ಮೈಸೂರು, ರಸ್ತೆ ಅವಘಡದಲ್ಲಿ ಕಾಂಗ್ರೆಸ್ ಮುಖಂಡ ಸಾವು
ಮೈಸೂರು: ಇನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಕಾಂಗ್ರೆಸ್ ಮುಖಂಡ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ನಂಜನಗೂಡಿನಲ್ಲಿ ಬುಧವಾರ ನಡೆದಿದೆ.
ನಂಜನಗೂಡು ತಾಲೂಕಿನ ಹೊಸಹಳ್ಳಿ ಗ್ರಾಮದ ಕಾಂಗ್ರೆಸ್ನ ಹಿರಿಯ ಮುಖಂಡ, ರಾಜ್ಯ ಪರಿಶಿಷ್ಠ ಜಾತಿ ವಿಭಾಗದ ಸಂಚಾಲಕ, ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಮಾಜಿ ಧರ್ಮದರ್ಶಿ ಹೊಸಹಳ್ಳಿ ನರಸಿಂಹಮೂರ್ತಿ(55) ಮೃತಪಟ್ಟವರು.[ಬೆಂಗಳೂರು: ರಸ್ತೆ ಅಪಘಾತ: 2 ಸಾವು, ಹಲವು ನೋವು]
ಬುಧವಾರ ತಮ್ಮ ದ್ವಿಚಕ್ರವಾಹದಲ್ಲಿ ಗುಂಡ್ಲುಪೇಟೆ-ಊಟಿ ರಸ್ತೆಯ ಅಕ್ಷಯ್ ಬಾರ್ ಮುಂಭಾಗದ ರಸ್ತೆಯಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಬಂದ ಇನೋವಾ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ನಿಯಂತ್ರಣ ತಪ್ಪಿ ಅವರು ರಸ್ತೆಗೆ ಬಿದ್ದಿದ್ದರಿಂದ ತಲೆ ಮತ್ತು ದೇಹದ ಭಾಗಗಳಿಗೆ ಗಂಭೀರ ಗಾಯವಾಗಿದೆ.
ಕೂಡಲೇ ಅವರಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತ ನರಸಿಂಹಮೂರ್ತಿ ಅವರು ಪತ್ನಿ, ಐವರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.