ಮಧುರ ಮಾತಿನ ಮಾನಿನಿಗೆ ಮರುಳಾಗಿ ಮೋಸಹೋಗಬೇಡಿ
ಮೈಸೂರು, ಜುಲೈ 31: 'ಮಧುರವಾಗಿ ಮಾತನಾಡುವ ಹುಡುಗಿಯೊಬ್ಬಳು ನಿಮ್ಮ ಮೊಬೈಲ್ ಗೆ ಕರೆ ಮಾಡಿ ನಿಮಗೊಂದು ಬಹುಮಾನ ಬಂದಿದೆ. ಇದು ದೊಡ್ಡ ಆಫರ್' ಎಂದರೆ ನಂಬಿ ಮೋಸ ಹೋದೀರಾ... ಜೋಕೆ! ಹೀಗೆ ಮೊಬೈಲ್ ಬದಲು ತರಕಾರಿ ಕತ್ತರಿಸುವ ಯಂತ್ರ ಪಡೆದು ಮೋಸ ಹೋದವರು ಮೈಸೂರು ತಾಲ್ಲೂಕಿನ ಸಿಂಧುವಳ್ಳಿಯ ಗ್ರಾಮದ ನಿವಾಸಿ ಕೂಲಿ ಕಾರ್ಮಿಕ ಮಹದೇವು.
ಜು.25ರಂದು ಮಹದೇವು ಅವರ ಮೊಬೈಲ್ಗೆ ಕರೆ ಮಾಡಿದ ಯುವತಿಯೊಬ್ಬಳು, 'ಸಾರ್ ನಿಮ್ಮ ಮೊಬೈಲ್ ನಂಬರ್ ಗೊಂದು ಬಂಪರ್ ಆಫರ್ ಬಂದಿದೆ. ಕೇವಲ 1,570 ರೂ. ಪಾವತಿಸಿದರೆ ಸ್ಯಾಮ್ ಸಂಗ್ ಗ್ರ್ಯಾಂಡ್ ಗ್ಯಾಲಾಕ್ಸಿ ಮೊಬೈಲ್ ನಿಮ್ಮದಾಗಲಿದೆ' ಎಂದು ಹೇಳಿದ್ದಾಳೆ. ಅದಕ್ಕೆ ತಕ್ಷಣ ಒಪ್ಪದ ಮಹದೇವು, ಪೋಸ್ಟ್ ಮೂಲಕ ಕಳುಹಿಸಬೇಡಿ. ಬೇಕಾದರೆ ನಾವೇ ಬಂದು ಹಣ ನೀಡಿ, ಗಿಫ್ಟ್ ಪಡೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಅದಕ್ಕೆ ಯುವತಿ, ಕಂಪನಿ ಹೊಸದಾಗಿ ಆರಂಭವಾಗಿದ್ದು, ಗಿಫ್ಟ್ ಗಳನ್ನು ಪೋಸ್ಟ್ ಮೂಲಕವೇ ಕಳುಹಿಸಲಾಗುತ್ತದೆ ಎಂದು ಹೇಳಿದ್ದಾಳೆ.

ಇದನ್ನು ಕಂಡ ಮಹದೇವು ಅವರು ಯೋಚನೆ ಮಾಡಿ ನಾಳೆ ಹೇಳುವುದಾಗಿ ಹೇಳಿದ್ದಾರೆ. ಮತ್ತೆ ಜು.26ರಂದು ಕರೆ ಮಾಡಿದ ಯುವತಿ, ಅವಕಾಶ ಕಳೆದುಕೊಳ್ಳಬೇಡಿ ಎಂದು ಹೇಳಿದ್ದಾರೆ. ಆಗ ಮಹದೇವು ಅವರು ಜತೆಯಲ್ಲಿದ್ದ ತಮ್ಮ ಸ್ನೇಹಿತ ರವಿ ಅವರಿಗೆ ಮೊಬೈಲ್ ನೀಡಿ ಮಾತನಾಡುವಂತೆ ಹೇಳಿದ್ದಾರೆ. ಆಗ ಆತನಿಗೂ ಕೂಡ ಆ ಯುವತಿ ಅವಕಾಶ ಕಳೆದುಕೊಳ್ಳಬೇಡಿ ಎಂದು ಹೇಳಿದ್ದಾರೆ. ಕೊನೆಗೆ ಮಹದೇವು, ಹಣ ನೀಡಿ ಮೊಬೈಲ್ ಪಡೆಯುವುದಾಗಿ ಹೇಳಿದ್ದಾರೆ.
ಅಂದೇ ಮತ್ತೊಂದು ನಂಬರ್ ನಿಂದ ಕರೆ ಮಾಡಿದ ಇನ್ನೊಬ್ಬ ಯುವಕ, ನಾವು ಬೆಂಗಳೂರಿನಿಂದ ಕರೆ ಮಾಡುತ್ತಿದ್ದು, ನಿಮಗೆ ಪಾರ್ಸಲ್ ಬಂದಿದೆ. ಹಣ ಕೊಟ್ಟು ಬಿಡಿಸಿಕೊಳ್ಳುವುದಾದರೆ ಕಳುಹಿಸುತ್ತೇವೆ ಎಂದು ಹೇಳಿದ್ದಾನೆ. ಅದಕ್ಕೆ ಮಹದೇವು ಆಗಲಿ ಎಂದು ಹೇಳಿದ್ದಾರೆ.
ಕಳೆದ ಶುಕ್ರವಾರ ಬೆಳಿಗ್ಗೆ ಗ್ರಾಮದ ಅಂಚೆ ಇಲಾಖೆಯ ನೌಕರ ರಂಗಸ್ವಾಮಿ, ಮಹದೇವು ಅವರಿಗೆ ಕರೆ ಮಾಡಿ, ನಿಮಗೊಂದು ಗಿಫ್ಟ್ ಬಾಕ್ಸ್ ಬಂದಿದ್ದು, ಕಚೇರಿಗೆ ಬಂದು ಪಡೆಯುವಂತೆ ತಿಳಿಸಿದ್ದಾರೆ. ಕಚೇರಿಗೆ ಹೋದ ಮಹದೇವು ಅವರು 1,570 ರೂ. ಪಾವತಿ ಮಾಡಿ ಗಿಫ್ಟ್ ಪಡೆದು ಅಲ್ಲೇ ತೆರೆದಾಗ ಮೊಬೈಲ್ ಬದಲು ತರಕಾರಿ ಕಟ್ ಮಾಡುವ ಯಂತ್ರ ಕಂಡು ದಂಗಾಗಿದ್ದಾರೆ!












Click it and Unblock the Notifications