ಮೈಸೂರಿನಿಂದ ಹೆಚ್ಚುವರಿಯಾಗಿ ಸಂಚರಿಸಲಿವೆ 6 ಹೊಸ ವಿಮಾನಗಳು
ಮೈಸೂರು, ಜನವರಿ 10: ಕೇಂದ್ರ ಸರ್ಕಾರದ ಉಡಾನ್' ಯೋಜನೆಯಡಿ ಮೈಸೂರಿನಿಂದ ಹೆಚ್ಚುವರಿ 6 ವಿಮಾನಗಳ ಹಾರಾಟಕ್ಕೆ ಕೇಂದ್ರದ ಅನುಮೋದನೆ ಸಿಕ್ಕಿದೆ.
ಉಡಾನ್-3' ಯೋಜನೆಯ 3ನೇ ಹಂತದ ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಹೆಚ್ಚಿನ ವಿಮಾನಯಾನ ಸಂಪರ್ಕ ಕಲ್ಪಿಸಲು ಹಾಗೂ ಇತರೆ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ದೃಷ್ಟಿಯಿಂದ 6 ವಿಮಾನಗಳ ಹಾರಾಟಕ್ಕೆ ವಿಮಾನಯಾನ ಸಚಿವಾಲಯವು ಅನುಮೋದನೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ವಿಮಾನಯಾನ ಸಚಿವಾಲಯಕ್ಕೆ ಪ್ರತಾಪ್ ಸಿಂಹ ಅಭಿನಂದನೆ ಸಲ್ಲಿಸಿದ್ದಾರೆ.
ಈಗಾಗಲೇ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಚೆನ್ನೈಗೆ ಪ್ರತಿನಿತ್ಯ ವಿಮಾನ ಹಾರಾಟ ನಡೆಸುತ್ತಿದ್ದು, ಇದರ ಜೊತೆಗೆ ಮೈಸೂರು-ಬೆಳಗಾವಿ, ಮೈಸೂರು-ಹೈದರಾಬಾದ್ (1), ಮೈಸೂರು-ಹೈದರಾಬಾದ್ ( 2 ), ಮೈಸೂರು-ಗೋವಾ, ಮೈಸೂರು-ಕೊಚ್ಚಿನ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಹಾಗೂ ಮೈಸೂರು-ಬೆಂಗಳೂರು ವಿಮಾನ ಹಾರಾಟಕ್ಕೆ ಕೇಂದ್ರ ವಿಮಾನಯಾನ ಸಚಿವಾಲಯ ಅನುಮೋದನೆ ನೀಡಿದೆ.

ಹೊಸ ರೈಲಿಗೂ ಹಸಿರು ನಿಶಾನೆ
ಚೆನ್ನೈ ಮತ್ತು ಬೆಂಗಳೂರು ನಡುವೆ ಸಂಚರಿಸುತ್ತಿರುವ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲನ್ನು ಮೈಸೂರಿಗೆ ವಿಸ್ತರಣೆ ಮಾಡಲಾಗಿದೆ. ಕಳೆದ ಡಿಸೆಂಬರ್ 28ರಂದು ಸಂಸದ ಪ್ರತಾಪ್ ಸಿಂಹ ಈ ರೈಲನ್ನು ಮೈಸೂರಿಗೆ ವಿಸ್ತರಿಸುವಂತೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಪ್ರತಿನಿತ್ಯ ಮಧ್ಯಾಹ್ನ 1.35ಕ್ಕೆ ಚೆನ್ನೈನಿಂದ ಹೊರಡುವ ಚೆನ್ನೈ-ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಗಾಡಿಯು ರಾತ್ರಿ 8.05ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ರಾತ್ರಿ 8.10ಕ್ಕೆ ಹೊರಡಲಿದ್ದು, ರಾತ್ರಿ 11 ಗಂಟೆಗೆ ಮೈಸೂರು ತಲುಪಲಿದೆ.
ಮೈಸೂರಿನಿಂದ ಮಾರನೆಯ ದಿನ ಬೆಳಿಗ್ಗೆ 4.45ಕ್ಕೆ ಹೊರಟು ಬೆಳಿಗ್ಗೆ 8.02ಕ್ಕೆ ಬೆಂಗಳೂರು ತಲುಪಲಿದೆ. ಅಲ್ಲಿಂದ ಹೊರಟು ಮಧ್ಯಾಹ್ನ 2.30ಕ್ಕೆ ಚೆನ್ನೈ ತಲುಪಲಿದೆ.












Click it and Unblock the Notifications