ನಂಜನಗೂಡು ಕ್ಷೇತ್ರದತ್ತ ಘಟಾನುಘಟಿ 'ಕೈ'ನಾಯಕರ ಚಿತ್ತ!
ಮೈಸೂರು, ನವೆಂಬರ್ 22: ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ರಾಜಕೀಯ ನಿವೃತ್ತಿ ಘೋಷಿಸಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರು ಕಣಕ್ಕಿಳಿಯಲ್ಲ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಆರ್.ಧ್ರುವನಾರಾಯಣ್ಗೆ ಸುಲಭ ಗೆಲುವು ಸಾಧ್ಯ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಆಗಿರುವ ಬೆಳವಣಿಗೆ ಅಚ್ಚರಿ ತರುತ್ತಿದೆ.
ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಆರ್. ಧ್ರುವನಾರಾಯಣ್ ಅವರು ಕೇಂದ್ರ ರಾಜಕೀಯಕ್ಕಿಂತ ರಾಜ್ಯರಾಜಕೀಯದತ್ತ ಒಲವು ತೋರಿರುವುದು ಎದ್ದು ಕಾಣಿಸುತ್ತಿದೆ. ಚಾಮರಾಜನಗರದಿಂದ ಮೈಸೂರು ಜಿಲ್ಲೆಯತ್ತ ಮುಖ ಮಾಡಿರುವ ಅವರು ನಂಜನಗೂಡಿನಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಬಯಕೆ ಹೊಂದಿದ್ದಾರೆ ಎನ್ನಲಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆರ್.ಧ್ರುವನಾರಾಯಣ್ ಗೆದ್ದೇ ಗೆಲ್ಲುತ್ತಾರೆ ಎಂದು ಜನ ನಂಬಿದ್ದರು. ಆದರೆ ಕೊನೆಗಳಿಗೆಯಲ್ಲಿ ವಿ.ಶ್ರೀನಿವಾಸಪ್ರಸಾದ್ ಬಿಜೆಪಿಯಿಂದ ಸ್ಪರ್ಧಿಸಿದ ಕಾರಣ ಸೋಲು ಕಾಣುವಂತಾಯಿತು. ರಾಜ್ಯದ ಮಟ್ಟಿಗೆ ಸಂಸದರಾಗಿ ಉತ್ತಮ ಕೆಲಸ ಮಾಡಿದ್ದರೂ ಕೂಡ ವಿ.ಶ್ರೀನಿವಾಸ ಪ್ರಸಾದ್ ಮತ್ತು ಸಿದ್ದರಾಮಯ್ಯ ಅವರ ನಡುವಿನ ಜಟಾಪಟಿಯಲ್ಲಿ ಧ್ರುವನಾರಾಯಣ್ ಸೋಲು ಕಾಣುವಂತಾಯಿತು.
ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶ್ರೀನಿವಾಸ ಪ್ರಸಾದ್ ಅವರ ಸ್ಪರ್ಧೆಯನ್ನು ಮೊದಲಿಗೆ ಲಘುವಾಗಿಯೇ ಪರಿಗಣಿಸಲಾಗಿತ್ತು. ಆದರೆ ಅವರ ವರ್ಚಸ್, ಮೋದಿ ಅಲೆ ಮತ್ತು ಸಿದ್ದರಾಮಯ್ಯ ಅವರಿಗೆ ಪಾಠ ಕಲಿಸಲೇ ಬೇಕೆಂಬ ಹಠ ಎಲ್ಲವೂ ಅವರ ಗೆಲುವಿಗೆ ಕಾರಣವಾಯಿತು. ಪರಿಣಾಮ ಚಾಮರಾಜನಗರದಲ್ಲಿ ಬಿಜೆಪಿ ಖಾತೆ ತೆರೆಯುವಂತಾಯಿತು.

