ಸಚಿವ ಸಂಪುಟ ವಿಸ್ತರಣೆಗೆ ದಿಗ್ವಿಜಯ್ ಸರ್ಟಿಫಿಕೇಟ್
ಮೈಸೂರು, ಮೇ.10: ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ನಡುವೆ ಸಚಿವರ ಕಾರ್ಯವೈಖರಿ ಬಗ್ಗೆ ವರದಿ ತಯಾರಾಗುತ್ತಿದ್ದು, ದಿಗ್ವಿಜಯ್ ಸಿಂಗ್ ಸರ್ಟಿಫಿಕೇಟ್ ಸಿಕ್ಕ ಮೇಲೆ ಸಚಿವ ಸಂಪುಟದ ಸ್ವರೂಪ ತಿಳಿಯಲಿದೆ.
ಮೇ.13ರಂದು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಲಿದ್ದು, ಅದರ ಬೆನ್ನಲ್ಲೇ ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ, ಮಂಡಳಿಗೆ ಅಧ್ಯಕ್ಷರ ನೇಮಕ ಮಾಡುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.
ಮೇ.14ರಂದು ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕೋರ್ ಕಮಿಟಿ ಸಭೆ ನಡೆಯಲಿದೆ. ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎನ್ನುವ ಮೂಲಕ ಫಲಿತಾಂಶ ಏನೇ ಆಗಲಿ ತಮ್ಮ ನಾಯಕತ್ವ ಬದಲಾವಣೆ ಇಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಷ್ಟು ಜನಕ್ಕೆ ಸ್ಥಾನ? : ಸಚಿವ ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳನ್ನು ಮಾತ್ರ ಭರ್ತಿ ಮಾಡಲಾಗುತ್ತದೋ ಅಥವಾ ಫಲಿತಾಂಶದ ಆಧಾರದ ಮೇಲೆ ಕೆಲವು ಸಚಿವರ ತಲೆದಂಡ ಮಾಡಲಾಗುತ್ತದೋ ಅಥವಾ ಖಾತೆಗಳ ಮರು ಹಂಚಿಕೆ ಮಾಡಲಾಗುತ್ತದೆ ಎಂಬ ಬಗ್ಗೆ ಸಿದ್ದರಾಮಯ್ಯ ಅವರು ಯಾವುದೇ ಸುಳಿವು ಬಿಟ್ಟುಕೊಡಲಿಲ್ಲ.

ಸಂಪುಟ ಪುನಾರಚನೆ, ನಿಗಮ, ಮಂಡಳಿಗಳ ನೇಮಕಾತಿ
ಸಂಪುಟ ಪುನಾರಚನೆ, ನಿಗಮ, ಮಂಡಳಿಗಳ ನೇಮಕಾತಿಯ ಜೊತೆಗೆ ವಿಧಾನ ಪರಿಷತ್ ಹಾಗೂ ರಾಜ್ಯಸಭೆಯ ದೈವಾರ್ಷಿಕ ಚುನಾವಣೆಗಳು ಎದುರಾಗುತ್ತಿವೆ. ಕಾಂಗ್ರೆಸ್ ರಾಜ್ಯಸಭೆಯ ಎರಡು, ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳನ್ನು ಗೆಲ್ಲಲಿದೆ. ಇದಲ್ಲದೇ ನಾಮಕರಣ ಸದಸ್ಯ ಸ್ಥಾನಗಳು ಖಾಲಿಯಾಗುತ್ತಿವೆ. ಶಿಕ್ಷಕ ಹಾಗೂ ಪದವೀಧರ ಕ್ಷೇತ್ರಗಳ ಎರಡು ಸ್ಥಾನಗಳಿಗೂ ಚುನಾವಣೆ ನಡೆಯಬೇಕಿದೆ.

ಸಂಪುಟಕ್ಕೆ ಜಿ ಪರಮೇಶ್ವರ್ ಪ್ರವೇಶ ಖಚಿತ
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರು ಮೇಲ್ಮನೆ ಸದಸ್ಯರಾಗಿ ರಾಜ್ಯ ಸಚಿವ ಸಂಪುಟ ಪ್ರವೇಶಿಸುವ ಪ್ರಯತ್ನದಲ್ಲಿದ್ದಾರೆ. ಅದರಲ್ಲೂ ಉಪ ಮುಖ್ಯಮಂತ್ರಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಇದಲ್ಲದೇ ಐದಾರು ಬಾರಿ ಗೆದ್ದಿರುವ ಹಲವಾರು ಶಾಸಕರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ರಾಹುಲ್ ಗಾಂಧಿ ಅಸಮಧಾನ ವ್ಯಕ್ತಪಡಿಸಿದ್ದಾರೆ
ರಾಜ್ಯದ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ ಬಗ್ಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅಸಮಧಾನ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿಯಿದೆ. ಹೀಗಾಗಿ ತುರ್ತಾಗಿ ಕೋರ್ ಕಮಿಟಿ ಸಭೆ ಆಯೋಜನೆಗೊಂಡಿದೆ.

ಒಂದು ವರ್ಷದಲ್ಲಿ ಸಚಿವರು ಮಾಡಿದ ಸಾಧನೆ ಏನು ?
ಸಿದ್ದರಾಮಯ್ಯಸಂಪುಟದ ಅರ್ಧದಷ್ಟು ಸಚಿವರ ಅಂಕಪಟ್ಟಿಯನ್ನು ಅಳೆದು ತೂಗಿ ದಿಗ್ವಿಜಯ್ ಸಿಂಗ್ ನೀಡುವ ಸರ್ಟಿಫಿಕೆಟ್ ಆಧರಿಸಿ ಸಂಪುಟ ವಿಸ್ತರಣೆ ನಡೆಸುವಂತೆ ಸಿದ್ದರಾಮಯ್ಯ ಅವರಿಗೆ ಸೂಚನೆ ಸಿಕ್ಕಿದೆ. ಕಳೆದ ಒಂದು ವರ್ಷದಲ್ಲಿ ಸಚಿವರು ಮಾಡಿದ ಸಾಧನೆ ಏನು ಎಂಬುದರ ಬಗ್ಗೆ ವಿವರ ಒದಗಿಸುವಂತೆ ಸಿದ್ದರಾಮಯ್ಯ ಅವರು ತಮ್ಮ ಸಹದ್ಯೋಗಿಗಳಿಗೆ ಈಗಗಾಲೇ ಸೂಚಿಸಿದ್ದಾರೆ.

ಕೋರ್ ಕಮಿಟಿ ಸಭೆಯಲ್ಲಿ
ಸಮನ್ವಯ ಸಮಿತಿ ಸದಸ್ಯರಾದ ರಾಜ್ಯ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿ ಡಾ. ಚಲ್ಲಕುಮಾರ್, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್, ಸಚಿವ ಡಿಕೆ ಶಿವಕುಮಾರ್, ಕೆಜೆ ಜಾರ್ಜ್ ಅವರು ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.












Click it and Unblock the Notifications