Breaking; ಹಣ್ಣುಕಾಯಿ ದರ ವಿಚಾರಿಸಿದ ಬಸವರಾಜ ಬೊಮ್ಮಾಯಿ!
ಮೈಸೂರು, ಅಕ್ಟೋಬರ್ 04; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಂಬೂ ಸವಾರಿಗೆ ಚಾಲನೆ ನೀಡಲು ಮೈಸೂರಿನಲ್ಲಿದ್ದಾರೆ. ಬುಧವಾರ ಬೆಳಗ್ಗೆ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರು.
ವಿಜಯದಶಮಿಯ ಪ್ರಯುಕ್ತ ಬಸವರಾಜ ಬೊಮ್ಮಾಯಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬುಧವಾರ ಬೆಳಗ್ಗೆ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿದರು. ಬಳಿಕ ಸ್ಥಳೀಯ ವರ್ತಕರೊಂದಿಗೆ ಸಂವಾದ ನಡೆಸಿದರು.
ಚಾಮುಂಡಿ ಬೆಟ್ಟದ ಹೊರಗೆ ಹಣ್ಣುಕಾಯಿ ವ್ಯಾಪಾರಿಗಳ ಕುಶುಲೋಪರಿ ವಿಚಾರಿಸಿದ ಮುಖ್ಯಮಂತ್ರಿಗಳು, ಹಬ್ಬದ ಶುಭಾಶಯಗಳನ್ನು ವಿನಿಮಯಮಾಡಿಕೊಂಡರು.

ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ ಬಳಿಕ ಚಿನ್ನದ ಅಂಬಾರಿಯಲ್ಲಿ ಇಡುವ ನಾಡದೇವಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಮೈಸೂರಿನ ಅರಮನೆಗೆ ತೆಗೆದುಕೊಂಡು ಹೋಗಲಾಯಿತು.
ವ್ಯಾಪಾರಿಗಳ ಜೊತೆ ಮಾತು; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೇವಾಲಯದಿಂದ ಹೊರಬಂದು ವ್ಯಾಪಾರಿಗಳತ್ತ ಕೈ ಬೀಸಿದರು. ಹಣ್ಣುಕಾಯಿ ವ್ಯಾಪಾರ ಮಾಡುತ್ತಿದ್ದ ಮಹಿಳೆ ಬಳಿ ವ್ಯಾಪಾರ ಹೇಗೆ ನಡೆಯುತ್ತಿದೆ? ಎಂದು ಕೇಳಿದರು.

ಪೂಜೆ ಹಣ್ಣುಕಾಯಿಗೆ ಎಷ್ಟು ರೂ. ಎಂದು ಮುಖ್ಯಮಂತ್ರಿಗಳು ವಿಚಾರಿಸಿದರು. ಆಗ ಮಹಿಳೆ 100 ರೂ. ಎಂದು ಹೇಳಿದರು. ಆಗ ಬಸವರಾಜ ಬೊಮ್ಮಾಯಿ ಜಾಸ್ತಿ ಮಾಡಿಬಿಟ್ಟಿದ್ದೀರಾ? ಎಂದರು. ಮಹಿಳೆ ಇಲ್ಲಣ್ಣ ಎಂದು ಉತ್ತರ ನೀಡಿದರು.
ಐತಿಹಾಸಿಕ ಜಂಬೂ ಸವಾರಿ; 10 ದಿನಗಳ ಮೈಸೂರು ದಸರಾಕ್ಕೆ ಬುಧವಾರ ಸಂಜೆ ಐತಿಹಾಸಿಕ ಜಂಬೂಸವಾರಿ ಮೂಲಕ ತೆರೆ ಬೀಳಲಿದೆ. ಮಧ್ಯಾಹ್ನ 2.36ರಿಂದ 2.50ರ ಒಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ.
ಈ ಬಾರಿ ಜಂಬೂ ಸವಾರಿ ತಡವಾಗಿ ಆರಂಭವಾಗಲಿದೆ. ಸಂಜೆ 5.07 ರಿಂದ 5.18ರ ಒಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಜಂಬೂಸವಾರಿ ಮೆರವಣಿಗೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಸೇರಿದಂತೆ 8 ಮಂದಿ ಗಣ್ಯರು ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.
ಜಂಬೂಸವಾರಿ ಅರಮನೆಯ ಆವರಣದಿಂದ ಹೊರಟು ಬನ್ನಿಮಂಟಪ ತಲುಪಲಿದೆ. ದಸರಾದ ಅಂತಿಮ ಕಾರ್ಯಕ್ರಮವಾಗಿರುವ ಪಂಜಿನ ಕವಾಯತಿಗೆ ಸಿದ್ಧತೆಗಳು ನಡೆಯುತ್ತಿದೆ. ಈ ಬಾರಿಯ ಪಂಜಿನಕವಾಯತುವಿನಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪಾಲ್ಗೊಳ್ಳುತ್ತಿಲ್ಲ.












Click it and Unblock the Notifications