ರಾಜ್ಯ ರಾಜಕೀಯದತ್ತ ಒಲವು
ಹಾಲಿ ಸಂಸದ ಶ್ರೀನಿವಾಸ ಪ್ರಸಾದ್ ಅವರು ಇದೀಗ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಆ ಕ್ಷೇತ್ರದಲ್ಲಿ ಮತ್ತೆ ಆರ್.ಧ್ರುವನಾರಾಯಣ್ ಗೆಲ್ಲಬಹುದು ಎಂದು ಹೇಳಲಾಗುತ್ತಿದೆ. ಆದರೆ ಆ ವೇಳೆಗೆ ಬಿಜೆಪಿ ಬೇರೇ ಏನಾದರೂ ತಂತ್ರ ಅಳವಡಿಸಿ ಘಟಾನುಘಟಿ ನಾಯಕರನ್ನು ಕರೆತಂದರೂ ಅಚ್ಚರಿ ಪಡಬೇಕಾಗಿಲ್ಲ. ಅದಕ್ಕಿಂತ ಹೆಚ್ಚಾಗಿ ಕೇಂದ್ರ ರಾಜಕೀಯದತ್ತ ಬಹಳಷ್ಟು ಕಾಂಗ್ರೆಸ್ ನಾಯಕರಿಗೆ ಆಸಕ್ತಿ ಕಡಿಮೆಯಾಗಿದೆ. ಅದರಲ್ಲಿ ಆರ್.ಧ್ರುವನಾರಾಯಣ್ ಕೂಡ ಒಬ್ಬರಾಗಿದ್ದಾರೆ ಎಂದರೆ ತಪ್ಪಾಗಲಾರದು.
ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದರೆ ಕೇಂದ್ರದ ಚುನಾವಣೆಗೆ ಮತ್ತೆ ಒಂದು ವರ್ಷ ಬಾಕಿಯಿರುವುದರಿಂದ ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ರಾಜಕೀಯ ತಂತ್ರ ಅನುಸರಿಸಬಹುದು. ಅದಕ್ಕೆ ಕಾಲಾವಕಾಶವೂ ಇರುವುದರಿಂದ ಸದ್ಯ ರಾಜ್ಯದಲ್ಲಿ ಅಧಿಕಾರ ಹಿಡಿಯುವುದು ಬಹುಮುಖ್ಯ ಎಂಬ ನಿರ್ಧಾರಕ್ಕೆ ಕಾಂಗ್ರೆಸ್ ನ ಬಹಳಷ್ಟು ನಾಯಕರು ಬಂದಿದ್ದಾರೆ. ಹೀಗಾಗಿ ಎಲ್ಲರೂ ವಿಧಾನಸಭಾ ಚುನಾವಣೆಯತ್ತ ದೃಷ್ಠಿ ನೆಟ್ಟಿದ್ದಾರೆ.

ಅಭ್ಯರ್ಥಿ ಆಯ್ಕೆ ದೊಡ್ಡ ಸವಾಲ್
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಜನ ಬೆಂಬಲಿಸುತ್ತಾರೆ ಎಂಬ ಆತ್ಮವಿಶ್ವಾಸದಲ್ಲಿ ನಾಯಕರಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಗಳ ಸಂಖ್ಯೆ ಜಾಸ್ತಿಯಾಗಿದೆ. ಈಗಾಗಲೇ ಸಾವಿರಾರು ಮಂದಿ ನಿಗದಿತ ಶುಲ್ಕ ನೀಡಿ ಅರ್ಜಿ ಸಲ್ಲಿಸಿದ್ದಾರೆ. ಹೀಗೆ ಅರ್ಜಿ ಸಲ್ಲಿಸಿದವರ ಪೈಕಿ ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ನಂಜನಗೂಡಿಗೆ ಡಿಮ್ಯಾಂಡ್
