Mysuru Dasara 2022 : ಕುಶಾಲು ತೋಪು ತಾಲೀಮು ವೇಳೆ ಬೆದರಿದ ಸುಗ್ರೀವ, ಶ್ರೀರಾಮ
ಮೈಸೂರು, ಸೆಪ್ಟಂಬರ್ 12: ವಿಶ್ವ ವಿಖ್ಯಾತ ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ದಸರಾ ಗಜಪಡೆಗೆ ತಾಲೀಮು ನಡೆಸಲಾಗುತ್ತಿದ್ದು, ಸೋಮವಾರ ಮೊದಲನೇ ಹಂತದ ಕುಶಾಲತೋಪು ತಾಲೀಮು ವೇಳೆ ಫಿರಂಗಿಯಿಂದ ಹೊಮ್ಮಿದ ಶಬ್ಧಕ್ಕೆ ಹೊಸ ಆನೆಗಳು ಬೆದರಿದ ಘಟನೆ ನಡೆದಿದೆ.
ಜಂಬೂಸವಾರಿ ನಡೆಯುವ ದಿನದಂದು ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಮುನ್ನ 21 ಸುತ್ತು ಕುಶಾಲ ತೋಪು ಸಿಡಿಸುವ ಸಂಪ್ರದಾಯವಿದೆ. ಅದಕ್ಕೆ ಈಗಿನಿಂದಲೇ ತಾಲೀಮು ಆರಂಭಿಸಲಾಗಿದೆ. ಸೋಮವಾರ ಅರಮನೆ ವರಹ ದ್ವಾರದ ಬಳಿ ಗಜಪಡೆ ಹಾಗೂ ಅಶ್ವಪಡೆ ಬೆದರದಂತೆ ಕುಶಾಲತೋಪು ತಾಲೀಮು ನಡೆಸಲಾಯಿತು.
ಕಳೆದ ಬಾರಿ ಸರಣ ದಸರ ಹಿನ್ನಲೆ 8 ಆನೆಗಳು ತಾಲೀಮಿನಲ್ಲಿ ಪಾಲ್ಗೊಂಡಿದ್ದವು. ಆದರೆ ಈ ಬಾರಿ ಮೊದಲ ಹಂತದ ತಾಲೀಮಿನಲ್ಲಿ 14 ಆನೆಗಳು, ಅಶ್ವಾರೋಹಿ ದಳದ 40ಕ್ಕೂ ಹೆಚ್ಚು ಕುದುರೆಗಳು ಭಾಗಿಯಾಗಿದ್ದವು. ಈ ವೇಳೆ ಡಿಸಿಎಫ್ ಕರಿಕಾಳನ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರ ನೇತೃತ್ವದಲ್ಲಿ ತಾಲೀಮು ನಡೆಯಿತು.
ಪಿರಂಗಿ ದಳದ 30 ಮಂದಿ , ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ 7 ಫಿರಂಗಿ ಗಾಡಿಗಳಿಂದ 21 ಸುತ್ತು ಸಿಡಿಮದ್ದು ಸಿಡಿಸಿದರು. ತಾಲೀಮಿನಲ್ಲಿ ಇದೇ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸಲು ಆಗಮಿಸಿರುವ ಶ್ರೀರಾಮ, ಸುಗ್ರೀವ, ಪಾರ್ಥಸಾರಥಿ ಆನೆಗಳು ಬೆದರಿದವು.

ಈ ಭಾರಿ ದೈರ್ಯ ಪ್ರದರ್ಶಿಸಿದ ಆನೆಗಳು
ಕಳೆದ ಬಾರಿ ಆನೆಗಳ ಕಾಲಿಗೆ ಚೈನು ಕಟ್ಟಲಾಗಿತ್ತು. ಆದರೆ ಈ ಬಾರಿ ಕೆಲ ಆನೆಗಳಿಗೆ ಚೈನನ್ನು ಕಟ್ಟಿರಲಿಲ್ಲ. ಕಳೆದ ಬಾರಿಗಿಂತ ಈ ಬಾರಿ ಆನೆಗಳು ಧೈರ್ಯವಾಗಿವೆ. ಮುಂದಿನ ತಾಲೀಮಿನವರೆಗೆ ಸಂಪೂರ್ಣ ಧೈರ್ಯ ಬರಲಿದೆ. ಅರ್ಜುನ ಆನೆ ಎಂಟು ಬಾರಿ ಅಂಬಾರಿ ಹೊತ್ತಿದ್ದಾನೆ. ಹಾಗಾಗಿ ಅವನಿಗೆ ನಿಶಾನೆ ಆನೆಯಾಗಿ ಆಯ್ಕೆ ಮಾಡಲಾಗಿದೆ. ವಿಕ್ರಮ ಪಟ್ಟದ ಆನೆ ಆಗಿದ್ದಾನೆ. ಎಲ್ಲಾ ಆನೆಗಳು ಆರೋಗ್ಯವಾಗಿದೆ ಎಂದು ಡಿಸಿಎಫ್ ಕರಿಕಾಳನ್ ಹೇಳಿದರು.

