ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮ ಕ್ಲೋಸ್; ಯುಗಾದಿ ಪುಣ್ಯಸ್ನಾನವೂ ರದ್ದು
ಮೈಸೂರು, ಮಾರ್ಚ್ 19: ಕೊರೊನಾ ಹಾಗೂ ಹಕ್ಕಿ ಜ್ವರದ ಆತಂಕದ ಹಿನ್ನಲೆ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮ ಮುಚ್ಚಲಾಗಿದೆ ಎಂದು ಗಣಪತಿ ಸಚ್ಚಿದಾನಂದ ಆಶ್ರಮದಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ.
ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಎಲ್ಲಾ ಸಾರ್ವಜನಿಕ ಸ್ಥಳಗಳಾದ ಶ್ರೀ ದತ್ತವೇಂಕಟೇಶ್ವರ ದೇವಸ್ಥಾನ, ದತ್ತ ದೇವಸ್ಥಾನ, ವಿಶ್ವ ಪ್ರಾರ್ಥನಾ ಮಂದಿರ, ಅನ್ನಪೂರ್ಣ ಮಂದಿರ, ಶುಕವನ, ಬೋನ್ಸಾಯಿ ಗಾರ್ಡನ್, ವಿಶ್ವಂ ಮೂಸಿಯಂ, ನಾದ ಮಂಟಪ ಮತ್ತು ಇನ್ನಿತರ ಸ್ಥಳಗಳನ್ನು ಮುಚ್ಚಲಾಗಿದೆ.
ಸ್ವಾಮೀಜಿಯವರ ಹಾಗೂ ಪೂಜ್ಯ ಬಾಲಸ್ವಾಮೀಜಿಯವರ ದಿನಂಪ್ರತಿ ದರ್ಶನ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಆಶ್ರಮದಲ್ಲಿ ನಡೆಸುವ ಎಲ್ಲಾ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

ಜೊತೆಗೆ ಮೈಸೂರು ಜಿಲ್ಲೆಯಾದ್ಯಂತ ಯುಗಾದಿ ಪುಣ್ಯಸ್ನಾನ ರದ್ದು ಮಾಡುವಂತೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ಹಿನ್ನಲೆ ಮುನ್ನೆಚ್ಚರಿಕೆ ಕ್ರಮವಾಗಿ ಯುಗಾದಿ ದಿನ ಪುಣ್ಯಸ್ನಾನ ಮಾಡುವುದು ವಾಡಿಕೆ. ತಿ.ನರಸೀಪುರದ ತ್ರಿವೇಣಿ ಸಂಗಮ, ತಲಕಾಡಿನ ಕೀರ್ತಿ ನಾರಾಯಣ, ವೈದ್ಯನಾಥೇಶ್ವರ, ನಂಜನಗೂಡು ಶ್ರೀಕಂಠೇಶ್ವರ ದೇವಾಲಯ, ಎಚ್.ಡಿ.ಕೋಟೆಯ ಲಕ್ಷ್ಮೀ ಕಾಂತಸ್ವಾಮಿ ದೇವಾಲಯ, ಬೆಟ್ಟದ ಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಮುಚ್ಚಲಾಗುವುದು. ಅಲ್ಲಿನ ನದಿಗಳಲ್ಲಿ ಪುಣ್ಯ ಸ್ನಾನ ಮಾಡುವಂತಿಲ್ಲ. ಹೆಚ್ಚು ಜನ ಸೇರುವಂತಿಲ್ಲ ಎಲ್ಲರೂ ಮನೆಯಲ್ಲೇ ಹಬ್ಬ ಆಚರಿಸಿ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.












Click it and Unblock the Notifications