ಮೈಸೂರು ಮೇಯರ್ ಚುನಾವಣೆ: ಸಿದ್ದರಾಮಯ್ಯಗೆ ಮಕ್ಮಲ್ ಟೋಪಿ!
ಮೈಸೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ರಣತಂತ್ರ ಯಶಸ್ವಿಯಾಗಿದೆ. ಬಿಜೆಪಿ ಅಭ್ಯರ್ಥಿಗಳಿಗೆ ಜೆಡಿಎಸ್ ಬೆಂಬಲ ಸೂಚಿಸುವ ಮೂಲಕ ಮೇಯರ್ ಮತ್ತು ಉಪ ಮೇಯರ್ ಎರಡರಲ್ಲೂ ಬಿಜೆಪಿ ಜಯಭೇರಿ ಬಾರಿಸಿದೆ.
ಆ ಮೂಲಕ, ಆಪರೇಶನ್ ಕಮಲದ ವಿಚಾರದಲ್ಲಿ ತಮ್ಮದೇ ಎತ್ತಿದ ಕೈ ಎಂದು ಬಿಜೆಪಿ ವರುಷಗಳಿಂದ ಮತ್ತೆಮತ್ತೆ ಸಾರುತ್ತಿದೆ. ಮೂರೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧರಿಸಿದ್ದವು, ಆದರೆ ಕೊನೆಯ ಕ್ಷಣದಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಮೇಯರ್ ಕಣದಲ್ಲಿ ನಿಲ್ಲಿಸಿರಲಿಲ್ಲ. ಹಾಗಾಗಿ, ಜೆಡಿಎಸ್ ಬೆಂಬಲ ಬಿಜೆಪಿಗೆ ಸಿಕ್ಕಿದ್ದರಿಂದ ನಿರಾಯಾಸವಾಗಿ ಕಮಲ ಪಾಳಯ ಮೈಸೂರಿನಲ್ಲಿ ದಡ ಸೇರಿದೆ.
ಇಲ್ಲಿ ಬಿಜೆಪಿ ಗೆಲ್ಲಲು ಕಾರಣ ಯಾರು? ನಾವು ಸೋತರೂ ಪರವಾಗಿಲ್ಲ, ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬಾರದು ಎನ್ನುವ ಜಿದ್ದಿಗೆ ಜೆಡಿಎಸ್ ನಾಯಕರು ಬಂದರಾ ಎನ್ನುವ ಚರ್ಚೆ ಮೈಸೂರು ರಾಜಕೀಯದಲ್ಲಿ ಜೋರಾಗಿ ಆರಂಭವಾಗಿದೆ. ಜೊತೆಗೆ, ಮೈಸೂರಿನ ಈ ಒಳ ಒಪ್ಪಂದ ಮುಂದಿನ ಅಸೆಂಬ್ಲಿ ಚುನಾವಣೆಗೂ ಭಾಷ್ಯ ಬರೆಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
"ಜೆಡಿಎಸ್ ಪಕ್ಷಕ್ಕೆ ಸಿದ್ದಾಂತ ಎನ್ನುವುದು ಇಲ್ಲ, ಹೆಸರಿಗೆ ಮಾತ್ರ ಜಾತ್ಯಾತೀಯ. ಬಿಜೆಪಿಯವರು ಜೆಡಿಎಸ್ಸಿಗೆ ಉಪ ಮೇಯರ್ ಸ್ಥಾನವನ್ನೂ ಕೊಡಲಿಲ್ಲ. ಆ ಮೂಲಕ ಬಿಜೆಪಿಯವರು ಜೆಡಿಎಸ್ಸಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ"ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಆದರೆ, ಇಲ್ಲಿ ಮಕ್ಮಲ್ ಟೋಪಿ ಬಿದ್ದಿದ್ದು ಯಾರಿಗೆ ಎನ್ನುವ ಚರ್ಚೆ ಆರಂಭವಾಗಿದೆ. ಚುನಾವಣಾ ವರ್ಷವಾಗಿರುವುದರಿಂದ ಮೈಸೂರು ರಾಜಕೀಯದಲ್ಲಿ ಮೇಯರ್ ಚುನಾವಣೆ ಮಹತ್ವವನ್ನು ಪಡೆದುಕೊಂಡಿದೆ.

ಮೈಸೂರು ಮಹಾನಗರಪಾಲಿಕೆಗೆ 76 ಮತದಾರರು ಮತ ಚಲಾಯಿಸಬಹುದು
ಮೈಸೂರು ಮಹಾನಗರಪಾಲಿಕೆಗೆ 76 ಮತದಾರರು ಮತ ಚಲಾಯಿಸಬಹುದು. ಇದರಲ್ಲಿ, 65 ಕಾರ್ಪೋರೇಟರುಗಳು, ಒಬ್ಬರು ಸಂಸದ, ನಗರ ವ್ಯಾಪ್ತಿಯ ನಾಲ್ಕು ಅಸೆಂಬ್ಲಿ (ಚಾಮರಾಜ, ನರಸಿಂಹರಾಜ, ಕೃಷ್ಣರಾಜ, ಚಾಮುಂಡೇಶ್ವರಿ) ಕ್ಷೇತ್ರದ ಶಾಸಕರು ಮತ್ತು ಆರು ಜನ ವಿಧಾನ ಪರಿಷತ್ ಸದಸ್ಯರು ಮತ ಚಲಾಯಿಸಬಹುದು. ಇದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 27, ಜೆಡಿಎಸ್ 21 ಮತ್ತು ಬಿಎಸ್ಪಿಗೆ ಒಬ್ಬರ ಬೆಂಬಲ ಇರಬೇಕಾಗಿತ್ತು.

