ಯು.ಆರ್.ರಾವ್ ಆತ್ಮಕ್ಕೆ ಶಾಂತಿ ಸಿಗಲಿ: ಸಿದ್ದರಾಮಯ್ಯ
ಸುಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ ಪ್ರೊ ಯು ಆರ್ ರಾವ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಭಾರತದ ಹೆಮ್ಮೆಯ ಬಾಹ್ಯಾಕಾಶ ವಿಜ್ಞಾನಿ ಯು.ಆರ್.ರಾವ್ ವ್ಯಕ್ತಿ ಚಿತ್ರ
ನಾಲ್ಕು ದಶಕಗಳ ಹಿಂದೆಯೇ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಭಾರತದ ಪ್ರಪ್ರಥಮ ಉಪಗ್ರಹ ಆರ್ಯಭಟ, ಭಾಸ್ಕರ, ಆಪಲ್, ರೋಹಿಣಿ ಹಾಗೂ ಬಹು-ಉದ್ದೇಶಿತ ಇನ್ಸ್ಯಾಟ್ ಸರಣಿಯ ಉಪಗ್ರಹಗಳನ್ನು ಒಳಗೊಂಡಂತೆ 18 ಉಪಗ್ರಹಗಳ ಉಡಾವಣೆಯ ರೂವಾರಿಯಾಗಿ ಭಾರತೀಯ ಸಂವಹನ, ದೂರ ಸಂವೇದಿ ಹಾಗೂ ಹವಾಮಾನ ಸೇವೆಗಳಲ್ಲಿ ಕ್ರಾಂತಿಕಾರಕ ಬದಲಾಣೆ ತಂದ ಕೀರ್ತಿ ಡಾ ಉಡುಪಿ ರಾಮಚಂದ್ರ ರಾವ್ ಅವರದು.
ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶದಲ್ಲಿರುವ ವ್ಯಕ್ತಿಯೊಡನೆ ಮೂರು ನಿಮಿಷಗಳ ಸಂಭಾಷಣೆ ನಡೆಸಲು ಟ್ರಂಕ್ ಕಾಲ್ ಬುಕ್ ಮಾಡಿ ಮೂರು ತಾಸುಗಳು ಕಾಯಬೇಕಾಗಿದ್ದ ಕಾಲವಿತ್ತು. ಅಂತಹ ಸಂದರ್ಭದಲ್ಲಿ ಒಮ್ಮೆಲೆ ದೇಶಾದ್ಯಂತ ನೇರ ದೂರ ಸಂಪರ್ಕ ಕಲ್ಪಿಸುವ (ಸ್ಟ್ರೇಟ್ ಟ್ರಂಕ್ ಡಯಲಿಂಗ್ ) ಜಾಲದ ವಿಸ್ತರಣೆಯಾದದ್ದು ಸಂವಹನ ಉಪಗ್ರಹದ ಉಡಾವಣೆಯಿಂದ ! ರಾಷ್ಟ್ರದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಎಲ್ಲೆಡೆ ಹಾಗೂ ಎಲ್ಲೆಲ್ಲೂ ಆವರಿಸಲು ಪ್ರೊ ಯು ಆರ್ ರಾವ್ ಅವರ ದೂರದೃಷ್ಟಿ ಕಾರಣ ಎಂಬುದನ್ನು ನಾವಿಂದು ಸ್ಮರಿಸಬೇಕು.
ಪ್ರೊ ಯು ಆರ್ ರಾವ್ ಅವರಿಗೆ ಲಭಿಸಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪದ್ಮಭೂಷಣ ಹಾಗೂ ಪದ್ಮವಿಭೂಷಣ ಪ್ರಶಸ್ತಿ ಒಳಗೊಂಡಂತೆ ಅನೇಕ ಪ್ರಶಸ್ತಿ-ಪುರಸ್ಕಾರಗಳು, ಗೌರವ ಡಾಕ್ಟರೇಟ್ಗಳು ಹಾಗೂ ಪ್ರತಿಷ್ಠಿತ ಪದಕಗಳು ಆಗಸದೆತ್ತರದ ಅವರ ಅಪಾರ ಸಾಧನೆಯನ್ನು ಬಿಂಬಿಸುತ್ತವೆ.
ನಾನು ಅವರೊಡನೆ ಹಲವು ಬಾರಿ ವೇದಿಕೆಯನ್ನು ಹಂಚಿಕೊಂಡಾಗ ಅವರಲ್ಲಿನ ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಗಳನ್ನು ಗಮನಿಸಿದ್ದೇನೆ. ಭಾರತದ ಬಾಹ್ಯಾಕಾಶ ಲೋಕದಲ್ಲಿ ಬಹು ದೊಡ್ಡ ಶಕ್ತಿಯಾಗಿ ಬೆಳೆದಿದ್ದ ಇಂತಹ ಮೇರು ವ್ಯಕ್ತಿ ಇದೀಗ ನಮ್ಮೊಡನೆ ಇಲ್ಲ ಎಂಬುದನ್ನು ನಂಬಲು ಸಾಧ್ಯವಿಲ್ಲ. ಭಾರತದ ಸುಪುತ್ರ ಹಾಗೂ ಹೆಮ್ಮೆಯ ಕನ್ನಡಿಗ ಪ್ರೊ ಯು ಆರ್ ರಾವ್ ಅವರ ಗಮನಾರ್ಹ ಸಾಧನೆಗಳು ಸದಾ ನಮ್ಮೊಡನೆ ಇರುವಾಗ ನಾವು ಅವರನ್ನು ಮರೆಯಲು ಹೇಗೆ ಸಾಧ್ಯ?
ಪ್ರೊ.ರಾವ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಅಗಲಿಕೆಯಿಂದ ಉಂಟಾದ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನಮ್ಮೆಲ್ಲರಿಗೂ ಕರುಣಿಸಲಿ ಎಂದು ಸಿದ್ದರಾಮಯ್ಯ ಅವರು ತಮ್ಮ ಸಂದೇಶದಲ್ಲಿ ಬಣ್ಣಿಸಿದ್ದಾರೆ.