ಉಪ ಚುನಾವಣೆಯಲ್ಲಿ ಹಣ ಹಂಚಿಕೆ; ಆರೋಪ ತಳ್ಳಿ ಹಾಕಿದ ಸೋಮಣ್ಣ
ಮೈಸೂರು, ಏಪ್ರಿಲ್ 17; ಉಪ ಚುನಾವಣೆಯಲ್ಲಿ ಹಣ ಹಂಚಿಕೆ ಕುರಿತಂತೆ ಕಾಂಗ್ರೆಸ್ ಮಾಡಿರುವ ಆರೋಪವನ್ನು ತಳ್ಳಿಹಾಕಿರುವ ಸಚಿವ ವಿ. ಸೋಮಣ್ಣ, ಮೂರು ಕ್ಷೇತ್ರಗಳ ಉಪ ಸಮರದಲ್ಲಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Recommended Video
ಶನಿವಾರ ಮೈಸೂರಿನಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ಸುಮ್ಮನೆ ಆರೋಪ ಮಾಡಬಾರದು. ಅವರ ಸರ್ಕಾರ ಇದ್ದ ಸಂದರ್ಭದಲ್ಲಿ ನಾವು ಆರೋಪ ಮಾಡಿದ್ದೆವು. ಇದೀಗ ಅವರು ಆರೋಪ ಮಾಡುತ್ತಿದ್ದಾರೆ" ಎಂದರು.
"ನಿನ್ನೆ ಕಾಂಗ್ರೆಸ್ಸಿಗರು ನನ್ನ ಜೊತೆಯಲ್ಲೇ ಇದ್ದರು. ಆಗ ನೇರವಾಗಿ ನನ್ನ ಬಳಿ ಹೇಳಲಿಲ್ಲ. ಈಗ ಮಾಧ್ಯಮಗಳಲ್ಲಿ ಆ ರೀತಿ ಹೇಳಿಕೆ ನೀಡಬಾರದು. ಬಸವಕಲ್ಯಾಣ, ಮಸ್ಕಿ ಹಾಗೂ ಬೆಳಗಾವಿ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ" ಎಂದು ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಕೋವಿಡ್ ಪ್ರಕರಣ; ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಮಾತನಾಡಿದ ಅವರು, "ಕೊರೊನಾ ನಿಯಂತ್ರಣಕ್ಕೆ ಕೆಲವು ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಬೆಂಗಳೂರಿನಲ್ಲಿ ಶವಸಂಸ್ಕಾರದ ವಿಚಾರವಾಗಿ ಒಂದೆರಡು ನ್ಯೂನತೆಗಳಿತ್ತು. ಅದನ್ನು ಸಭೆ ನಡೆಸಿ ಸರಿಪಡಿಸಲಾಗಿದೆ. ನನ್ನ ಕ್ಷೇತ್ರ ಸೇರಿದಂತೆ ಎಲ್ಲೂ ಕೂಡ ಆಸ್ಪತ್ರೆಗಳ ಸಮಸ್ಯೆ ಇಲ್ಲ" ಎಂದರು.
"ಮುಖ್ಯಮಂತ್ರಿಗಳ ಅನಾರೋಗ್ಯ ಕಾರಣ ಸರ್ವಪಕ್ಷ ಸಭೆ ಮುಂದೂಡಲಾಗಿದೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಯದಿದ್ದರೆ ಅದಕ್ಕೆ ಗಾಂಭೀರ್ಯ ಇರುವುದಿಲ್ಲ. 3-4 ದಿನದಲ್ಲಿ ಅವರು ಗುಣಮುಖರಾಗಿ ಹೊರಬರಲಿದ್ದು, ಆ ನಂತರ ಸಭೆ ನಡೆಸಲಾಗುತ್ತದೆ" ಎಂದು ಹೇಳಿದರು.
ಪರೀಕ್ಷೆ ಮಾಡಿಸಿದ್ದೇನೆ; "ಅಲ್ಲದೇ ಉಪ ಚುನಾವಣಾ ಪ್ರಚಾರ ಮುಗಿದ ಬಳಿಕ ನಾನು ಕೂಡ ಕೋವಿಡ್ ಟೆಸ್ಟ್ ಮಾಡಿಸಿದ್ದೇನೆ. ನನ್ನ ವರದಿ ನೆಗೆಟಿವ್ ಬಂದಿದೆ. ನನ್ನಿಂದ ಬೇರೆಯವರಿಗೆ ತೊಂದರೆ ಆಗಬಾರದು ಅಂತ ತಕ್ಷಣ ಟೆಸ್ಟ್ ಮಾಡಿಸಿದೆ" ಎಂದು ಸಚಿವರು ಸ್ಪಷ್ಟಪಡಿಸಿದರು.
"ನನ್ನ ಜೊತೆ ಬಂದವರು ಟೆಸ್ಟ್ ಮಾಡಿಸಿದ್ದು, ಅವರುಗಳ ವರದಿ ಕೂಡ ನೆಗೆಟಿವ್ ಇದೆ. ಹೀಗಾಗಿ ಉಪ ಚುನಾವಣೆಯಲ್ಲಿ ಪ್ರಚಾರದಲ್ಲಿ ತೊಡಗಿದವರು ಎಲ್ಲರು ಕೋವಿಡ್ ಟೆಸ್ಟ್ ಮಾಡಿಸಿ" ಎಂದು ಅವರು ಕರೆ ನೀಡಿದರು.












Click it and Unblock the Notifications