ಸಿದ್ದರಾಮಯ್ಯ ವಿರುದ್ಧ ಗುಡುಗಿದ ನಿರ್ಮಲಾ ಸೀತಾರಾಮನ್
ಮೈಸೂರು, ಜುಲೈ 13: 'ಮುಖ್ಯಮಂತ್ರಿಗಳೇ ಏನು ಮಾಡ್ತಿದ್ದೀರಾ? ನಾಡಿನ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಮಹತ್ತರ ಜವಾಬ್ದಾರಿ ನಿಮ್ಮ ಮೇಲಿದೆ. ಅದನ್ನು ಮೊದಲು ಕಾಪಾಡಿ' ಎಂದು ಕೇಂದ್ರ ವಾಣಿಜ್ಯ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಮೈಸೂರಿನ ಎನ್.ಆರ್.ಮೊಹಲ್ಲಾದ ರಾಜೇಂದ್ರನಗರದ ಉದ್ಯಾನವನದಲ್ಲಿ ಇಂದು(ಜು.13) ಬಿಜೆಪಿ ವಿಸ್ತಾರಕ ಕಾರ್ಯಕ್ರಮದಲ್ಲಿ ಖುದ್ದು ಕಸ ಗುಡಿಸಿ, ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

'ಸ್ವಚ್ಛತಾ ಆಂದೋಲನ ಮೋದಿಯವರ ಕನಸು. ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರದ ವಿನೂತನ ಯೋಜನೆಯಾಗಿದೆ. ಎಲ್ಲ ರಾಜ್ಯ ಜಿಲ್ಲೆಗಳಲ್ಲಿಯೂ ಕೂಡ ಅಳವಡಿಸಿಕೊಂಡು ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ' ಎಂದರು. ಮಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳು ಸೂಕ್ಷ್ಮ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ನಾಡಿನ ಹಿತ ಕಾಯಬೇಕು. ಶಾಂತಿ ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕು ಎಂದರು.

ಸಿಎಂ ಆಪ್ತರಿಂದಲೇ ಶರತ್ ಮಡಿವಾಳ ಕೊಲೆ:
ಇದೇ ವೇಳೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸಿಎಂ ಸಿದ್ದರಾಮಯ್ಯ ಅವರ ಪ್ರೀತಿ ಪ್ರೀತಿ ಪಾತ್ರರೇ ಆರ್ ಎಸ್ ಎಸ್ ಮುಖಂಡ ಶರತ್ ಮಡಿವಾಳ ಹತ್ಯೆ ಮಾಡಿದ್ದು. ಹಿಂದು ಹೆಸರು ನಿಮ್ಮ ಬಾಯಲ್ಲಿ ಸಲೀಸಾಗಿ ಬರುತ್ತದೆ. ಆದರೆ ಮುಸ್ಲೀಂರ ಹೆಸರು ಏಕೆ ಸಲೀಸಾಗಿ ಬರಲ್ಲ. ವೋಟ್ ಬ್ಯಾಂಕ್ ಕೈತಪ್ಪುತ್ತೆ ಎಂಬ ಆತಂಕವೇ ಎಂದು ಪ್ರಶ್ನಿಸಿದರು.

ಹತ್ಯೆ ಮಾಡಿದವರ ಪರ ನಿಂತರೇ ಹೇಗೆ ಶಾಂತಿ ನೆಲೆಸುತ್ತೆ ಎಂದು ಸಿಎಂ ಸಿದ್ದರಾಮಯ್ಯರನ್ನ ಪ್ರಶ್ನಿಸಿದ ಪ್ರತಾಪ್ ಸಿಂಹ, ಹತ್ಯೆ ಮಾಡಿದವರ ಬೆನ್ನಿಗೆ ನಿಂತು ಸಂಘಪರಿವಾರದವರನ್ನ ಮತ್ತು ಬಿಜೆಪಿಯವರನ್ನ ಹೆದರಿಸುತ್ತೀರಾ. ಇದೆಂತಹ ರಾಜನೀತಿ? ಇನ್ನು 10 ತಿಂಗಳಾದ್ರೂ ಸಿಎಂ ಆಗಿ ಕೆಲಸ ಮಾಡಿ ಎಂದು ಟಾಂಗ್ ನೀಡಿದರು.












Click it and Unblock the Notifications