ನನ್ನ ಬಗ್ಗೆ ಮಾತನಾಡುವ ನೈತಿಕತೆ ಸಿಎಂಗಿಲ್ಲ: ಶ್ರೀನಿವಾಸ್ ಪ್ರಸಾದ್
ಮೈಸೂರು, ಡಿಸೆಂಬರ್ 27: ನನ್ನ ರಾಜಕೀಯ ಜೀವನದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದ್ದೇನೆ. 45 ವರ್ಷದ ರಾಜಕೀಯ ಜೀವನದಿಂದ ಗೌರವಾನ್ವಿತ ನಿವೃತ್ತಿ ಬಯಸಿದ್ದೆ. ಆದರೆ ಹತ್ತಿರದಲ್ಲೆ ಇದ್ದ ಸಿದ್ದರಾಮಯ್ಯ ಮಾಸದ ಗಾಯ ಮಾಡಿಬಿಟ್ಟರು ಎಂದು ಮಾಜಿ ಸಚಿವ ವಿ.ಶ್ರೀನಿವಾಸ್ಪ್ರಸಾದ್ ನೋವಿನಿಂದ ನುಡಿದರು.
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ್ ಪ್ರಸಾದ್ ಮಾತನಾಡಿ, ನನ್ನನ್ನು ಸಂಪುಟದಿಂದ ಬಿಟ್ಟಿದ್ದಕ್ಕೆ ಬೇಸರವಿಲ್ಲ. ಆದರೆ ಬಿಡುವುದಕ್ಕೆ ನೀಡಿದ ಕಾರಣದಿಂದ ಬೇಸರವಾಗಿದೆ. ಬಲಿಷ್ಠ ಸಂಪುಟದಲ್ಲಿ ಯಾವ ಯಾವ ಅಣಿಮುತ್ತುಗಳಿದ್ದಾರೆ ಅಂತ ಇಂದು ಸಿದ್ದರಾಮಯ್ಯನವರಿಗೆ ಗೊತ್ತಾಗಿದೆ.[ಶ್ರೀನಿವಾಸ್ ಪ್ರಸಾದ್ ಗೆ ಅಧಿಕೃತ ಆಹ್ವಾನ ನೀಡಿದ ಬಿಜೆಪಿ]

ಒಬ್ಬ ದಲಿತ ನಾಯಕ ಇರಬೇಕು ಅಂತ ಕಾಂಗ್ರೆಸ್ ಹೈಕಮಾಂಡ್ ಸಹ ಹೇಳಿತ್ತು. ಸಿದ್ದರಾಮಯ್ಯ ಹೈಕಮಾಂಡ್ ಮಾತು ಕೇಳಲಿಲ್ಲ. ಆ ಕುರಿತು ನಾನು ತೀಕ್ಷವಾಗಿ ಪ್ರತಿಕ್ರಿಯಿಸಿದರೂ ಅದನ್ನು ಪ್ರಶ್ನಿಸಲು ಕಾಂಗ್ರೆಸ್ನವರಿಗೆ ನೈತಿಕತೆಯೇ ಇರಲಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಕ್ ಪ್ರಹಾರ ನಡೆಸಿದರು. ಈ ಕಾರಣಕ್ಕೆಯೇ ನನ್ನ ಮುಂದಿನ ನಿರ್ಧಾರ ಕೈಗೊಂಡು ಮತ್ತೊಂದು ಪಕ್ಷ ಸೇರುವ ತಿರ್ಮಾನ ಮಾಡಿದ್ದೇನೆ. ಕಾಂಗ್ರೆಸ್ ಬಿಟ್ಟು ಮತ್ತೊಂದು ರಾಷ್ಟ್ರೀಯ ಪಕ್ಷ ಬಿಜೆಪಿ ಸೇರಲು ನಿರ್ಧಾರ ಮಾಡಿದ್ದೇನೆ ಎಂದರು.
ಮಲ್ಲಿಕಾರ್ಜುನ ಖರ್ಗೆ ನನ್ನ ಬಗ್ಗೆ ಮಾತನಾಡುತ್ತಾರೆ. ಅವರಿಗೆ ನನ್ನ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ನೀವು ಮಂತ್ರಿಯಾಗಲೂ ನಾನು ಸಹಾಯ ಮಾಡಿದ್ದೇನೆ. ಈಗ ಯಾವ ಮುಖ ಇಟ್ಟುಕೊಂಡು ಬರುತ್ತೀರಾ? ದಲಿತರಿಗೆ ಅನ್ಯಾಯವಾದಾಗ ಪರಮೇಶ್ವರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಯಾಕೆ ಮೌನವಾಗಿದ್ದರು. ಇವರಿಬ್ಬರಿಗೂ ಮಾನ, ಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದರು.

