಕೆ ಆಗಮಿಸಿದ್ದರು. ಈ ವೇಳೆ ಗಜಪಡೆ ಕಂಡು ಖುಷಿ ಪಟ್ಟರು. ಅಂಬಾರಿ ಆನೆ ಅರ್ಜುನನ್ನು ಕಂಡ ದರ್ಶನ್, ಅದರ ಮೈ ಸವರಿ ಖುಷಿಪಟ್ಟರು.
ಬಳಿಕ ಗಜಪಡೆಯೊಂದಿಗೆ ಆಗಮಿಸಿರುವ ಕಾವಾಡಿ ಮತ್ತು ಮಾವುತರ ಕುಟುಂಬಸ್ಥರನ್ನ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು.

ತುಪ್ಪದ ಹೋಳಿಗೆ, ಗೋದಿಕಡಿ ಪಾಯಸ, ಚಿರೋಟಿ ಬಾದಾಮಿ ಹಾಲು, ಗ್ಲಾಸ್ ಸ್ಯಾನ್ವಿಚ್, ಮೊಳಕೆ ಕಾಳು ಕೋಸಂಬರಿ, ಸುವರ್ಣಗೆಡ್ಡೆ ಚಾಪ್ಸ್, ಬೆಂಡೆಕಾಯಿ ಪೆಪ್ಪರ್ ಡ್ರೈ, ಮಿಕ್ಸಡ್ ಪಲ್ಯ ಜೋಳದ ರೊಟ್ಟಿ ಸೇರಿದಂತೆ ನಾನಾ ಬಗೆಯ ಖಾದ್ಯಗಳನ್ನು ಮಾವುತ, ಕಾವಾಡಿಗಳು ಹಾಗೂ ಅವರ ಕುಟುಂಬದವರು ಸವಿದರು.
ಅಷ್ಟೇ ಅಲ್ಲ, ದರ್ಶನ್ ಕಡೆಯಿಂದ ದಸರಾ ಗಜಪಡೆ, ಮಾವುತ, ಕಾವಾಡಿಗಳಿಗೆ ವಿಶೇಷ ಗಿಫ್ಟ್ ನೀಡಲಾಯಿತು. ಮಕ್ಕಳಿಗೆ ಬ್ಯಾಗ್ ಮತ್ತು ಪುಸ್ತಕಗಳು, ಮಾವುತರು ಹಾಗೂ ಕಾವಾಡಿಗಳ ಕುಟುಂಬಗಳಿಗೆ ಹೊಸ ಬಟ್ಟೆಗಳನ್ನು ನೀಡಲಾಯಿತು.
ಈ ಆತಿಥ್ಯ ಕಾರ್ಯಕ್ರಮದಲ್ಲಿ ಸಿನಿ ತಾರೆಯಾರರೊಂದಿಗೆ ರಾಜವಂಶಸ್ಥ ಯದುವೀರ್ ಕೂಡ ಭಾಗವಹಿಸಿದ್ದು ವಿಶೇಷವಾಗಿತ್ತು. ಎಲ್ಲರೊಂದಿಗೆ ಊಟ ಮಾಡುವ ಮೂಲಕ ನಟರು ತಮ್ಮ ಸರಳತೆ ಮೆರೆದರು. ಈ ವೇಳೆ ಮಾತನಾಡಿದ ಯದುವೀರ್, ನಟ ದರ್ಶನ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಎಲ್ಲರು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದರು.












Click it and Unblock the Notifications