ಮೈಸೂರಿಗೆ ಆಗಮಿಸಿದ ಅಮಿತ್ ಶಾ, ಬಂದ್ ಬಿಸಿ ತಟ್ಟುವ ಸಾಧ್ಯತೆ
ಮೈಸೂರು, ಜನವರಿ 25: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ನಗರದಲ್ಲಿ ಆಯೋಜಿಸಿರುವ ಪರಿವರ್ತನಾ ಯಾತ್ರೆಗೆ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದಾರೆ.
ನಗರದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ರಾಜ್ಯ ಬಿಜೆಪಿ ನಾಯಕರು ಸ್ವಾಗತಿಸಿದರು.
ಚಿತ್ರಗಳು : ಮೈಸೂರಿನಲ್ಲಿ ಅಮಿತ್ ಶಾ ಮೋಡಿ
ಈ ಮುಂಚಿನ ಯೋಜನೆಯಂತೆ ಅಮಿತ್ ಶಾ ಅವರು ಚಾಮುಂಡಿ ಬೆಟ್ಟ ಮತ್ತು ಸುತ್ತೂರು ಮಠಗಳಿಗೆ ಭೇಟಿ ನೀಡಿ ನಂತರ ಮಹಾರಾಜ ಕಾಲೇಜಿನಲ್ಲಿ ಆಯೋಜಿಸಿರುವ ಪರಿವರ್ತನಾ ಯಾತ್ರೆಯಲ್ಲಿ ಅಮಿತ್ ಶಾ ಪಾಲ್ಗೊಳ್ಳಬೇಕಿತ್ತು ಆದರೆ ಕೊನೆ ಸಮಯದಲ್ಲಿ ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದೆ.
ಕಾರಣಾಂತರದಿಂದ ಅಮಿತ್ ಶಾ ಅವರ ವೇಳಾ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದ್ದು, ಹೊಸ ವೇಳಾಪಟ್ಟಿಯನ್ನು ದೆಹಲಿ ಸಿಬ್ಬಂದಿ ಸ್ಥಳೀಯ ಪೊಲೀಸ್ ಇಲಾಖೆಗೆ ರವಾನಿಸಿದ್ದಾರೆ.

ಹೊಸ ಕಾರ್ಯಕ್ರಮ ಪಟ್ಟಿಯಂತೆ ಅಮಿತ್ ಶಾ ಅವರು ರೋಡ್ ಶೋ ನಲ್ಲಿ ಪಾಲ್ಗೊಂಡು ನಂತರ ಮಹಾರಾಜ ಕಾಲೇಜು ಮೈದಾನಕ್ಕೆ ತೆರಳಿ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ಅಮಿತ್ ಶಾ ಅವರ ಆಗಮನದ ದಿನವೇ ರಾಜ್ಯ ಬಂದ್ಗೆ ಕರೆ ಕೊಟ್ಟಿದ್ದುದರ ಬಗ್ಗೆ ಬಿಜೆಪಿ ಭಾರಿ ವಿರೋಧ ವ್ಯಕ್ತಪಡಿಸಿದ್ದು, ಪರಿವರ್ತನಾ ಯಾತ್ರೆಗೆ ಅಡ್ಡಗಾಲು ಹಾಕಲು ಕಾಂಗ್ರೆಸ್ ಹಿಂಬಾಗಿಲಿನಿಂದ ಬಂದ್ಗೆ ಬೆಂಬಲ ನೀಡುತ್ತಿದೆ. ಇದೊಂದು ಸರ್ಕಾರಿ ಪ್ರಾಯೋಜಿತ ಬಂದ್ ಎಂದು ಬಿಜೆಪಿ ಟೀಕಿಸಿದೆ.
ಬಂದ್ ಬಿಸಿ ಪರಿವರ್ತನಾ ಯಾತ್ರೆಯ ಮೇಲೆ ಬೀಳದಂತೆ ಸಕಲ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಬಿಜೆಪಿ ಹೇಳಿಕೊಂಡಿದೆಯಾದರೂ, ಅಮಿತ್ ಶಾ ಆಗಮನದ ವೇಳೆ ಪ್ರತಿಭಟನೆ ಮಾಡಲೂ ಕೆಲವು ಸಂಘಟನೆಗಳ ಸದಸ್ಯರು ನಿರ್ಧರಿಸಿದ್ದಾರೆ ಹಾಗಾಗಿ ಯಾತ್ರೆಯಲ್ಲಿ ಗೊಂದಲಗಳಾಗಬಹುದು ಎನ್ನಲಾಗಿದೆ.
ಸಮಾವೇಶ ನಡೆಯುತ್ತಿರುವ ಸ್ಥಳಕ್ಕೆ ಹತ್ತಿರದಲ್ಲೇ ಇರುವ ರಾಮಸ್ವಾಮಿ ವೃತ್ತದಲ್ಲಿ ಕರುನಾಡ ಸೇನೆ ಕಾರ್ಯಕರ್ತರ ಧರಣಿ ಕೂತಿದ್ದು, ಅಮಿತ್ ಶಾ ಅವರ ವಿರುದ್ಧ ಘೋಷಣೆಗಳನ್ನು ಕೂಗಲು ಸಜ್ಜಾಗಿದ್ದಾರೆ.
ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.












Click it and Unblock the Notifications