ಈಗಾಗಲೇ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವಿನ ಭಿನ್ನಾಭಿಪ್ರಾಯಗಳು ಜಗಜ್ಜಾಹೀರಾಗುತ್ತಿದೆ. ಹೀಗಿರುವಾಗ ಯಾರನ್ನು ಓಲೈಸಬೇಕು ಎನ್ನುವುದು ಆಕಾಂಕ್ಷಿಗಳನ್ನು ಗೊಂದಲಕ್ಕೀಡು ಮಾಡಿದೆ. ಈ ನಡುವೆ ನಂಜನಗೂಡು ಕ್ಷೇತ್ರದಿಂದ ಆಯ್ಕೆ ಬಯಸಿ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮತ್ತು ಮಾಜಿ ಸಂಸದ ಆರ್.ಧ್ರುವನಾರಾಯಣ್ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಹಾಗೆನೋಡಿದರೆ ಡಾ.ಹೆಚ್.ಸಿ.ಮಹದೇವಪ್ಪ ಅವರದು ತಿ.ನರಸೀಪುರ ಕ್ಷೇತ್ರವಾಗಿದ್ದು, ಕಳೆದ ಬಾರಿ ಜೆಡಿಎಸ್ನ ಅಶ್ವಿನ್ ಕುಮಾರ್ ಎದುರು ಸೋಲು ಕಂಡಿದ್ದರು. ಈ ಬಾರಿ ತಮ್ಮ ಕ್ಷೇತ್ರವನ್ನು ಪುತ್ರ ಸುನೀಲ್ ಬೋಸ್ಗೆ ಬಿಟ್ಟುಕೊಟ್ಟು ನಂಜನಗೂಡಿನತ್ತ ಮುಖ ಮಾಡಿದ್ದಾರೆ. ಈ ಹಿಂದೆ ನಂಜನಗೂಡು ಕ್ಷೇತ್ರ ಕಾಂಗ್ರೆಸ್ ಪ್ರಾಬಲ್ಯ ಹೊಂದಿತ್ತು. ಶ್ರೀನಿವಾಸ ಪ್ರಸಾದ್ ಅವರು ಪ್ರತಿನಿಧಿಸಿಕೊಂಡು ಬಂದಿದ್ದರು.

ಯಾರಾಗಲಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ?
ಆದರೆ ಸಿದ್ದರಾಮಯ್ಯ ಅವರ ನಡುವಿನ ರಾಜಕೀಯ ಜಗಳಗಳಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಶ್ರೀನಿವಾಸ ಪ್ರಸಾದ್ ಅವರು ಉಪಚುನಾವಣೆಯಲ್ಲಿ ಸೋಲು ಕಂಡಿದ್ದರು. ಅವತ್ತು ಜೆಡಿಎಸ್ನಲ್ಲಿದ್ದ ಕಳಲೆ ಕೇಶವಮೂರ್ತಿ ಕಾಂಗ್ರೆಸ್ನಿಂದ ಟಿಕೆಟ್ ಪಡೆದು ಗೆಲುವು ಸಾಧಿಸಿ ಅಲ್ಪಕಾಲಕ್ಕೆ ಶಾಸಕರಾಗಿ ಕಾರ್ಯನಿರ್ವಹಿಸಿದ್ದರು. ಆ ನಂತರ ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಶ್ರೀನಿವಾಸ ಪ್ರಸಾದ್ ಅವರ ಅಳಿಯ ಹರ್ಷವರ್ಧನ್ ಅವರ ಎದುರು ಸೋಲು ಕಂಡಿದ್ದರು.
ಬಹುಶಃ ಈ ಬಾರಿಯೂ ಹರ್ಷವರ್ಧನ್ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆಯಿದ್ದು, ಅವರ ವಿರುದ್ಧ ಸ್ಪರ್ಧಿಸಲು ಘಟಾನುಘಟಿಗಳಾದ ಮಹದೇವಪ್ಪ ಮತ್ತು ಧ್ರುವನಾರಾಯಣ್ ಆಕಾಂಕ್ಷಿಗಳಾಗಿದ್ದಾರೆ ಎಂದು ಹೇಳಲಾಗಿದೆ ಅಂತಿಮವಾಗಿ ಯಾರಿಗೆ ಟಿಕೆಟ್ ಸಿಗಬಹುದು ಎಂಬುದು ಕುತೂಹಲಕಾರಿಯಾಗಿದೆ. ಒಟ್ಟಾರೆ ಮೈಸೂರು ಜಿಲ್ಲೆಯ ಮಟ್ಟಿಗೆ ನಂಜನಗೂಡು ಕ್ಷೇತ್ರ ಸದ್ಯ ಸುದ್ದಿಯಲ್ಲಿದೆ. ಮುಂದೇನು ಎಂಬುದೇ ಕುತೂಹಲಕಾರಿಯಾಗಿದೆ.












Click it and Unblock the Notifications