ಕೊರೊನಾ ಕರ್ಫ್ಯೂ: ಮೈಸೂರಿನಲ್ಲಿ ರಾತ್ರಿ 10ರ ನಂತರ ಬಂದ್ ಮಾಡದಿದ್ದರೆ ಕೇಸ್ ದಾಖಲು
ಮೈಸೂರು, ಜನವರಿ 6: ರಾಜ್ಯದಲ್ಲಿ ಮಹಾಮಾರಿ ಕೊರೊನಾ ಹಾಗೂ ಓಮಿಕ್ರಾನ್ ಸೋಂಕು ಆತಂಕ ಮನೆ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕಠಿಣ ನಿಯಮ ಗುರುವಾರದಿಂದ ಜಾರಿಗೊಳ್ಳಲಿದ್ದು, ಸರ್ಕಾರದ ಕಠಿಣ ನಿಯಮ ಜಾರಿಗೆ ಮೈಸೂರಿನಲ್ಲಿ ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ರಾಜ್ಯದಲ್ಲಿ ಇಂದಿನಿಂದ ಎರಡು ವಾರ ಕಠಿಣ ನಿಯಮ ಜಾರಿಗೊಳಿಸುವ ಸಲುವಾಗಿ ಸರ್ಕಾರದ ಮಾರ್ಗಸೂಚಿ ಪಾಲಿಸಲು ಮೈಸೂರು ಪೊಲೀಸರಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಸಂಬಂಧ ಈಗಾಗಲೇ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಸಭೆ ನಡೆಸಿದ್ದಾರೆ.
ಸರ್ಕಾರದ ಹೊಸ ಮಾರ್ಗಸೂಚಿಗಳ ಜಾರಿ ಹಾಗೂ ಪ್ರಮುಖವಾಗಿ ನಗರದಲ್ಲಿ ಕಟ್ಟುನಿಟ್ಟಿನ ಕೋವಿಡ್ ನಿಯಮ ಪಾಲನೆ ಕುರಿತು ತಿಳುವಳಿಕೆ ನೀಡಿರುವ ಪೊಲೀಸ್ ಆಯುಕ್ತರು, ಇಂದಿನಿಂದ ರಾತ್ರಿ 10ರ ನಂತರ ಅಂಗಡಿಗಳು, ವಾಣಿಜ್ಯ ಕೇಂದ್ರಗಳನ್ನು ಮುಚ್ಚದಿದ್ದರೆ ಕೇಸ್ ದಾಖಲು ಮಾಡುವಂತೆ ಹಾಗೂ ಪಬ್, ಕ್ಲಬ್, ಬಾರ್, ಹೋಟೆಲ್, ಸಿನಿಮಾ ಹಾಲ್, ಮಲ್ಟಿಪ್ಲೆಕ್ಸ್, ಜಿಮ್ ಇತ್ಯಾದಿಗಳ ಬಂದ್ ಮಾಡುವಂತೆಯೂ ಮಾಹಿತಿ ನೀಡಿದ್ದಾರೆ.

ಅಲ್ಲದೇ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಸಮಯದಲ್ಲಿ ಅನಗತ್ಯ ಸಂಚಾರ ನಡೆಸಿದರೆ ವಾಹನ ವಶಕ್ಕೆ ಪಡೆಯುವಂತೆ ಹಾಗೂ ಪ್ರತಿನಿತ್ಯ ಕಟ್ಟುನಿಟ್ಟಿನ ವಾಹನ ತಪಾಸಣೆ ನಡೆಸುವಂತೆ ಸೂಚಿಸಿರುವ ಪೊಲೀಸರು, ಸಾರ್ವಜನಿಕರು ಸಹಕಾರ ನೀಡುವಂತೆಯೂ ಮೈಸೂರು ಪೊಲೀಸರು ಮನವಿ ಮಾಡಿದ್ದಾರೆ.