ಸಾಮಾಜಿಕ ನ್ಯಾಯಕ್ಕೆ ಯಾರು ವಾರಸ್ದಾರರಲ್ಲ. ಬುದ್ದನ ಬಗ್ಗೆ ಹಿಂದೆ ಯಾವತ್ತಾದ್ದರೂ ಮಾತನಾಡಿದ್ದೀರಾ ನೀವು. ಬುದ್ದನ ಬಗ್ಗೆ ಏನ್ ಗೊತ್ತು ನಿಮಗೆ. ಅಂಬೇಡ್ಕರ್ ಬಗ್ಗೆ ಯಾಕೆ ಮಾತನಾಡುತ್ತೀರಿ. ಅಂಬೇಡ್ಕರ್ ಹೆಸರನ್ನು ರಾಜಕೀಯಕ್ಕೆ ಯಾಕೆ ಬಳಸುತ್ತೀದ್ದೀರಿ, ಸೆಕ್ಯೂಲರಿಸಂ ಅಂದರೆ ಏನಂತ ಗೊತ್ತಾ ಎಂದು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದರು.[ಶಾಸಕ ಸ್ಥಾನಕ್ಕೆ ವಿ. ಶ್ರೀನಿವಾಸ್ ಪ್ರಸಾದ್ ರಾಜೀನಾಮೆ]
ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಕುಪ್ಪೆಗಾಲದ ಪ್ರಕರಣದ ಬಗ್ಗೆ ಯಾಕೆ ಮಾತನಾಡಲಿಲ್ಲ. ಅವರ ಹುಟ್ಟೂರಿನ ಪಕ್ಕದಲ್ಲೆ ಇದ್ದ ಶಾಲೆಯಲ್ಲಿ ಅಸ್ಪೃಶ್ಯತೆ ಇದ್ದಾಗ ಎಲ್ಲಿ ಹೋಗಿದ್ದರು. ನಾನು ಜಿಲ್ಲಾ ಮಂತ್ರಿಯಾಗಿದ್ದ ವೇಳೆ ಅವರನ್ನು ಒಂದೆರಡು ಮಾತು ಆಡಿ ಎಂದಿದ್ದಕ್ಕೆ ನೀವೆ ಇದ್ದೀರಲ್ಲ ಎಂದು ಸಮಜಾಯಿಶಿ ನೀಡಿದ್ದರು. ಆದರೆ ಮೈಸೂರು ಭೇಟಿ ದಿನ ಪ್ರತಿಭಟನೆ ಆಗುತ್ತೆ ಅಂತ ತಿಳಿದು ರಾತ್ರೋರಾತ್ರಿ ಮೀಟಿಂಗ್ ಮಾಡಿ ಸಮಾಧಾನ ಮಾಡಿದರು. ಅಂಥಹವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತೀರಾ? ನಿಮ್ಮ ಒಂದು ಮುಖ ಮಾತ್ರ ಜನರಿಗೆ ಗೊತ್ತಿದೆ. ಸಿದ್ದರಾಮಯ್ಯನವರ ಇನ್ನೊಂದು ಮುಖ ಜನರಿಗೆ ತಿಳಿಯಬೇಕಿದೆ ಎಂದರು.

ನಾನು ಒಬ್ಬ ಬುದ್ದಿಸ್ಟ್
ಬಿಜೆಪಿ ಅವರು ಬೌದ್ದರಿಗೆ ಪ್ರವೇಶವಿಲ್ಲ ಅಂತಾ ಹೇಳಿದ್ದಾರಾ ? ಜಾತಿ ಗಣತಿ ವೇಳೆ ನಾನು ಬೌದ್ಧ ಅಂತಾ ನಮೂದಿಸಿದ್ದೇನೆ. ಕಾರಿನ ಮೇಲೆ ಕಾಗೆ ಕುಳಿತ ತಕ್ಷಣ ನೀವು ಕಾರು ಬದಲಾಯಿಸಲಿಲ್ಲವೇ? ಹೆಲಿಕಾಪ್ಟರ್ ನಲ್ಲಿ ಬೆಂಕಿ ಕಾಣಿಸಿಕೊಂಡಾಗ ನೀವು ತಿರುಪತಿಗೆ ಕುಟುಂಬ ಸಮೇತ ಹೋಗಿ ಪೂಜೆ ಮಾಡಲಿಲ್ಲವೇ? ಆದ್ರೂ ನೀವು ಧರ್ಮದ ಆಚಾರಗಳ ಬಗ್ಗೆ ಮಾತನಾಡುತ್ತೀರಾ? ಎಂದು ತೀಕ್ಷಣವಾಗಿ ಸಿದ್ದರಾಮಯ್ಯ ನಡೆಯ ಬಗ್ಗೆ ಪ್ರತಿಕ್ರಿಯಿಸಿದರು.
ಮೈಸೂರು ಜಿಲ್ಲೆಯಲ್ಲಿ ಮುಂದುವರೆದ ಪಕ್ಷಾಂತರ ಪರ್ವ
ಕಾಂಗ್ರೆಸ್ ಪಕ್ಷದ ನಾಯಕ ಸಿ. ಬಸವೇಗೌಡ ಶ್ರೀನಿವಾಸ್ ಪ್ರಸಾದ್ ಅವರ ಜೊತೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು. ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಸಿ. ಬಸವೇಗೌಡ ಉಪಸ್ಥಿತರಿದ್ದರು. ಆರಂಭದಲ್ಲಿ ಜೆಡಿಎಸ್ ನಲ್ಲಿದ್ದ ಬಸವೇಗೌಡ ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಕಳೆದ ಹಲವಾರು ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷದಲ್ಲಿದ್ದ ಬಸವೇಗೌಡರು, ಶ್ರೀನಿವಾಸಪ್ರಸಾದ್ ಅವರ ಜೊತೆಯಲ್ಲಿ ಕಾಣಿಸಿಕೊಳ್ಳುವ ಆಶ್ವರ್ಯ ಮೂಡಿಸಿದ್ದಲ್ಲದೇ, ಜನವರಿ ೨ರಂದು ಬಿಜೆಪಿ ಸೇರಲಿದ್ದೇನೆ ಎಂದು ತಿಳಿಸಿದರು.












Click it and Unblock the Notifications