ಮೈಸೂರಿನ ಮನೆಯಲ್ಲೇ ವೇಶ್ಯಾವಾಟಿಕೆ: ಮೂವರ ಬಂಧನ
ಮೈಸೂರು, ನವೆಂಬರ್, 4: ನಗರದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯೊಂದರ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿ ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ.
ಮನೆ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದ ಜಯಲಕ್ಷ್ಮಿಪುರಂ ನಿವಾಸಿ ಮಹೇಶ(34) ಮತ್ತು ಗ್ರಾಹಕರಾಗಿ ಬಂದಿದ್ದ ಬನ್ನೂರು ಬಳಿಯ ಕುಂಟನಹಳ್ಳಿ ನಿವಾಸಿ ರಾಕೇಶ್(24), ಕುಂಬಾರಕೊಪ್ಪಲಿನ ಅಣ್ಣಯ್ಯಪ್ಪ(28) ಎಂಬುವವರನ್ನು ಬಂಧಿಸಲಾಗಿದೆ.

ಮಹೇಶ್ ವಿಜಯನಗರ ಪೊಲೀಸ್ ಠಾಣಾ ಸರಹದ್ದಿನ ಹೆಬ್ಬಾಳಿನ ಭಾರತ್ ಕ್ಯಾನ್ಸರ್ ಆಸ್ಪತ್ರೆ ಹಿಂಭಾಗವಿರುವ ಲಕ್ಷ್ಮಿಕಾಂತನಗರದಲ್ಲಿ ಮನೆ(ನಂ.974)ಯೊಂದನ್ನು ಪಡೆದು ಅಲ್ಲಿ ಯುವತಿಯರನ್ನಿಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದನು.
ಮೊಬೈಲ್ ಹಾಗೂ ವಾಟ್ಸಾಪ್, ಫೇಸ್ಬುಕ್ ಮೂಲಕ ಗ್ರಾಹಕರನ್ನು ಸೆಳೆದು ಬಳಿಕ ಹಣ ಪಡೆದು ಮನೆಗೆ ಕರೆದೊಯ್ಯುತ್ತಿದ್ದನು. ಕಳೆದ ಕೆಲವು ಸಮಯಗಳಿಂದ ಲಕ್ಷ್ಮಿಕಾಂತನಗರದ ಮನೆಯಲ್ಲಿ ಯುವತಿಯರು ಮತ್ತು ಅಪರಿಚಿತ ಗಂಡಸರು ಆಗಾಗ್ಗೆ ಬಂದು ಹೋಗಿ ಮಾಡುತ್ತಿದ್ದರು. ಹೀಗಾಗಿ ಅಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಅನುಮಾನ ಸಾರ್ವಜನಿಕರನ್ನು ಕಾಡಿತ್ತು.
ಈ ಕುರಿತಂತೆ ಖಚಿತ ಮಾಹಿತಿಯು ಸಿಸಿಬಿ ಪೊಲೀಸರಿಗೆ ದೊರೆತಿದ್ದು, ಕೂಡಲೇ ಸಿಸಿಬಿಯ ಎಸಿಪಿ ಸಿ. ಗೋಪಾಲ್ರವರ ನೇತೃತ್ವದಲ್ಲಿ ಸಿಸಿಬಿಯ ಇನ್ಸ್ಪೆಕ್ಟರ್ ಚಂದ್ರಕಲಾ, ಪಿಎಸ್ಐ ಹೆಚ್.ರಮೇಶ್, ಸಿಬ್ಬಂದಿ ರವಿ, ಜೀವನ್, ಮಂಜುನಾಥ್, ಮಹಿಳಾ ಸಿಬ್ಬಂದಿ ಮಂಜು ಅವರನ್ನೊಳಗೊಂಡ ತಂಡ ಮನೆಯ ಮೇಲೆ ದಾಳಿ ಮಾಡಿತ್ತು.
ಮನೆಯೊಳಗೆ ನುಗ್ಗಿ ಪರಿಶೀಲನೆ ಮಾಡಿದಾಗ ವೇಶ್ಯಾವಾಟಿಕೆ ದಂಧೆಯ ಕಿಂಗ್ಪಿನ್ ಮಹೇಶ ಮತ್ತು ಗ್ರಾಹಕರಾಗಿ ಬಂದಿದ್ದ ರಾಕೇಶ್ ಮತ್ತು ಅಣ್ಣಯ್ಯ ಸಿಕ್ಕಿಬಿದ್ದಿದ್ದರಲ್ಲದೆ, ಇವರೊಂದಿಗೆ ಇಬ್ಬರು ಯುವತಿಯರು ಇದ್ದರು.
ಯುವತಿಯರನ್ನು ರಕ್ಷಿಸಿದ ಪೊಲೀಸರು, ಆರೋಪಿಗಳಾದ ಮೂವರನ್ನು ಬಂಧಿಸಿ, ವೇಶ್ಯಾವಾಟಿಕೆಗೆ ಬಳಕೆಯಾಗಿದ್ದ ನಗದು 3,100 ರೂ. ಮತ್ತು ಮೂರು ಮೊಬೈಲ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು ನಗರದಲ್ಲಿ ಬಸ್ಸ್ಟ್ಯಾಂಡ್, ಸಯ್ಯಾಜಿರಾವ್ ರಸ್ತೆ ಸೇರಿದಂತೆ ಸುತ್ತಮುತ್ತ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದು, ತಡೆಗಟ್ಟುವುದು ಸವಾಲಾಗಿ ಪರಿಣಮಿಸಿದೆ. ಈ ನಡುವೆ ನಗರದ ಹೊರವಲಯದ ಮನೆಗಳಲ್ಲಿಯೂ ದಂಧೆಗಳು ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಪೊಲೀಸರ ದಾಳಿಯಿಂದ ಅದು ನಿಜವಾಗಿದೆ.
ಇನ್ನಾದರೂ ಈ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನೂತನ ನಗರ ಪೊಲೀಸ್ ಕಮೀಷ್ನರ್ ಡಾ.ಎ. ಸುಬ್ರಹ್ಮಣ್ಯೇಶ್ವರರಾವ್ ಕ್ರಮ ಕೈಗೊಳ್ಳಬೇಕಿದೆ.












Click it and Unblock the Notifications