ವೈದ್ಯಳಾಗುವ ಕನಸಿನ ವಸುಧಾ ರಾಜ್ಯಕ್ಕೆ ಪ್ರಥಮ
ಮೈಸೂರು, ಮೇ.8 : ಗುರುವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಮೈಸೂರಿನ ಸದ್ವಿದ್ಯಾ ಕಾಲೇಜಿನ ವಸುಧಾ ಅವರು 600ಕ್ಕೆ 594 ಅಂಕಗಳನ್ನು ಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾರೆ. ಭವಿಷ್ಯದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದಿರುವ ಅವರು ಒನ್ ಇಂಡಿಯಾ ಜೊತೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಅರವಳಿಕೆ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ದಿನೇಶ್ ಮತ್ತು ಲತಾ ದಂಪತಿಯ ಪುತ್ರಿಯಾದ ವಸುಧಾ ತಮ್ಮ ಸಾಧನೆಗೆ ತಂದೆ-ತಾಯಿ ಮತ್ತು ಉಪನ್ಯಾಸಕರು ನೀಡಿದ ಸಹಕಾರವೇ ಕಾರಣ ಎಂದು ಹೇಳಿದ್ದಾರೆ. ಸಿಇಟಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ವಸುಧಾ ಅವರು, ತಂದೆಯಂತೆ ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಕಸಸು ಹೊಂದಿದ್ದಾರೆ. [ಪಿಯುಸಿ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ]

ಮಗಳ ಸಾಧನೆ ಬಗ್ಗೆ ಸಂತಸ ವ್ಯಕ್ತಪಡಿಸಿರುವ ವಸುಧಾ ತಾಯಿ ಲತಾ ಅವಳಿಗೆ ಮುಂದಿನ ನಿರ್ಧಾರದ ಬಗ್ಗೆ ಯಾವುದೇ ಒತ್ತಡ ಹಾಕುವುದಿಲ್ಲ ಎಂದು ಹೇಳಿದ್ದಾರೆ. ಮುಂದಿನ ಆಯ್ಕೆ ಬಗ್ಗೆ ವಸುಧಾ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದು ಗೃಹಿಣಿಯಾಗಿರುವ ಅವರು ತಿಳಿಸಿದ್ದಾರೆ. [ಪಿಯುಸಿ ಫಲಿತಾಂಶದ ಮುಖ್ಯಾಂಶಗಳು]
ನನ್ನ ತಂದೆ-ತಾಯಿ ಅವರ ಸ್ಫೂರ್ತಿ ಮತ್ತು ಬೆಂಬಲದಿಂದ ಕಷ್ಟಪಟ್ಟು ಓದುತ್ತಿದ್ದೆ. ಕಾಲೇಜಿನಲ್ಲಿ ನನ್ನ ಉಪನ್ಯಾಸಕರು ಸಹ ನನ್ನ ಓದಿಗೆ ಪೂರಕ ಬೆಂಬಲ ನೀಡಿದರು. ಆದ್ದರಿಂದ ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು. ನಾನು ಕೋಚಿಂಗ್ ಕ್ಲಾಸ್ ಗಳಿಗೆ ಹೋಗಿಲ್ಲ. ಆದರೆ, ಮಂಗಳೂರಿನಲ್ಲಿ crash course with expert coaching class ಪಡೆದಿದ್ದೇನೆ ಎಂದು ವಸುಧಾ ತಮ್ಮ ಪ್ರಥಮ ಸ್ಥಾನ ಪಡೆದ ಪರಿಶ್ರಮವನ್ನು ವಿವರಿಸಿದ್ದಾರೆ.
ಈಗಾಗಲೇ ಸಿಇಟಿ ಪರೀಕ್ಷೆ ಬರೆದಿರುವ ವಸುಧಾ ಅವರು ತಂದೆಯಂತೆ ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಕನಸು ಹೊಂದಿದ್ದಾರೆ. ಫಲಿತಾಂಶ ಬಂದ ನಂತರ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ. ವಸುಧಾ ಅವರ ಭವಿಷ್ಯಕ್ಕೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್.












Click it and Unblock the Notifications