ಮೋದಿ ಪ್ರಧಾನಿಗೆ ಉದ್ಯಮಿಗಳಿಂದ 300 ಕೋಟಿ ಹೂಡಿಕೆ
ಮೈಸೂರು, ಏ.4: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಂತ್ರಿಯಾಗಿಸಲು ಗುಜರಾತಿನ ಪ್ರಭಾವಿ ಉದ್ಯಮಿಗಳು 300 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಗಂಭೀರ ಆರೋಪ ಮಾಡಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಇಂದು ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದೇವೇಗೌಡರು ಈ ವಿಷಯ ಬಹಿರಂಗಪಡಿಸಿದ್ದಾರೆ.
ಯಾವಾಗ ಪ್ರಧಾನಿ ಮನಮೋಹನ್ ಸಿಂಗ್ ಅವರ ಸರ್ಕಾರ ಕುಸಿಯುತ್ತಿದೆ, ಮಾನ್ಯತೆ ಕಳೆದು ಕೊಳ್ಳುತ್ತಿದೆ ಎಂಬ ಅಂಶ ಮನವರಿಕೆಯಾಗತೊಡಗಿತೋ ಗುಜರಾತಿನ ಕೆಲ ಕಾರ್ಪೊರೇಟ್ ಸಂಸ್ಥೆಗಳು ಮೋದಿ ಮೇಲೆ 300 ಕೋಟಿ ರೂ. ಬಂಡವಾಳ ಹಾಕತೊಡಗಿದವು ಎಂದು ಅವರು ಸಕಾರಣವನ್ನೂ ನೀಡಿದರು.

ನಾನೂ 50 ವರ್ಷ ರಾಜಕಾರಣ ಮಾಡಿದ್ದೇನೆ. ಒಂದು ವರ್ಷದ ಕಾಲ ಪ್ರಧಾನಿಯಾಗಿ ಕೂಡ ಅಧಿಕಾರ ಮಾಡಿದ್ದೇನೆ. ಉದ್ದಿಮೆದಾರರ ಹಿತಾಸಕ್ತಿ ಯಾವ ರೀತಿ ಕೆಲಸ ಮಾಡುತ್ತದೆ, ಜನರ ಪ್ರೀತಿ-ವಿಶ್ವಾಸ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ನಾನು ಚೆನ್ನಾಗಿ ಬಲ್ಲೆ ಎಂದು ಅವರು ಹೇಳಿದರು. (ಮತ್ತೊಂದು ಹೋರಾಟಕ್ಕೆ ಸಿದ್ಧವಿರುವ ದೇವೇಗೌಡ್ರ ಸಂದರ್ಶನ)
ಜೆಡಿಎಸ್ಸಿನಲ್ಲಿ ಹೊಸ ಭರವಸೆ/ಸಂಚಲನ:
ಉದ್ದಿಮೆದಾರರು ಮತ್ತು ಕಾರ್ಪೊರೇಟ್ ಸಂಸ್ಥೆಗಳು ಮೋದಿ ಮೇಲೆ ಎಷ್ಟು ಕೋಟಿ ಬಂಡವಾಳವನ್ನಾದರೂ ಹೂಡಿಕೊಳ್ಳಲಿ. ಆದರೆ, ಜನ ಮಾತ್ರ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂಬ ವಿಶ್ವಾಸ, ಭರವಸೆ ನನಗಿದೆ. ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಸೋಲು ಕಂಡ ನಂತರ ಜಿಲ್ಲಾ ಪಂಚಾಯ್ತಿಯಿಂದ ಹಿಡಿದು ತಾಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ ಮಟ್ಟದವರೆಗಿನ ಎಲ್ಲ ಮುಖಂಡರನ್ನೂ ಕರೆದು ಸನ್ಮಾನ ಮಾಡಿದ್ದೇನೆ.