ಚೆಕ್ಪೋಸ್ಟ್ನಲ್ಲಿ ಹದ್ದಿನ ಕಣ್ಣು
ಈ ನಡುವೆ ಇಂದಿನಿಂದ ರಾಜ್ಯಾದ್ಯಂತ ಟಫ್ ರೂಲ್ಸ್ ಜಾರಿಗೊಂಡಿರುವ ಹಿನ್ನಲೆಯಲ್ಲಿ ಮೈಸೂರಿನ ಗಡಿ ಭಾಗ ಬಾವಲಿ ಚೆಕ್ಪೋಸ್ಟ್ ಫುಲ್ ಟೈಟ್ ಮಾಡಲಾಗಿದೆ. ಕರ್ನಾಟಕ ಹಾಗೂ ಕೇರಳ ಗಡಿಯಾಗಿರುವ ಬಾವಲಿ ಚೆಕ್ ಪೋಸ್ಟ್ನಲ್ಲಿ ಸರ್ಕಾರದ ಸೂಚನೆ ಮೇರೆಗೆ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದ್ದು, ಕೇರಳದಿಂದ ರಾಜ್ಯಕ್ಕೆ ಬರುವವರಿಗೆ RTPCT ಪರೀಕ್ಷೆ ಕಡ್ಡಾಯ ಪರಿಶೀಲನೆ ಮತ್ತು RTPCR ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ನಂತರವೇ ರಾಜ್ಯಕ್ಕೆ ಪ್ರವೇಶ ನೀಡಲಾಗುತ್ತಿದೆ. ಇದರ ನಡುವೆ ಪ್ರತಿಯೊಬ್ಬರನ್ನು ಥರ್ಮಲ್ ಸ್ಕ್ರೀನಿಂಗ್ ನಡೆಸುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಸೂಚನೆ ನೀಡಿದ್ದಾರೆ.

ವೀಕೆಂಡ್ ಕರ್ಫ್ಯೂಗೆ ಆಟೋ ಚಾಲಕರ ವಿರೋಧ
ಇನ್ನೂ ರಾಜ್ಯ ಸರ್ಕಾರದ ವೀಕೆಂಡ್ ಕರ್ಫ್ಯೂಗೆ ಆಟೋ ಚಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಮುಖ ಪ್ರವಾಸಿ ತಾಣವಾಗಿರುವ ಮೈಸೂರಿನಲ್ಲಿ ಪ್ರತಿಯೊಬ್ಬರು ಪ್ರವಾಸೋದ್ಯಮವನ್ನೇ ನಂಬಿ ಜೀವನ ನಡೆಸುತ್ತಿದ್ದ, ವೀಕೆಂಡ್ ಕರ್ಫ್ಯೂ ಜಾರಿ ಮಾಡಿದರೆ ಆಟೋ ಚಾಲಕರಿಗೆ ಸಂಕಷ್ಟ ಎದುರಾಗಲಿದ್ದು, ಹೀಗಾಗಿ ವೀಕೆಂಡ್ ಕರ್ಫ್ಯೂ ಕೈಬಿಡಿ ಎಂದು ಆಟೋ ಚಾಲಕರ ಮನವಿ ಮಾಡಿದ್ದಾರೆ.
