ಮೈಸೂರು; ಮರಕ್ಕೆ ಕಾರು ಗುದ್ದಿ ಸ್ಥಳದಲ್ಲೇ ಚಾಲಕ ಸಾವು
ಮೈಸೂರು, ಅಕ್ಟೋಬರ್ 29: ಅತಿ ವೇಗವಾಗಿ ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿಯಾಗಿ, ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಅ.28ರ ಬುಧವಾರ ರಾತ್ರಿ ಇಲ್ಲಿನ ಬೋಗಾದಿ ಜಂಕ್ಷನ್ ಬಳಿ ನಡೆದಿದೆ.
ಕಾರು ಕುಕ್ಕರಹಳ್ಳಿ ಕೆರೆಯ ಬಳಿಯಿಂದ ಬೋಗಾದಿ ಜಂಕ್ಷನ್ ಕಡೆ ಅತಿವೇಗವಾಗಿ ಚಲಿಸುತ್ತಿತ್ತು ಎನ್ನಲಾಗಿದೆ. ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು ಚಾಲಕ ಚನ್ನಪಟ್ಟಣ ನಿವಾಸಿ ಅರುಣ್ ಕುಮಾರ್ (23) ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇನ್ನೂ ಮೂವರು ಗಂಭಿರವಾಗಿ ಗಾಯಗೊಂಡಿದ್ದಾರೆ. ಅವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇವರು ಮೈಸೂರಿನಲ್ಲಿಯೇ ಇದ್ದವರಾ ಅಥವಾ ಹೊರಗಿನಿಂದಲೇ ಬಂದವರಾ ಎಂಬುದು ತಿಳಿದುಬಂದಿಲ್ಲ.
ಅಕ್ಟೋಬರ್ 28ರ ಮಧ್ಯರಾತ್ರಿ 12ರ ಸುಮಾರಿಗೆ ಈ ಘಟನೆ ನಡೆದಿದ್ದು, ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಕೆ.ಆರ್.ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು, ಅಗ್ನಿಶಾಮಕ ಠಾಣೆಯ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿ ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಕೆ.ಆರ್.ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications