ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ ಎಂಬುದು ನನಗೆ ಗೊತ್ತಿಲ್ಲ: ಸಿದ್ದರಾಮಯ್ಯ
ಮೈಸೂರು, ಡಿಸೆಂಬರ್ 30: ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ ಎಂದು ಯಾರಿಗೂ ಗೊತ್ತಿಲ್ಲ. ಅವರನ್ನು ಸಂಪರ್ಕಿಸಲು ನಮಗೆ ಸಾಧ್ಯವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಮೇಶ್ ಜಾರಕಿಹೊಳಿ ವಿಚಾರದಲ್ಲಿ ಕೇಳಿ ಬರುತ್ತಿರುವ ಸುದ್ದಿಗಳೆಲ್ಲ ಅಂತೆ ಕಂತೆಗಳೇ ಹೊರತು ನಿಜವಲ್ಲ. ರಮೇಶ್ ಜಾರಕಿಹೊಳಿ ವಿಚಾರದಲ್ಲಿ ಬಿಜೆಪಿ ಕೆಟ್ಟ ಕನಸು ಕಾಣುತ್ತಿದೆ. ಬಹುಮತ ಇಲ್ಲದಿದ್ದರೂ ಬಿಜೆಪಿ ನಾಯಕರು ಅಧಿಕಾರದ ಕನಸು ಕಾಣುತ್ತಿದ್ದಾರೆ. ಬಿಜೆಪಿ ಅಧಿಕಾರ ಪಡೆಯಬೇಕಿದ್ದರೆ ವಾಮ ಮಾರ್ಗ ಅನುಸರಿಸಬೇಕು. ಅಂದರೆ ಕುದುರು ವ್ಯಾಪಾರ ಮಾಡಬೇಕು. ಒಬ್ಬೊಬ್ಬ ಶಾಸಕನಿಗೆ 25 ಕೋಟಿ ರೂ.ಗಳ ಆಮಿಷವನ್ನು ಬಿಜೆಪಿ ಒಡ್ಡುತ್ತಿದೆ. ಈ ಹಣ ಎಲ್ಲಿಯದ್ದು? ಇದು ಭ್ರಷ್ಟಾಚಾರವಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಇನ್ನು ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಸುಧಾಕರ್ ನೇಮಕಕ್ಕೆ ಮುಖ್ಯಮಂತ್ರಿ ಇನ್ನೂ ಸಮ್ಮತಿಸಿಲ್ಲ ಏಕೆ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೋರ್ಟ್ ನ ಮಾರ್ಗಸೂಚಿ ಏನಿದೆ ಎಂಬುದನ್ನು ಪರಾಮರ್ಶೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಇನ್ನುಳಿದ ನಿಗಮ ಮಂಡಳಿಗಳ ನೇಮಕಕ್ಕೆ ಮುಖ್ಯಮಂತ್ರಿ ಸಹಿ ಮಾಡುತ್ತಾರೆ ಎಂದು ತಿಳಿಸಿದರು.

ಇನ್ನು ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸುವ ಕುರಿತು ಎದುರಾಗಿರುವ ಪರ ವಿರೋಧದ ಚರ್ಚೆಯ ಕುರಿತು ಮಾತನಾಡಿದ ಅವರು, ಈ ಬಗ್ಗೆ ಎರಡು ವಾದಗಳಿವೆ. ಎರಡನ್ನೂ ಆಲಿಸುತ್ತೇವೆ. ಅಂತಿಮವಾಗಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸುತ್ತೇವೆ ಎಂದರು.
ಪರಮೇಶ್ವರ್ ಗೆ ಗೃಹ ಖಾತೆ ತಪ್ಪಿದ ಹಿನ್ನೆಲೆಯಲ್ಲಿ, ಸಚಿವ ಎಚ್.ಡಿ ರೇವಣ್ಣ ಅವರು ನೀಡಿದ್ದ ಹೇಳಿಕೆ ಕುರಿತಂತೆ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ಉಂಟಾಗಿರುವ ಬಗ್ಗೆ ಮಾತನಾಡಿದ ಅವರು, ರೇವಣ್ಣಗೆ ದೇಶಪಾಂಡೆ ಅವರು ಉತ್ತರ ನೀಡಿದ್ದಾರೆ. ಅದು ನಮ್ಮ ಪಕ್ಷದ ನಿಲುವೂ ಕೂಡ. ಅದರ ಬಗ್ಗೆ ಇನ್ನೇನು ಮಾತನಾಡುವುದಿಲ್ಲ. ರೇವಣ್ಣ ಕೂಡ ಕಾಂಗ್ರೆಸ್ ನ ನಿರ್ಧಾರಗಳ ಬಗ್ಗೆ ಮಾತನಾಡುವುದಿಲ್ಲ ಎಂದಿದ್ದಾರೆ ಎಂದು ಸ್ಪಷ್ಟಪಡಿಸಿದರು.












Click it and Unblock the Notifications