ಮೈಸೂರು ವಿವಿ ಕುಲಸಚಿವರ ಕಚೇರಿಗೆ ಬೀಗ!
ದಾಖಲೆಗಳನ್ನು ರಕ್ಷಿಸುವ ದೃಷ್ಟಿಯಿಂದ ಉಪಕುಲಪತಿಗಳು ಕಡತಗಳು ಇರುವ ಉಪಕುಲ ಸಚಿವರ ಕಚೇರಿಗೆ ಬೀಗ ಜಡಿದಿದ್ದಾರೆ. ಈ ಮೂಲಕ ಉಪಕುಲಪತಿ ಹಾಗೂ ಕುಲಸಚಿವರ ನಡುವಿನ ಶೀತಲ ಸಮರ ತಾರಕಕ್ಕೇರಿದೆ.
ಮೈಸೂರು, ಮೇ 30: ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಕೆ.ರಾಜಣ್ಣ ಹಾಗೂ ಉಪ ಕುಲಸಚಿವ ವಿಷಕಂಠ ಅವರ ವಿರುದ್ಧ ರಾಜ್ಯಪಾಲರು ತನಿಖೆಗೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಅವರಿಬ್ಬರನ್ನು ಕರ್ತವ್ಯ ದಿಂದ ಬಿಡುಗಡೆ ಮಾಡಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಹಂಗಾಮಿ ಉಪಕುಲಪತಿ ಪ್ರೊ. ದಯಾನಂದ ಮಾನೆ ಪತ್ರ ಬರೆದಿದ್ದಾರೆ.
ಈ ಮಧ್ಯೆ ದಾಖಲೆಗಳನ್ನು ರಕ್ಷಿಸುವ ದೃಷ್ಟಿಯಿಂದ ಉಪಕುಲಪತಿಗಳು ಕಡತಗಳು ಇರುವ ಉಪಕುಲ ಸಚಿವರ ಕಚೇರಿಗೆ ಬೀಗ ಜಡಿದಿದ್ದಾರೆ. ಈ ಮೂಲಕ ಕುಲಪತಿ ಹಾಗೂ ಕುಲಸಚಿವರ ನಡುವಿನ ಶೀತಲ ಸಮರ ತಾರಕಕ್ಕೇರಿದೆ.[ಒನ್ ಇಂಡಿಯಾ ಫಲಶೃತಿ: ಸರಿಹೋಯ್ತು ಮೈಸೂರು ವಿವಿ ಕ್ಲಾಕ್ ಟವರ್]
ಇತ್ತೀಚೆಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ 96 ಹುದ್ದೆಗಳಿಗೆ ನೇಮಕಾತಿ ಮಾಡಿರುವ ಸಂಬಂಧ ಅವರ ಮೇಲೆ ಆರೋಪ ಕೇಳಿ ಬಂದಿತ್ತು. ಇದೆಲ್ಲದೆ ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ಇತರೆ ಅವ್ಯವಹಾರಗಳ ಬಗ್ಗೆಯೂ ತನಿಖೆ ನಡೆಸುವಂತೆ ಪತ್ರ ಬರೆದಿದ್ದರು.
ಈ ಸಂಬಂಧ 'ಒನ್ ಇಂಡಿಯಾ'ದೊಂದಿಗೆ ಮಾತನಾಡಿದ ಉಪಕುಲಪತಿ ಪ್ರೊ.ದಯಾನಂದ ಮಾನೆ ಅವರು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ಬಹುಕೋಟಿ ಹಗರಣ ಇದು ಎಂದರಲ್ಲದೆ, ಇವರ ಅಕ್ರಮದಿಂದ ಹಲವರು ಬಡ ಅಭ್ಯರ್ಥಿಗಳ ಭವಿಷ್ಯವೂ ಹಾಳಾಗಿದೆ ಎಂದರು.
ಹುದ್ದೆಗಳ ನೇಮಕಾತಿಗೆ ಮುನ್ನ ಯಾವುದೇ ಪತ್ರಿಕೆಯಲ್ಲಿ ಅಧಿಸೂಚನೆ ಹೊರಡಿಸಿಲ್ಲ. ಸಾರ್ವಜನಿಕವಾಗಿ ಪ್ರಕಟಿಸಿಲ್ಲ. ಇದನ್ನು ಹಿಂದಿನ ಉಪಕುಲಪತಿ ಇದ್ದ ಸಂದರ್ಭದಲ್ಲೇ ಆರಂಭಿಸಲಾಗಿತ್ತು.
ನಂತರ ಉಪಕುಲಪತಿಗಳ ಒಪ್ಪಿಗೆ ಮೇರೆಗೆ ಎಂದು ದಾಖಲೆಯಲ್ಲಿತ್ತು. ಇದನ್ನು ನೋಡಿ ನನಗೆ ಅನುಮಾನ ಬಂದು ನೋಡಿದಾಗ ಇದಕ್ಕೆ ಯಾವ ಒಪ್ಪಿಗೆಯನ್ನೂ ಪಡೆಯದಿರುವುದು ಬೆಳಕಿಗೆ ಬಂದಿತು ಎಂದರು.