ಮೈಸೂರು – ಕೊಡಗು ಕ್ಷೇತ್ರ: ಮೈತ್ರಿ ಪಕ್ಷದ ನಡುವೆ ಮುಂದುವರೆದ ಮುಸುಕಿನ ಗುದ್ದಾಟ!
ಮೈಸೂರು, ಮಾರ್ಚ್ 31 : ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಕಾರಣ ನಾಮಪತ್ರದಿಂದ ಹಿಡಿದು ಇಲ್ಲಿಯವರೆಗೂ ಮೈಸೂರಿನ ಉಸ್ತುವಾರಿ ಸಚಿವ ಜಿಟಿ ದೇವೇಗೌಡ ಕಣ್ಮರೆಯಾದಂತೆ ಕಾಣುತ್ತಿದೆ. ಇದಕ್ಕೆ ಪ್ರಮುಖ ಕಾರಣ ಜೆಡಿಎಸ್ ನಾಯಕರ ಅಸಹಕಾರ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಜೆಡಿಎಸ್ ನಲ್ಲಿ ಅಸಮಾಧಾನದ ಹಿನ್ನೆಲೆಯಲ್ಲಿ ಬೇಸತ್ತ ಕಾಂಗ್ರೆಸ್ ನಾಯಕರು ಸ್ಥಳೀಯ ಜೆಡಿಎಸ್ ನಾಯಕರನ್ನ ಕಡೆಗಣಿಸಿ ತಾವೇ ಪ್ರಚಾರಕ್ಕೆ ಮುಂದಾಗಿದ್ದಾರೆ. ಇಂದಿನಿಂದ ಮೈತ್ರಿ ಅಭ್ಯರ್ಥಿಯಾಗಿ ಸಿ.ಎಚ್ ವಿಜಯ್ ಶಂಕರ್ ಬಹಿರಂಗ ಪ್ರಚಾರ ಆರಂಭಿಸಿದ್ದಾರೆ.
ಪ್ರಚಾರದ ಕರಪತ್ರದಲ್ಲಿ ಸ್ಥಳೀಯ ಜೆಡಿಎಸ್ ಮುಖಂಡರ ಫೋಟೋಗಳಿಗೆ ಕೋಕ್ ನೀಡಲಾಗಿದೆ. ಇದರಲ್ಲಿ ಜೆಡಿಎಸ್ ವರಿಷ್ಠರಾದ ದೇವೇಗೌಡರು ಹಾಗೂ ಸಿಎಂ ಎಚ್.ಡಿ ಕುಮಾರಸ್ವಾಮಿ ಫೋಟೋ ಮಾತ್ರ ಪ್ರಚಾರಕ್ಕೆ ಬಳಕೆ ಮಾಡಲಾಗಿದೆ. ಪ್ರಚಾರದ ಕರಪತ್ರದಲ್ಲಿ ಜೆಡಿಎಸ್ ಸ್ಥಳೀಯ ನಾಯಕರ ಚಿತ್ರಗಳನ್ನು ಬಳಸಿಕೊಂಡಿಲ್ಲ.

ಕಾಂಗ್ರೆಸ್ ತನ್ನ ಪ್ರಚಾರ ವೇಳಾಪಟ್ಟಿಯ ಮಾಹಿತಿ ಇರುವ ಪಾಂಪ್ಲೆಟ್ ಗಳಲ್ಲಿ ಕೈ-ತೆನೆ ಚಿಹ್ನೆಗಳನ್ನು ಮಾತ್ರ ಪ್ರಚಾರಕ್ಕೆ ಬಳಕೆ ಮಾಡಲಾಗಿದ್ದು, ಪ್ರಕಟಣೆ ಕಾಂಗ್ರೆಸ್ ನಗರ ಹಾಗೂ ಗ್ರಾಮಾಂತರ ಸಮಿತಿ ಎಂದು ಉಲ್ಲೇಖಿಸಿದೆ.
ಕಳೆದ ಎರಡು ದಿನಗಳ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮೈಸೂರಿನಲ್ಲಿ ನಡೆದಿದ್ದ ಮೈತ್ರಿ ಪಕ್ಷದ ಕಾರ್ಯಕರ್ತರ ಸಭೆಗೆ ಸಚಿವರಾದ ಸಾರಾ ಮಹೇಶ್ ಮತ್ತು ಜಿಟಿ ದೇವೇಗೌಡರು ಗೈರಾಗಿದ್ದರು.
ಮೈಸೂರಿನ ಸ್ಥಳೀಯ ನಾಯಕರಾದ ಉಸ್ತುವಾರಿ ಸಚಿವ ಜಿ ಟಿ ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಪೋಟೋಗೆ ಕೋಕ್ ನೀಡಲಾಗಿದ್ದು, ಕಾಂಗ್ರೆಸ್ನಿಂದ ರಾಹುಲ್ಗಾಂಧಿ, ಸಿದ್ದರಾಮಯ್ಯ ,ಪರಮೇಶ್ವರ್, ಗುಂಡೂರಾವ್, ಎಚ್.ಕೆ.ಪಾಟೀಲ್, ಈಶ್ವರ್ ಖಂಡ್ರೆ ಪೋಟೋಗಳನ್ನು ಮಾತ್ರ ಬಳಕೆ ಮಾಡಲಾಗಿದೆ.












Click it and Unblock the Notifications