ವಿಜೃಂಭಣೆಯಿಂದ ಜರುಗಿದ ಚಾಮುಂಡೇಶ್ವರಿ ಅಮ್ಮನವರ ತೆಪ್ಪೋತ್ಸವ
Recommended Video

ಮೈಸೂರು, ಅಕ್ಟೋಬರ್. 26: ನಾಡ ಅಧಿದೇವತೆ ಚಾಮುಂಡೇಶ್ವರಿ ಅಮ್ಮನವರ ತೆಪ್ಪೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಗುರುವಾರ ಬೆಳಗ್ಗೆಯೇ ಅಮ್ಮನವರ ಪಲ್ಲಕ್ಕಿ ಉತ್ಸವವು ದೇವಸ್ಥಾನದಿಂದ ಹೊರಟು ರಥದ ಬೀದಿಯ ಮೂಲಕ ಸಾಗಿ ದೇವೀಕೆರೆ ಅಂಗಳಕ್ಕೆ ಮೆರವಣಿಗೆ ಮೂಲಕ ತಲುಪಿತು.
ಮೆರವಣಿಗೆ ವೇಳೆ ಭಕ್ತರು ಪೂಜೆ ಸಲ್ಲಿಸಿ, ಧನ್ಯತೆ ಮೆರೆದರು. ದೇವಿಕೆರೆ ಅಂಗಳದಲ್ಲಿ ಸಂಜೆಯವರೆಗೂ ವಿವಿಧ ಪೂಜೆ-ಪುರಸ್ಕಾರ, ಹೋಮ-ಹವನಗಳು ನಡೆದವು. ನಂತರ 7 ಗಂಟೆ ವೇಳೆಗೆ ಬಣ್ಣ-ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದ್ದ ತೆಪ್ಪದಲ್ಲಿ ಅಮ್ಮನವರ ಮೂರ್ತಿಯನ್ನಿರಿಸಿ, 7.30ರವರೆಗೆ ದೇವಿಕೆರೆಯಲ್ಲಿ 3 ಸುತ್ತು ಪ್ರದಕ್ಷಿಣೆ ಹಾಕಿಸಲಾಯಿತು.
ಈ ವೇಳೆ ಆಮ್ಮನವರ ದರ್ಶನ ಪಡೆಯಲು ಆಗಮಿಸಿದ್ದ ಭಕ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕೆಲವರು ಅಮ್ಮನವರ ಮೂರ್ತಿ ಯನ್ನು ಮೊಬೈಲ್ ಗಳ ಮೂಲಕ ಸೆರೆಹಿಡಿಯುತ್ತಿದ್ದರೆ, ಮತ್ತೊಂದೆಡೆ ಪೊಲೀಸ್ ಬ್ಯಾಂಡ್ ನಿಂದ ಹೊರಹೊಮ್ಮಿದ ಸಂಗೀತ ಕಂಪು ನೆರೆದಿದ್ದ ಭಕ್ತರಿಗೆ ಮುದ ನೀಡಿತು.

ಸಾವಿರಾರು ಭಕ್ತರು ತೆಪ್ಪೋತ್ಸವದ ಸಂಭ್ರಮವನ್ನು ಕಣ್ತುಂಬಿಕೊಂಡರು. ದೇಗುಲದ ಪ್ರಧಾನ ಅರ್ಚಕರಾದ ಶಶಿಶೇಖರ್, ದೀಕ್ಷಿತ್ ನೇತೃತ್ವದಲ್ಲಿ ತೆಪ್ಪೋತ್ಸವದ ಎಲ್ಲಾ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು.
ಪ್ರತಿವರ್ಷ ನವರಾತ್ರಿ ಮಹೋತ್ಸವ ಮುಕ್ತಾಯಗೊಂಡ ಬಳಿಕ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ಅಮ್ಮನವರ ಮಹಾರಥೋತ್ಸವ ನಡೆಸಿ, ನಂತರ ದೇವಿಯ ತೆಪ್ಪೋತ್ಸವ ನಡೆಸಲಾಗುವುದು.

ಇದಾದ ನಂತರ ದೇವಿಕೆರೆಯನ್ನು 3 ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಅಮ್ಮನವರ ಮೂರ್ತಿಯನ್ನು ತೆಪ್ಪದಿಂದ ತಂದು 7.40ರ ವೇಳೆಗೆ ಚಿನ್ನದ ಪಲ್ಲಕ್ಕಿಯಲ್ಲಿರಿಸಿ, ಪೂಜೆ ನೆರವೇರಿಸಲಾಯಿತು.

ಅಲ್ಲಿಂದ ಅಮ್ಮನವರ ಚಿನ್ನದ ಪಲ್ಲಕ್ಕಿ ಉತ್ಸವ ವಿವಿಧ ಮಂತ್ರ ಘೋಷಗಳೊಂದಿಗೆ ದೇವಿಕೆರೆ ಅಂಗಳದಿಂದ ಮೆರವಣಿಗೆ ಹೊರಟು ಸ್ವಸ್ಥಾನ ತಲುಪಿತು. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಗೂ ಅಗ್ನಿ ಶಾಮಕದಳ ಎಚ್ಚರವಹಿಸಿತ್ತು.












Click it and Unblock the Notifications