ಕಾಂಗ್ರೆಸ್ ಇಲ್ಲಿ ಸಂಖ್ಯಾಬಲದ ಆಧಾರದ ಮೇಲೆ ಗೆಲುವು ಸಾಧಿಸಬಹುದಿತ್ತು
ಮೂರೂ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿ ಇದ್ದಿದ್ದರೆ ಮತ್ತು ಅವರ ಪಕ್ಷದ ಆದೇಶದಂತೆ ಮತ ಚಲಾಯಿಸಿದ್ದರೆ ಕಾಂಗ್ರೆಸ್ ಇಲ್ಲಿ ಸಂಖ್ಯಾಬಲದ ಆಧಾರದ ಮೇಲೆ ಗೆಲುವು ಸಾಧಿಸಬಹುದಿತ್ತು. ಆದರೆ, ಜೆಡಿಎಸ್ ಜನಪ್ರತಿನಿಧಿಗಳು ಬಿಜೆಪಿ ಪರ ಮತ ಚಲಾಯಿಸಿದರು. ಉಪ ಮೇಯರ್ ಸ್ಥಾನವನ್ನೂ ಬಿಟ್ಟುಕೊಡದೇ ಬಿಜೆಪಿ, ಜೆಡಿಎಸ್ಸಿಗೆ ಮಕ್ಮಲ್ ಟೋಪಿ ಹಾಕಿದೆ ಎಂದು ಸಿದ್ದರಾಮಯ್ಯನವರು ಹೇಳಿದ್ದರೂ, ಇದು ಅವರಿಗೆ ಆದ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲುಂಡಿದ್ದರು
ಮೈಸೂರು ಸಿದ್ದರಾಮಯ್ಯನವರಿಗೆ ರಾಜಕೀಯ ಕರ್ಮಭೂಮಿ. ಕಳೆದ ಬಾರಿ ಮೈಸೂರು ವ್ಯಾಪ್ತಿಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲುಂಡಿದ್ದರು. ಇಲ್ಲಿನ ಸೋಲಿಗೆ ಹಲವು ಬಾರಿ ಬೇಸರ ವ್ಯಕ್ತ ಪಡಿಸಿದ್ದರು. ಚುನಾವಣಾ ವರ್ಷವಾಗಿರುವುದರಿಂದ ಮೈಸೂರು ಪಾಲಿಕೆ ಚುನಾವಣೆ ವಿರೋಧ ಪಕ್ಷದ ನಾಯಕರಿಗೆ ಮಹತ್ವದ್ದಾಗಿತ್ತು. ಹಾಗಾಗಿ, ಪಾಲಿಕೆಯಲ್ಲಿನ ಸೋಲು ಸಿದ್ದರಾಮಯ್ಯನವರಿಗೆ ಒಂದು ಹಂತಕ್ಕೆ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಕುಮಾರಸ್ವಾಮಿಯವರ ಕಟ್ಟಾ ರಾಜಕೀಯ ವಿರೋಧಿ ಸಿದ್ದರಾಮಯ್ಯ
ತಮ್ಮನ್ನು ಸೋಲಿಸಲು ಯಾವ ಹೊಂದಾಣಿಕೆಗೂ ಸಿದ್ದ ಎನ್ನುವ ಸಂದೇಶವನ್ನು ಜೆಡಿಎಸ್, ಮೈಸೂರು ಪಾಲಿಕೆ ಚುನಾವಣೆಯ ಮೂಲಕ ಸಾರಿದಂತಿದೆ. ಎಚ್.ಡಿ.ಕುಮಾರಸ್ವಾಮಿಯವರ ಕಟ್ಟಾ ರಾಜಕೀಯ ವಿರೋಧಿಯಾಗಿರುವ ಸಿದ್ದರಾಮಯ್ಯನವರಿಗೆ ಸೋಲಿನ ರುಚಿ ತೋರಿಸಲು ಜೆಡಿಎಸ್ ಈ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಟ್ಟಿನಲ್ಲಿ, ಬಿಜೆಪಿ ಮತ್ತು ಜೆಡಿಎಸ್ ಸೇರಿ ಸಿದ್ದರಾಮಯ್ಯನವರಿಗೆ ಮಕ್ಮಲ್ ಟೋಪಿ ಹಾಕಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.












Click it and Unblock the Notifications