ಕಾಂಗ್ರೆಸ್ ಮತ್ತು ಕಮ್ಯುನಿಷ್ಟ್ ರಿಂದ ಸಮಾಜ ಒಡೆಯುವ ಹುನ್ನಾರ : ಸಿ.ಟಿ.ರವಿ ಆರೋಪ
ಕೆಂಪು ಉಗ್ರರು ಕಾಂಗ್ರೆಸ್ ಹಾಗೂ ಇತರರ ಪಕ್ಷವನ್ನು ಆಶ್ರಯಿಸಿ ಅಧಿಕಾರಕ್ಕೆ ಬಂದಿದ್ದು, ಸೈನ್ಯ ಹಾಗೂ ಸಮಾಜದ ಜನರನ್ನು ದುರ್ಬಲ ಗೊಳಿಸಲು ಮುಂದಾಗಿದ್ದಾರೆ ಎಂದು ಚಿಕ್ಕಮಗಳೂರು ಬಿಜೆಪಿ ಶಾಸಕ ಸಿ ಟಿ ರವಿ ಹೇಳಿದು.
ಮೈಸೂರು, ಮಾರ್ಚ್ 1 : ಕಾಂಗ್ರೆಸ್ ಮತ್ತು ಕಮ್ಯುನಿಷ್ಟ್ ರು ಒಂದಾಗಿದ್ದು, ಹೊಸ ರೂಪದಲ್ಲಿ ಸಮಾಜ ಒಡೆಯಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಆರೋಪಿಸಿದರು.
ಮೈಸೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿಗಳ ಮುಂಭಾಗ ಸಿಟಿಜನ್ಸ್ ಫಾರ್ ಡೆಮಾರ್ಕಸಿ ಸಂಘಟನೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಿ.ಟಿ.ರವಿ ಮಾತನಾಡಿ ಕಮ್ಯುನಿಷ್ಟರ ಮುಖವಾಡ ಬಯಲು ಮಾಡಲು ಈ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ಬಂದೂಕು ಹಾಗೂ ಭಯೋತ್ಪಾದನೆ ಮೂಲಕ ಅಧಿಕಾರ ಹಿಡಿಯುತ್ತಿದ್ದಾರೆ. ಕೇರಳದಲ್ಲಿ 35 ವರ್ಷದಲ್ಲಿ 300ಕ್ಕೂ ಹೆಚ್ಚು ಕಾರ್ಯಕರ್ತರು ಬಲಿಯಾಗಿದ್ದಾರೆ. ಮನೆ, ಮಠ ಕಳೆದುಕೊಂಡಿದ್ದಾರೆ.. 1969 ರಲ್ಲಿ ದಲಿತ ಕಾರ್ಯಕರ್ತರನ್ನು ವಣಿಕಲ್ ರಾಮಕೃಷ್ಣ ಹತ್ಯೆ ಮಾಡಿದರು. ಆದರೆ, ಇವತ್ತು ಕೇರಳದಲ್ಲಿ ಓರ್ವ ಕೊಲೆಗಡುಕ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದಿದ್ದಾರೆ. ಕೆಂಪು ಉಗ್ರರು ಕಾಂಗ್ರೆಸ್ ಹಾಗೂ ಇತರರ ಪಕ್ಷವನ್ನು ಆಶ್ರಯಿಸಿ ಅಧಿಕಾರಕ್ಕೆ ಬಂದಿದ್ದು, ಸೈನ್ಯ ಹಾಗೂ ಸಮಾಜದ ಜನರನ್ನು ದುರ್ಬಲ ಗೊಳಿಸಲು ಮುಂದಾಗಿದ್ದಾರೆ ಎಂದು ಹರಿಹಾಯ್ದರು.

ಜಗತ್ತಿನಲ್ಲಿ ಇವರ ಸಿದ್ದಾಂತಕ್ಕೆ ಬೆಲೆ ಇಲ್ಲದಂತಾಗಿದೆ. ಹೊಸ ರೂಪದಲ್ಲಿ ಸಮಾಜ ಒಡೆಯಲು ಚಿಂತನೆ ನಡೆಯುತ್ತಿದೆ. ಭೂತದ ಬಾಯಲ್ಲಿ ಭಗವದ್ಗೀತೆ ಬರುತ್ತಿದೆ. ಸುಳ್ಳು ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಆದರೂ ದೇಶ ಶಕ್ತಿಯಾಗಿ ಬಿಜೆಪಿ ಮುಂದುವರಿದಿದೆ. ಪ್ರಜಾಪ್ರಭುತ್ವದ ಜನರು ನಿಮಗೆ ಉತ್ತರ ಕೊಡುತ್ತಾರೆ. ಹತ್ಯೆಗೆ ಹೆದರಿ ಓಡುವವರು ಇಲ್ಲಿ ಯಾರೂ ಇಲ್ಲ. ಕೇರಳದಲ್ಲಿ ಒಬ್ಬಬ್ಬನೂ ಕೂಡ ಬಿಜೆಪಿ ಸೇರಿ ಸಂಘಟಿತರಾಗುತ್ತಾರೆ ಎಂದರು.
ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕೇರಳದಲ್ಲಿ ಅವ್ಯಾಹತವಾಗಿ ದಾಳಿ ನಡೆಯುತ್ತಿದೆ. ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಿರಂತರವಾಗಿದೆ. ಕಮ್ಯೂನಿಸ್ಟ್ ರ ಕೇರಳ ಸರ್ಕಾರ ಕಣ್ಣು ಕಿವಿ ಮುಚ್ಚಿಕೊಂಡಿದೆ. ಮಾತನಾಡಿದವರ ಧ್ವನಿ ಹತ್ತಿಕುವ ಕೆಲಸ ನಡೆಯುತ್ತಿದೆ. 1969 ರಲ್ಲಿ ಮೊದಲ ಬಲಿಯಾಗಿದೆ. 300ಕ್ಕೂ ಹೆಚ್ಚು ಕೊಲೆ, ಎರಡು ಸಾವಿರಕ್ಕೂ ಹೆಚ್ಚು ಅತ್ಯಾಚಾರವಾಗಿದೆ. ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆ ನಡೆಸಲಾಗಿದೆ. ಇದಕ್ಕೆಲ್ಲಾ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇರ ಹೊಣೆಗಾರರಾಗಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ರಾಮದಾಸ್, ನಗರಾಧ್ಯಕ್ಷ ಡಾ.ಮಂಜುನಾಥ್, ಮಾ.ವೆಂಕಟರಾಮು, ಸಿ.ಹೆಚ್. ವಿಜಯಶಂಕರ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.












Click it and Unblock the Notifications