ಚಾಮುಂಡಿ ಬೆಟ್ಟದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ 100 ಕೋಟಿ 'ಪ್ರಸಾದ'
Recommended Video

ಮೈಸೂರು, ಜನವರಿ 8: ಅರಮನೆ ನಗರ ಮೈಸೂರಿಗೆ ಮುಕುಟ ಪ್ರಾಯವಾಗಿರುವ ಚಾಮುಂಡಿಬೆಟ್ಟದ ಸಂರಕ್ಷಣೆ, ಇಲ್ಲಿನ ಪರಿಸರ ಶ್ರೀಮಂತಿಕೆಯ ನಿರ್ವಹಣೆ ಹಾಗೂ ಅದರ ಪುನರುಜ್ಜೀವನಕ್ಕೆ ಕಾಲ ಕೂಡಿ ಬಂದಿದೆ.
ಪ್ರತಿನಿತ್ಯ ಸಾವಿರಾರು ಮಂದಿಯನ್ನು ಆಕರ್ಷಿಸುತ್ತಿರುವ ಚಾಮುಂಡಿಬೆಟ್ಟವನ್ನು ಆಧ್ಯಾತ್ಮಿಕ ಕೇಂದ್ರ ವನ್ನಾಗಿ ಅಭಿವೃದ್ಧಿಗೊಳಿಸಲು ಕೇಂದ್ರ ಸರ್ಕಾರ ತನ್ನ ಯಾತ್ರಾಸ್ಥಳಗಳ ಪುನರುಜ್ಜೀವನ ಮತ್ತು ಅಧ್ಯಾತ್ಮ ವೃದ್ಧಿ ಯೋಜನೆ ಅಭಿಯಾನ (ಪಿಆರ್ಎ ಎಸ್ಎಡಿ -ಪ್ರಸಾದ) ಅನ್ವಯ ಆಯ್ಕೆ ಮಾಡಿ ಇದಕ್ಕಾಗಿ 100 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.
ಈ ಯೋಜನೆಯಲ್ಲಿ ಹೆಚ್ಚು ನಿರ್ಮಾಣ (ಕಟ್ಟಡ) ಕಾಮಗಾರಿಗಳಿಗೆ ಅವಕಾಶವಿಲ್ಲ. ವಿಶಿಷ್ಟ ಕಾರ್ಯಕ್ರಮಗಳು, ಪರಿಕಲ್ಪನೆ ಮತ್ತು ಯೋಜನೆಗಳಲ್ಲದೆ ಭೌಗೋಳಿಕ ಭದ್ರತೆ, ಜೀವಿ ಪರಿಸರ ನಿರ್ವಹಣೆ, ಸುಸ್ಥಿರ ಅಭಿವೃದ್ಧಿ ಚಟುವಟಿಕೆಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು.
ಈ ಸಂಬಂಧ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆ 2018ರ ಅಕ್ಟೋಬರ್ನಲ್ಲೇ ಈ ತೀರ್ಮಾನವನ್ನು ತಿಳಿಸಿದ್ದು, ಇದರ ಅನ್ವಯ ಈಗಾಗಲೇ ಪ್ರಕಿಯೆ ಆರಂಭವಾಗಿದೆ. ಇದೊಂದು ಓಪನ್-ಎಂಡೆಡ್ ಯೋಜನೆ' ಯಾಗಿದ್ದು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಆಯ್ದ ಕನ್ಸಲ್ಟೆನ್ಸಿಗಳನ್ನು ಪಟ್ಟಿಮಾಡಿ ಅಂತಿಮ ಗೊಳಿಸಿದೆ. ಇದು ಭಾರೀ ಮೊತ್ತದ ಯೋಜನೆಯಾಗಿದೆ.

‘ಪ್ರಸಾದ್’ ಯೋಜನೆಯಡಿ ಆಯ್ಕೆ
'ಪ್ರಸಾದ್' ಯೋಜನೆಯಡಿ ಚಾಮುಂಡಿಬೆಟ್ಟವನ್ನು ಆಯ್ಕೆ ಮಾಡುವಂತೆ ಕೋರಿ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ಇದೀಗ ಅದಕ್ಕೆ ತಾತ್ವಿಕ ಒಪ್ಪಿಗೆ ಲಭಿಸಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಮಾಧ್ಯಮದವರಿಗೆ ತಿಳಿಸಿದರು.

ಬ್ಯಾಟರಿ ಚಾಲಿತ ವಾಹನ ವ್ಯವಸ್ಥೆ
ಜಿಲ್ಲಾಡಳಿತದಿಂದ ಪ್ರವಾಸೋದ್ಯಮ ಇಲಾಖೆಗೆ ಭೂಮಿಯನ್ನು ಹಸ್ತಾಂತರ ಮಾಡಿದ ಬಳಿಕ ಬೆಟ್ಟದಲ್ಲಿ ಹಂತಹಂತವಾಗಿ ಅಭಿವೃದ್ಧಿ ಕೆಲಸಗಳನ್ನುಕೈಗೆತ್ತಿಕೊಳ್ಳಲಾಗುವುದು. ಬೆಟ್ಟಕ್ಕೆ ವಾಹನ ಸಂಚಾರ ನಿಷೇಧಿಸಿ, ಬ್ಯಾಟರಿ ಚಾಲಿತ ವಾಹನ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತನೆ ನಡೆದಿದೆ.

ಕಟ್ಟಡಗಳ ಸಂಖ್ಯೆ ಕಡಿಮೆಯಾಗುತ್ತದೆ
ಬೆಟ್ಟದಲ್ಲಿ ಯಾವುದೇ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡುವುದಿಲ್ಲ. ಕಟ್ಟಡಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಪ್ರಯತ್ನಿಸಲಾಗುವುದು. ಬೆಟ್ಟದ ಪರಿಸರಕ್ಕೆ ಪೂರಕವಾದ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸಾ.ರಾ.ಮಹೇಶ್ ಹೇಳಿದರು.

100 ಕೋಟಿ ಮಂಜೂರು
ದೇಶದ ಆಯ್ದ ಪುಣ್ಯಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 2014-15 ರಲ್ಲಿ 'ಪ್ರಸಾದ್' ಯೋಜನೆ ಜಾರಿಗೊಳಿಸಿತ್ತು. ರಾಜ್ಯ ಪ್ರವಾಸೋದ್ಯಮ ಇಲಾಖೆಯು ಕರ್ನಾಟಕದಿಂದ ಚಾಮುಂಡಿಬೆಟ್ಟವನ್ನು ಈ ಯೋಜನೆಗೆ ಆಯ್ಕೆ ಮಾಡುವಂತೆ ಕೇಂದ್ರಕ್ಕೆ ಪ್ರಸ್ತಾವ ಕಳುಹಿಸಿತ್ತು. ಈ ಯೋಜನೆಯಡಿ ಕೇಂದ್ರ ಸರ್ಕಾರ 100 ಕೋಟಿ ಮಂಜೂರು ಮಾಡಲಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಸ್ಪಷ್ಟಪಡಿಸಿದರು.












Click it and Unblock the Notifications