ಅಹಿಂದ ವರ್ಗಗಳು ಇನ್ನಾದರೂ ಈ ಬಗ್ಗೆ ಗಂಭೀರವಾಗಿ ಯೋಚಿಸುವುದು ಒಳ್ಳೆಯದು
ಮೈಸೂರು, ಜುಲೈ 20: ಇಂದಿನ ರಾಜಕಾರಣ ಜಾತಿ ಮತ್ತು ವ್ಯಾಪಾರಕ್ಕೆ ಸೀಮಿತವಾಗಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬೇಸರ ವ್ಯಕ್ತ ಪಡಿಸಿದ್ದಾರೆ.
"ರಾಜಕಾರಣ ಬರಬರುತ್ತಾ ಜಾತಿ ಮತ್ತು ವ್ಯಾಪಾರದ ಗೋಡೆಗಳಿಗೆ ಮೊಳೆ ಹೊಡೆದುಕೊಂಡು ಜಾತಿ ಪ್ರೇಮದ ಆಚೆಗೂ ಇರುವಂತಹ ಸರ್ವ ಜನಾಂಗದ ಹಿತಾಸಕ್ತಿ ಎಂಬ ಜನಸೇವಾ ವಲಯದ ಗಂಭೀರ ಸಂಗತಿಯನ್ನು ಮರೆಯುತ್ತಿರುವುದು ದುರಂತದ ವಿದ್ಯಮಾನ"ಎಂದು ಮಹದೇವಪ್ಪ ಹೇಳಿದರು.
ಜನಸಂಖ್ಯಾ ನಿಯಂತ್ರಣ ಕಾಯ್ದೆ: ಯೋಗಿ ಆದಿತ್ಯನಾಥ್ ಮೂರ್ಖತನ
"ಕೆಲ ಮಿತಿಗಳ ನಡುವೆಯೂ ಕೂಡಾ ಜಾತ್ಯಾತೀತ ನಿಲುವುಗಳನ್ನೇ ಇಟ್ಟುಕೊಂಡು 5 ವರ್ಷಗಳ ಕಾಲ ಸುಭದ್ರ ಆಡಳಿತ ನೀಡಿ ಎಲ್ಲಾ ವರ್ಗದ ಜನರ ಹಿತಾಸಕ್ತಿಯನ್ನು ಕಾಂಗ್ರೆಸ್ ಕಾಪಾಡಿತು".
"ಕಾಂಗ್ರೆಸ್ ಸರ್ಕಾರವು ಅಧಿಕಾರದಿಂದ ಕೆಳಗಿಳಿದು ನಮ್ಮ ಸುತ್ತಲ ಜಾತಿವಾದಿ ಮತ್ತು ವ್ಯಾಪಾರಿ ಮನಸ್ಥಿತಿಯ ಜನರ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರಿಂದಲೇ ಜನ ಸಾಮಾನ್ಯರು ಬದುಕಲು ಸಾಧ್ಯವೇ ಇಲ್ಲದಂತಹ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ" ಎಂದು ಮಹದೇವಪ್ಪ ಬೇಸರ ವ್ಯಕ್ತ ಪಡಿಸಿದರು.
ಕೇಂದ್ರ ಜಾರಿಗೊಳಿಸಲು ಹೊರಟಿರುವುದು ರಾಷ್ಟ್ರೀಯ ಕೋಮುವಾದಿ ಶಿಕ್ಷಣ ನೀತಿಯೋ?
"ಬಹುಶಃ ಇಷ್ಟೊಂದು ಸಂಕಷ್ಟ ಅನುಭವಿಸಿದ ಮೇಲೆ ಈಗ ಎಲ್ಲರಿಗೂ ಪರಿಸ್ಥಿತಿಯ ಗಂಭೀರತೆಯು ಅರಿವಾಗಿದೆಯಾದರೂ ಕೂಡಾ ಜಾತಿಶ್ರೇಷ್ಠತೆಯ ಪ್ರಜ್ಞೆಯು ಅವರಲ್ಲಿ ತಮಗೆ ಒದಗಿದ ಪರಿಸ್ಥಿತಿಗಿಂತಲೂ ನಮ್ಮ ಜಾತಿಯಿದ್ದರೆ ಸಾಕು ಜನ ಬದುಕು ಯಾರಿಗೆ ಬೇಕು ಎಂಬ ಧೋರಣೆಯೇ ಮುನ್ನಲೆಗೆ ಬರುವುದು ಅಪಾಯಕಾರಿ ಸಂಗತಿಯೇ ಹೌದು" ಎಂದು ಮಹದೇವಪ್ಪ ಹೇಳಿದರು.
"ಒಂದು ವೇಳೆ ಇಂತಹ ಅತಿ ಜಾತಿ ಪ್ರಜ್ಞೆಯು ನಮ್ಮ ಅಹಿಂದ ವರ್ಗಗಳಲ್ಲಿ ಏನಾದರೂ ಜಾಗೃತವಾಗಿದ್ದಿದ್ದರೆ ನಿಜಕ್ಕೂ ರಾಜಕೀಯವಾಗಿ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಶಾಶ್ವತವಾದ ರಾಜಕೀಯ ಶಕ್ತಿಯೇ ಇಲ್ಲಿ ನಿರ್ಮಾಣವಾಗುತ್ತಿತ್ತು. ಅಹಿಂದ ವರ್ಗಗಳು ಇನ್ನಾದರೂ ಈ ಬಗ್ಗೆ ಗಂಭೀರವಾಗಿ ಯೋಚಿಸುವುದು ಒಳ್ಳೆಯದು"ಎಂದು ಹೆಚ್.ಸಿ.ಮಹದೇವಪ್ಪ ಮನವಿ ಮಾಡಿದ್ದಾರೆ.