ವಿಸ್ತಾರಕ ಯೋಜನೆ ಚುನಾವಣೆ ಗಿಮಿಕ್ ಅಲ್ಲ: ನಿರ್ಮಲಾ ಸೀತಾರಾಮನ್
ಮೈಸೂರು, ಜುಲೈ 14: ಬಿಜೆಪಿಯ ವಿಸ್ತಾರಕ್ ಯೋಜನೆಯನ್ನು ಕರ್ನಾಟಕದಲ್ಲಿ ಮಾತ್ರ ನಡೆಯುತ್ತಿದೆಯೆಂದು ಇತರೆ ಪಕ್ಷದ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಇದು ಭಾರತದಾದ್ಯಂತ ನಡೆಯುತ್ತಿರುವ ಯೋಜನೆ. ಇದು ಚುನಾವಣೆ ಗಿಮಿಕ್ ಅಲ್ಲ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಮುಖವಾಗಿ ಪಕ್ಷದ ಕಾರ್ಯಕರ್ತೆಯಾಗಿ ಮೈಸೂರಿಗೆ ಬಂದಿದ್ದೇನೆ. ವಿಸ್ತಾರಕ್ ಯೋಜನೆಗೆ ಮೈಸೂರಿನ ಜನರು ತೋರುತ್ತಿರುವ ಸ್ಪಂದನೆ ನನಗೆ ಸಂತೋಷ ತಂದಿದೆ ಎಂದರು.

ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಮೈಸೂರು ನಗರದ ಮೂರೂ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು. ಕರ್ನಾಟಕದ ಕಾನೂನು ವ್ಯವಸ್ಥೆ ನೋಡಿ ಕೈಗಾರಿಕಾ ಉದ್ಯಮಿಗಳು ಬಂಡವಾಳ ಹೂಡಲು ಹಿಂದೇಟು ಹಾಕುತ್ತಿದ್ದಾರೆ. ಒಂದು ಕಾಲದಲ್ಲಿ ಉದ್ಯಮ ಸ್ನೇಹಿಯಾಗಿದ್ದ ಕರ್ನಾಟಕ ಈಗ ಕೊಲೆಗಳ ತಾಣವಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಕೇಂದ್ರ ಸಚಿವೆ ನಿರ್ಮಲಾ ಗಂಭೀರ ಆರೋಪ ಮಾಡಿದರು.

ಮೈಸೂರಿನಲ್ಲಿ ಭೀತಿ ಹುಟ್ಟಿಸಿರುವ ಡೆಂಗ್ಯೂ ಮಹಾಮಾರಿ ತೊಲಗಿಸಲು ನಡೆಸುತ್ತಿರುವ ಪ್ರಯತ್ನಕ್ಕೆ ಮೈಸೂರಿನ ಜನರ ಪ್ರತಿಕ್ರಿಯೆ ಚೆನ್ನಾಗಿದೆ. ಜನ ಡೆಂಗ್ಯೂ ಪೀಡಿತರಿಗಾಗಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ, ನಗರಾಧ್ಯಕ್ಷ ಡಾ.ಬಿ.ಮಂಜುನಾಥ್, ಮಾಜಿ ಸಚಿವ ಸುರೇಶ್ ಕುಮಾರ್ ಸೇರಿದಂತೆ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.












Click it and Unblock the Notifications