ಪ್ರವಾಸಿ ತಾಣವಾಗಿರುವ ಮೈಸೂರಿಗೆ ವಾರಾಂತ್ಯದಲ್ಲಿ ಹೆಚ್ಚು ಪ್ರವಾಸಿಗರು ಬರುತ್ತಾರೆ. ಆದರೆ ಕರ್ಫ್ಯೂ ಮಾಡುವುದರಿಂದ ಮೈಸೂರಿನಲ್ಲಿ ಪ್ರವಾಸೋದ್ಯಮ ಕುಸಿಯುತ್ತದೆ. ಮೊದಲನೇ ಅಲೆ, ಎರಡನೇ ಅಲೆಯಲ್ಲೇ ಆಟೋ ಚಾಲಕರು ಸಾಕಷ್ಟು ಆರ್ಥಿಕ ಹೊಡೆತ ಅನುಭವಿಸಿದ್ದು, ಇದೀಗ ಮತ್ತೆ ವೀಕೆಂಡ್ ಲಾಕ್ಡೌನ್ ಮಾಡಿದರೆ ಜೀವನ ಬೀದಿಗೆ ಬರುತ್ತದೆ. ಕಳೆದ ಬಾರಿ ಲಾಕ್ಡೌನ್ ವೇಳೆ ಸರ್ಕಾರ ಘೋಷಣೆ ಮಾಡಿದ್ದ ಧನಸಹಾಯ ಎಷ್ಟೋ ಜನರಿಗೆ ತಲುಪಿಲ್ಲ. ಒಂದೊಮ್ಮೆ ಸರ್ಕಾರ ಲಾಕ್ಡೌನ್ ಮಾಡಲೇಬೇಕೆಂದರೆ ಆಟೋ ಚಾಲಕರಿಗೆ ಪ್ಯಾಕೇಜ್ ಘೋಷಣೆ ಮಾಡಿ ಬಳಿಕ ಕರ್ಫ್ಯೂ ಮಾಡಿ ಎಂದು ಆಟೋ ಚಾಲಕರು ಒತ್ತಾಯಿಸಿದ್ದಾರೆ.

ನಾವು ಜೀವ ಉಳಿಸಲು ಹೋರಾಡುತ್ತೇವೆ
ಈ ನಡುವೆ ಸರ್ಕಾರ ಜಾರಿಗೊಳಿಸಿರುವ ವೀಕೆಂಡ್ ಕರ್ಫ್ಯೂಗೆ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟ ಕೂಡ ಆಕ್ಷೇಪ ವ್ಯಕ್ತಪಡಿಸಿದೆ. ಸರ್ಕಾರದ ವೀಕೆಂಡ್ ಕರ್ಫ್ಯೂ ಹೇರಿಕೆಯಿಂದ ಉದ್ಯಮಿಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇದರ ನಡುವೆ ಮೇಕದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಹತ್ತು ದಿನಗಳ ಪಾದಯಾತ್ರೆ ನಡೆಸಲು ಮುಂದಾಗಿದೆ. ಕಾಂಗ್ರೆಸ್ ನಾಯಕರು ಕೊರೊನಾ ನಿಯಮಗಳನ್ನು ಪಾಲಿಸಿಯೇ ಪಾದಯಾತ್ರೆ ನಡೆಸುವುದಾಗಿ ತಿಳಿಸಿದ್ದಾರೆ.
ಒಂದೊಮ್ಮೆ ಸರ್ಕಾರ ಕಾಂಗ್ರೆಸ್ಸಿಗರು ಕೈಗೊಂಡಿರುವ ಮೇಕೆದಾಟು ಪಾದಯಾತ್ರೆಗೆ ಅವಕಾಶ ನೀಡಿದರೆ ಉದ್ಯಮಿಗಳಿಗೂ ವ್ಯಾಪಾರ- ವಹಿವಾಟು ನಡೆಸಲು ಸರ್ಕಾರ ಅವಕಾಶ ನೀಡಬೇಕಿದ್ದು, ಅವರು ನೀರಿಗಾಗಿ ಹೋರಾಟ ನಡೆಸಿದರೆ, ನಾವು ಜೀವಗಳನ್ನು ಉಳಿಸಲು ಹೋರಾಡುತ್ತೇವೆ. ಅಲ್ಲದೇ ನಾವು ಸಹ ಕೊರೊನಾ ನಿಯಮಗಳನ್ನು ಪಾಲಿಸಿಯೇ ವ್ಯಾಪಾರ- ವಹಿವಾಟು ನಡೆಸುತ್ತೇವೆ ಎಂದು ಒಕ್ಕೂಟದ ಅಧ್ಯಕ್ಷ ಬಿ.ಎಸ್. ಪ್ರಶಾಂತ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.












Click it and Unblock the Notifications