ಆರ್ ಕೆ ನಾರಾಯಣ್ ಮನೆ ಇನ್ಮುಂದೆ ನಮ್ಮೆಲ್ಲರ ಆಸ್ತಿ
ಮೈಸೂರು, ಏ.4: ಕಾದಂಬರಿಕಾರ ಆರ್ ಕೆ ನಾರಾಯಣ್ ಅವರ ನೆಚ್ಚಿನ ತಾಣವನ್ನು ಕೊನೆಗೂ ಮೈಸೂರು ನಗರ ಪಾಲಿಕೆ ಖರೀದಿ ಮಾಡಿಕೊಂಡು ಸಾರ್ವಜನಿಕರ ಆಸ್ತಿಯನ್ನಾಗಿಸಿದೆ. ಇಂಗ್ಲೆಂಡಿನಲ್ಲಿ ಶೇಕ್ಸ್ ಪಿಯರ್ ಅವರ ಮನೆ ಮಾದರಿಯಲ್ಲೇ ಆರ್ ಕೆ ನಾರಾಯಣ್ ಅವರ ಮನೆಯನ್ನು ಪಾರಂಪರಿಕ ಕಟ್ಟಡವಾಗಿ ಉಳಿಸಿಕೊಳ್ಳಲು ಬದ್ಧ ಎಂದು ಜಿಲ್ಲಾಡಳಿತ ಹೇಳಿದೆ.
ಮೈಸೂರಿನ ಯಾದವಗಿರಿಯಲ್ಲಿರುವ ಈ ಮನೆ ಮಾಲ್ಗುಡಿಯಂಥ ಕಾಲ್ಪನಿಕ ನಗರಿ ಸೃಷ್ಟಿಗೆ ಸಾಕ್ಷಿಯಾಗಿದೆ. ಇದೇ ಮನೆಯಲ್ಲಿ ಆರ್ ಕೆ ಎನ್ ಅವರು ಸುಮಾರು ಎರಡು ದಶಕಗಳ ಕಾಲ ನೆಲೆಸಿದ್ದರು. 2001ರಲ್ಲಿ ಸಾಹಿತ್ಯ ಪ್ರೇಮಿಗಳನ್ನು ತೊರೆಯುವ ತನಕ ಇದೇ ಅವರ ನೆಚ್ಚಿನ ಬೀಡಾಗಿತ್ತು.

100x120 ಅಡಿ ಇರುವ ಈ ಸ್ಥಳ ಸಿಎಸ್ ಚಂದ್ರಶೇಖರ್, ಭುವನೇಶ್ವರಿ ಮತ್ತು ಶ್ರೀನಿವಾಸ ಎಂಬುವವರ ಹೆಸರಲ್ಲಿ ನೊಂದಾವಣಿಯಾಗಿದೆ. ಮನೆ ಒಡೆದು ಬಹುಮಹಡಿ ಕಟ್ಟಡ ನಿರ್ಮಾಣ ಮಾಡಲು ಕೂಡ ಕಾರ್ಪೊರೇಷನ್ ಅನುಮತಿಯನ್ನೂ ನೀಡಿತ್ತು. ಈಗ ಹೊಸ ಕಟ್ಟಡ ನಿರ್ಮಾಣದ ಲೈಸೆನ್ಸ್ ಅನ್ನು ರದ್ದುಪಡಿಸಲಾಗಿತ್ತು. ನಂತರ ಸುಮಾರು 2.4 ಕೋಟಿ ರು ವೆಚ್ಚ ಮಾಡಿ ಈ ಮನೆಯನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ.[ನಾರಾಯಣ್ ಜೀವಿಸಿದ ಮನೆ ನೆಲಸಮಕ್ಕೆ ತಡೆ]
ರಿಪೇರಿ ಕಾರ್ಯ: ಸುಮಾರು 24.1 ಲಕ್ಷ ರು ವೆಚ್ಚದಲ್ಲಿ ಈ ಮನೆಯ ಮೂಲ ಸ್ವರೂಪಕ್ಕೆ ಧಕ್ಕೆ ಬರದಂತೆ ರಿಪೇರಿ ಹಾಗೂ ಪುನರ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗುತ್ತದೆ. ಈ ಮನೆಯೊಂದಿಗೆ ಸಾಹಿತ್ಯ ಲೋಕ ಹಾಗೂ ಆರ್ ಕೆ ನಾರಾಯಣ್ ಅವರಿಗಿದ್ದ ಭಾವನಾತ್ಮಕ ಸಂಬಂಧಕ್ಕೆ ನಾವು ಬೆಲೆ ಕೊಡಬೇಕಿದೆ. ಮುಂದಿನ ಪೀಳಿಗೆಗೆ ಇಂಥ ಪಾರಂಪರಿಕ ಕಟ್ಟಡಗಳನ್ನು ಉಳಿಸಬೇಕಿದೆ ಎಂದು ಮೈಸೂರು ನಗರ ಪಾಲಿಕೆ ಆಯುಕ್ತ ಸಿ.ಜಿ ಬೆಟ್ಸೂರು ಮಠ್ ಹೇಳಿದ್ದಾರೆ.
ಮನೆ ಪುನರ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಏ.20ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಆರು ದಶಕಗಳನ್ನು ಕಂಡಿರುವ ಎರಡು ಅಂತಸ್ತಿನ ಈ ಕಟ್ಟಡ ಹಾಗೂ ಮುಂಭಾಗದ ಗಾರ್ಡನ್ ಇಂದಿಗೂ ಎಂದೆಂದಿಗೂ ಭವ್ಯವಾಗಿ ಕಾಣಿಸುವ ಸ್ಪರ್ಶ ನೀಡುವ ಕುಶಲ ಕರ್ಮಿಗಳ ಹುಡುಕಾಟ ಜಾರಿಯಲ್ಲಿದೆ.












Click it and Unblock the Notifications