ಆಮೇಲೆ ಮೈಸೂರು ಭಾಗದಲ್ಲಿ ಯುವಕರ ಸಮಾವೇಶ, ಮಹಿಳಾ ಸಮಾವೇಶ, ಹಿಂದುಳಿದ ವರ್ಗಗಳ ಸಮಾವೇಶ ಮಾಡಿದ್ದೇನೆ. ಇದರಿಂದಾಗಿ ಕುಸಿದು ಹೋಗಿದ್ದ ಜೆಡಿಎಸ್ ಪ್ರಭಾವ ಈಗ ಮೊದಲ ಸ್ಥಿತಿಗೆ ಬಂದಿದೆ. ಜೆಡಿಎಸ್ಸಿನಲ್ಲಿ ಹೊಸ ಭರವಸೆ, ಹೊಸ ಸಂಚಲನ ಮೂಡಿದೆ. ಮೈಸೂರಿನ ಸಮಾವೇಶದ ವೇದಿಕೆಯಲ್ಲಿದ್ದಾಗಲೇ ತೃತೀಯ ರಂಗ ಕಟ್ಟೋಣ ಬನ್ನಿ ಎಂದು ದೆಹಲಿಯಿಂದ ಕರೆ ಬಂತು, ಹೋಗಿದ್ದೆ. ಅವರೊಂದಿಗೆ ಮಾತನಾಡಿದ್ದೇನೆ. ಚುನಾವಣೆ ಮುಗಿದ ನಂತರ ತೃತೀಯ ರಂಗದ ಸ್ಥಾಪನೆಗೆ ಒಂದು ರೂಪ ಬರುತ್ತದೆ. ಅದಕ್ಕೆ ನಾವು ಎಲ್ಲರೂ ಸೇರಿಕೊಂಡು ಒಂದು ಹೆಸರು ಕೊಡುತ್ತೇವೆ ಎಂದು ಅವರು ಹೇಳಿದರು.
ನರೇಂದ್ರ ಮೋದಿ ಜೈಲಿಗೆ:
ಈ ಮಧ್ಯೆ, ಉತ್ತರ ಪ್ರದೇಶದ ಬಲರಾಮ್ಪುರದಲ್ಲಿ ಮಾತನಾಡಿರುವ ಕೇಂದ್ರ ಮಾಜಿ ಸಚಿವ ಬೇನಿ ಪ್ರಸಾದ್ ವರ್ಮಾ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೋದಿ ಅವರು ಹಿಂದೂ-ಮುಸ್ಲಿಮರ ಮಧ್ಯೆ ಕಂದಕ ಸೃಷ್ಟಿಸುತ್ತಿದ್ದಾರೆ ಎಂದು ಟೀಕಿಸಿದ ಬೇನಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯಾದರೆ ಕೇವಲ ಆರು ತಿಂಗಳೊಳಗಾಗಿ ನರೇಂದ್ರ ಮೋದಿಯನ್ನು ಜೈಲಿಗೆ ಕಳುಹಿಸಲಾಗುವುದು. ಬಿಜೆಪಿ ಆಗ ನಗೆಪಾಟಲಿಗೀಡಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.
'ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆರೆಸ್ಸೆಸ್ ಗೂಂಡಾ, ರಾಜನಾಥ್ ಸಿಂಗ್ ಮೋದಿಯ ಗುಲಾಮ' ಎಂದು ಹೇಳುವ ಮೂಲಕ ಭಾರೀ ವಿವಾದ ಸೃಷ್ಟಿಸಿದ್ದರು. ಮೋದಿ ಸರ್ವಾಧಿಕಾರಿಯಾಗಿದ್ದು ಅವರು ಎಂದೂ ಈ ದೇಶದ ಪ್ರಧಾನಿಯಾಗಲಾರರು. ಬಿಜೆಪಿ ಎಷ್ಟೇ ಸರ್ಕಸ್ ಮಾಡಿದರೂ ಮೋದಿಯನ್ನು ಪ್ರಧಾನಿ ಮಾಡಲು ಸಾಧ್ಯವೇ ಇಲ್ಲ' ಎಂದೂ ಬೇನಿ ವರ್ಮಾ ತಿಳಿಸಿದರು.












Click it and Unblock the Notifications