ಭಾರೀ ಶಬ್ದಕ್ಕೆ ಬೆಚ್ಚಿದ ಕುದುರೆ, ಹೊಸ ಆನೆ
ಕುಶಾಲು ತೋಪು ಸಿಡಿಸುವ ಮುನ್ನ ಸಾಲಾಗಿ ಎಂಟು ಆನೆಗಳನ್ನು ಹಾಗೂ ಹಿಂದೆ ಆರು ಆನೆಗಳನ್ನು ನಿಲ್ಲಿಸಲಾಯಿತು. ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಭಾಗವಹಿಸಿರುವ ಸುಗ್ರೀವ, ಭೀಮ ಪಾರ್ಥಸಾರಥಿ, ಭೀಮ ಅನೆಗಳು ಸಿಡಿಮದ್ದಿನ ಭಾರೀ ಶಬ್ದಕ್ಕೆ ಬೆದರಿದವು. ಅಶ್ವ ಪಡೆಯ ಒಂದು ಕುದುರೆ ಹೆದರಿ ಬೆಚ್ಚಿ ಆನೆಗಳತ್ತ ಬಂದಿತು. ಇದರಿಂದ ವಿಚಲಿತಗೊಂಡ ಆನೆಗಳು ಘೀಳಿಟ್ಟವು. 5 ನಿಮಿಷಗಳ ಈ ಗೊಂದಲ ಮುಗಿದ ಮೇಲೆ ಸವಾರ ಮೆಲ್ಲನೆ ಕುದುರೆಯನ್ನು ವಾಪಾಸು ಕರೆದುಕೊಂಡು ಹೋದರು. ಇನ್ನು ಕಳೆದ ಎರಡು ವರ್ಷಗಳಿಂದ ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ಧನಂಜಯ ಈ ಬಾರಿಯೂ ಕುಶಾಲು ತೋಪು ಶಬ್ದಕ್ಕೆ ಬೆದರಿತು.

ಸೆ 16 ಮತ್ತು 23 ರಂದು ಮತ್ತೆ ಕುಶಾಲು ತೋಪು ತಾಲೀಮು
ಆದರೂ ಮೊದಲನೇ ಕುಶಾಲು ತೋಪು ಸುಗಮವಾಗಿ ನಡೆಯಿತು. 44 ಕುದುರೆಗಳು, 38 ಜನ ಸಿಆರ್ ಪಿ ತುಕಡಿ ಭಾಗವಹಿಸಿದ್ದರು. ಸೆಪ್ಟೆಂಬರ್ 16 ಹಾಗೂ 23 ರಂದು ಎರಡನೇ ಹಾಗೂ ಮೂರನೇ ಕುಶಾಲು ತೋಪು ನಡೆಯಲಿದೆ. ಶಬ್ಧಕ್ಕೆ ಹೆದರದೆ ಆನೆಗಳು ಜಂಬೂಸವಾರಿಯಲ್ಲಿ ಹೆಜ್ಜೆ ಹಾಕಲಿ ಎಂಬ ಉದ್ದೇಶದಿಂದ ಈ ಕುಶಾಲು ತೋಪು ತಾಲೀಮು ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

ಏಕೆ ಈ ಕುಶಾಲತೋಪು ತಾಲೀಮು?
ದಸರಾದ ಕೊನೆ ದಿನ ಅಂದರೆ ವಿಜಯ ದಶಮಿ ದಿನ ಜಂಬೂಸವಾರಿ ನಡೆಯುತ್ತದೆ. ಈ ವೇಳೆ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವಾಗ ರಾಷ್ಟ್ರಗೀತೆ ಮುಗಿಯುವುದರೊಳಗೆ 21 ಸುತ್ತು ಕುಶಾಲ ತೋಪು ಸಿಡಿಸಲಾಗುತ್ತದೆ. ಈ ವೇಳೆ ಉಂಟಾಗುವ ಭಾರಿ ಶಬ್ಧಕ್ಕೆ ಗಜಪಡೆ ಹೆದರದೆ ಯಾವುದೇ ಅವಘಡ ಸಂಭವಿಸದಿರಲಿ ಎಂಬ ಉದ್ದೇಶದಿಂದ ಒಂದು ತಿಂಗಳ ಮುಂಚೆಯೇ ಮೂರು ಸುತ್ತುಗಳು ಕುಶಾಲು ತೋಪು ತಾಲೀಮು ನಡೆಸಲಾಗುತ್ತದೆ. ಸಿಎಆರ್ ಪೊಲೀಸರು ಕುಶಾಲ ತೋಪು ಸಿಡಿಸುತ್ತಾರೆ.












Click it and Unblock the Notifications