ಕೊರೊನಾ ಸುಳ್ಳು ವದಂತಿ: ಮೈಸೂರಿನಲ್ಲಿ ಕೇಸ್ ದಾಖಲು
ಮೈಸೂರು, ಏಪ್ರಿಲ್ 08: ಸಾಮಾಜಿಕ ಜಾಲತಾಣಗಳಲ್ಲಿ ಸೂಪರ್ ಮಾರ್ಕೆಟ್ ವೊಂದರ ಮಾಲೀಕರಿಗೆ ಕೊರೊನಾ ವೈರಸ್ ಸೋಂಕಿದೆ ಎಂದು ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.
ಮೈಸೂರಿನ ಕುವೆಂಪು ನಗರದಲ್ಲಿರುವ ಲಾಯಲ್ ವರ್ಲ್ಡ್ ಸೂಪರ್ ಮಾರ್ಕೆಟ್ ಅಂಗಡಿಯ ಮಾಲೀಕನಿಗೆ ಕೊರೊನಾ ವೈರಸ್ ಇದೆ. ಅವರು ದೆಹಲಿಯ ನಿಜಾಮುದ್ದೀನ್ ನಲ್ಲಿ ನಡೆದ ತಬ್ಲಿಘಿ ಜಮಾತ್ ಸಭೆಗೆ ಹೋಗಿ ಬಂದಿದ್ದಾರೆ ಎಂದು, ಆ ಸೂಪರ್ ಮಾರ್ಕೆಟ್ ಫೋಟೋ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ವೈರಲ್ ಮಾಡಲಾಗಿದೆ.
ಈ ಸುಳ್ಳು ಸುದ್ದಿ ಸೂಪರ್ ಮಾರ್ಕೆಟ್ನ ಮಾಲೀಕನ ಮೊಬೈಲ್ಗೂ ತಲುಪಿದ್ದು, ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅನೇಕ ಕಡೆ ನಮ್ಮ ಶಾಖೆಗಳಿವೆ. ಈ ಸುದ್ದಿಯಿಂದಾಗಿ ನಮ್ಮ ನೌಕರರು ಹಾಗೂ ಗ್ರಾಹಕರು ಭಯಗೊಂಡಿದ್ದಾರೆ ಎಂದು ಅತಂಕ ವ್ಯಕ್ತಪಡಿಸಿದರು.

ಹೀಗಾಗಿ ಸೂಪರ್ ಮಾರ್ಕೆಟ್ನ ಮಾಲೀಕರು ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೋಲಿಸರು ಕೊರೊನಾ ವೈರಸ್ ವದಂತಿ ಹರಡಿ ಸಾರ್ವಜನಿಕರಿಗೆ ಭಯ ಉಂಟು ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.












Click it and Unblock the Notifications