ಜ.25ರ ರಾಜ್ಯ ಬಂದ್ ಹಿಂದೆ ಸಿಎಂ ನೇರ ಕೈವಾಡ: ಬಿಎಸ್ವೈ
ಮೈಸೂರು, ಜನವರಿ 22: ಜನವರಿ 25ರಂದು ರಾಜ್ಯ ಬಂದ್ ಮಾಡುವ ಕನ್ನಡ ಪರ ಸಂಘಟನೆಗಳ ನಿರ್ಣಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ 'ಜನವರಿ 25 ರಂದು ಬಂದ್ ಮಾಡುವ ಅವಶ್ಯಕತೆಯೇ ಇಲ್ಲ ಎಂದಿರುವ ಅವರು ಬಂದ್ ಹಿಂದೆ ಸಿಎಂ ಸಿದ್ದರಾಮಯ್ಯ ಅವರ ನೇರ ಕುಮ್ಮಕ್ಕು ಇದೆ' ಎಂದು ಆರೋಪಿಸಿದ್ದಾರೆ.
ಜ.25 ರಂದು ಕರ್ನಾಟಕ ಬಂದ್, ಫೆ.4 ರಂದು ಬೆಂಗಳೂರು ಬಂದ್
ಬಿಜೆಪಿ ಸಮಾವೇಶದಂದು ಉದ್ದೇಶಪೂರ್ವಕವಾಗಿ ರಾಜ್ಯ ಬಂದ್ ಮಾಡುತ್ತಿದ್ದು, ಬಿಜೆಪಿಯ ಜೈತಯಾತ್ರೆಗೆ ತೊಡರುಗಾಲು ಹಾಕುವ ಉದ್ದೇಶದಿಂದ ಮುಖ್ಯಮಂತ್ರಿಗಳು ಬಂದ್ಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಗೋವಾದ ಕಾಂಗ್ರೆಸ್ ಶಾಸಕರು ಮಹದಾಯಿ ನೀರು ಬಿಡಲು ಆಕ್ಷೆಪ ವ್ಯಕ್ತಪಡಿಸಿದ್ದಾರೆ, ಅವರ ವಿರುದ್ಧ ಕಾಂಗ್ರೆಸ್ ಏಕೆ ಪ್ರತಿಭಟನೆ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ ಅವರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಏಕೆ ಈ ವರೆಗೆ ಮಹದಾಯಿ ಬಗ್ಗೆ ಮಾತನಾಡಿಲ್ಲ ಎಂದು ಪ್ರಶ್ನಿಸಿದರು.
ಮಹದಾಯಿ ಹೋರಾಟಕ್ಕೆ ಬಿಜೆಪಿ ಬೆಂಬಲ ಸದಾ ಇದೆ ಆದರೆ ಬಂದ್ಗೆ ಬಿಜೆಪಿ ಬೆಂಬಲ ಇಲ್ಲ. ಏನೇ ಮಾಡಿದರೂ ಜನವರಿ 25ರಂದು ಬಿಜೆಪಿಯ ಸಮಾವೇಶ ನಡೆದೇ ನಡೆಯುತ್ತದೆ ಎಂದು ಹೇಳಿದರು.