ಕೇಂದ್ರ ಸರ್ಕಾರದ 'ಪ್ರಸಾದ' ಯೋಜನೆಗೆ ಚಾಮುಂಡಿ ಬೆಟ್ಟ ಆಯ್ಕೆ
ಮೈಸೂರು, ಫೆಬ್ರವರಿ 17 : ಕೇಂದ್ರ ಸರ್ಕಾರದ 'ಪ್ರಸಾದ' ಯೋಜನೆಗೆ ಮೈಸೂರಿನ ಚಾಮುಂಡಿ ಬೆಟ್ಟ ಆಯ್ಕೆಯಾಗಿದೆ. ಯೋಜನೆಯಡಿ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಲು ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ.
ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಚಾಮುಂಡಿ ಬೆಟ್ಟವೂ ಒಂದು. ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ದೇವಾಲಯಕ್ಕೆ ಭೇಟಿ ನೀಡಿ ನಾಡಿನ ಅಧಿದೇವತೆ ದರ್ಶನವನ್ನು ಪಡೆಯುತ್ತಾರೆ. ದಸರಾ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯನ್ನು ಪರಿಗಣಿಸಿರುವ ಕೇಂದ್ರ ಸರ್ಕಾರ 'ಪ್ರಸಾದ' ಯೋಜನೆಗೆ ದೇವಾಲಯವನ್ನು ಆಯ್ಕೆ ಮಾಡಿದೆ. ಯೋಜನೆಯಡಿ 60 ರಿಂದ 100 ಕೋಟಿ ರೂ. ವೆಚ್ಚದಲ್ಲಿ ಬೆಟ್ಟವನ್ನು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಅಭಿವೃದ್ಧಿ ಮಾಡಲಿವೆ.
PRASAD (Pilgrimage Rejuvenation and Spiritual Augmentation Drive) ಯೋಜನೆಯಡಿ ವಿವಿಧ ರಾಜ್ಯಗಳಲ್ಲಿರುವ ಧಾರ್ಮಿಕ ಕ್ಷೇತ್ರ, ಯಾತ್ರಾ ಸ್ಥಳ ಹಾಗೂ ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿಗೊಳಿಸಲಾಗುತ್ತದೆ.
2014-15ರಲ್ಲಿ 'ಪ್ರಸಾದ' ಯೋಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿತ್ತು. ಕರ್ನಾಟಕದಲ್ಲಿ ಚಾಮುಂಡಿ ಬೆಟ್ಟವನ್ನು ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದ್ದು, ದೇವಾಲಯ ಮತ್ತು ಬೆಟ್ಟದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ.
ಚಾಮುಂಡಿ ಬೆಟ್ಟದಲ್ಲಿ ಸ್ವಾಗತ ಕಮಾನು, ಬೆಟ್ಟ ಹತ್ತುವ ಮೆಟ್ಟಿಲು ಅಭಿವೃದ್ಧಿ, ಟ್ರೀ ಪಾರ್ಕ್ ನಿರ್ಮಾಣ, ಭಕ್ತರು ಧ್ಯಾನ ಮಾಡಲು ಮಂದಿರ ನಿರ್ಮಾಣ ಮುಂತಾದವುಗಳನ್ನು ಮಾಡಲಾಗುತ್ತದೆ.











Click it and Unblock the Notifications