ನಂಜನಗೂಡು: ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪತ್ತೆ
ಮೈಸೂರು, ಅಕ್ಟೋಬರ್, 15 : ನಂಜನಗೂಡು ತಾಲ್ಲೂಕು ಚಿಕ್ಕಯ್ಯನ ಛತ್ರ ಹೋಬಳಿ ಮರಳೂರು ಗ್ರಾ.ಪಂ.ನ ಹಳ್ಳಿಕೆರೆ ಹುಂಡಿ ಕಬ್ಬಿನ ಗದ್ದೆಯೊಂದರಲ್ಲಿ ಮೂರು ಚಿರತೆ ಮರಿಗಳು ಹಾಗೂ ತಾಯಿ ಚಿರತೆ ಪತ್ತೆಯಾಗಿವೆ.
ಗ್ರಾಮದ ಶಿವಮ್ಮ ಮಹದೇವಪ್ಪ ಎಂಬುವರಿಗೆ ಸೇರಿದ ಜಮೀನಿನಲ್ಲಿ ಕಬ್ಬನ್ನು ಕಟಾವು ಮಾಡುವಾಗ ಈ ಚಿರತೆ ಹಾಗೂ ಮರಿಗಳನ್ನು ಕಂಡು ಕೃಷಿ ಕಾರ್ಮಿಕರು ಅಲ್ಲಿಂದ ಹೆದರಿ ಓಡಿದ್ದು, ಕೂಡಲೇ ಗ್ರಾ.ಪಂ. ಅಧ್ಯಕ್ಷ ಬಿ.ಎಂ ಮಹೇಶ್ ಕುಮಾರ್ ಅವರಿಗೆ ದೂರವಾಣಿ ಮೂಲಕ ಗ್ರಾಮಸ್ಥರು ವಿಷಯ ತಿಳಿಸಿದ್ದಾರೆ.
ಮಾಹಿತಿ ಪಡೆದ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರುವಷ್ಟರಲ್ಲಿ ತಾಯಿ ಚಿರತೆ ಮರಿಗಳನ್ನು ಬಿಟ್ಟು ಹೋಗಿದ್ದರಿಂದ ಅಧಿಕಾರಿಗಳು ಚಿರತೆ ಮರಿಗಳನ್ನು ಪರಿಶೀಲಿಸಿದ್ದಾರೆ.
"ಮರಿಗಳು ಜನಿಸಿ ಕೇವಲ ಒಂದು ವಾರವಾಗಿದೆ. ನಾವು ಅವುಗಳನ್ನು ತೆಗೆದುಕೊಂಡು ಹೋದರೆ ಬದುಕಿಸುವುದು ಕಷ್ಟ. ಆದ್ದರಿಂದ ತಾಯಿ ಚಿರತೆ ಬರುವವರೆಗೂ ಕಾಯೋಣ ಅದು ಮತ್ತೆಲ್ಲಿಗಾದರೂ ಮರಿಗಳನ್ನು ಸ್ಥಳಾಂತರ ಮಾಡುತ್ತದೆ" ಎಂದು ತಿಳಿಸಿದ್ದರಿಂದ ಗ್ರಾಮಸ್ಥರು ಅಲ್ಲಿಂದ ದೂರ ಸರಿದು ತಾಯಿ ಚಿರತೆಗಾಗಿ ಕಾಯುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಗ್ರಾಮದ ಸುತ್ತ ಮುತ್ತಲ ಗ್ರಾಮಗಳಲ್ಲಿ ಕುರಿ, ಮೇಕೆ, ನಾಯಿಗಳನ್ನು ಅಪಹರಿಸಿ ಹೋಗುತ್ತಿದ್ದ ಚಿರತೆ ಇದೇ ಇರಬೇಕೆಂದು ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.