ಕ್ಷೇತ್ರದಲ್ಲಿ ನಾನು ಸಿಎಂ ಆಗಬೇಂಬ ಕೂಗು ಕೇಳಿ ಬರುತ್ತಿದೆ-ಸಿ.ಟಿ ರವಿ
ಮೈಸೂರು, ಏಪ್ರಿಲ್ 24: ನನಗೂ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ ಎಂದು ಎನ್ನುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮುಖ್ಯಮಂತ್ರಿ ಆಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಮುಂದಿನ ಸಿಎಂ ಮುಖ್ಯಮಂತ್ರಿ ಸಿ.ಟಿ.ರವಿ ಎನ್ನುವ ಕಾರ್ಯಕರ್ತರ ಹೇಳಿಕೆ ಕುರಿತು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿಎಂ ಆಗಬೇಕೆಂದು ಕ್ಷೇತ್ರದಲ್ಲಿ ಮಾತ್ರ ಕೂಗು ಕೇಳಿಬರುತ್ತಿದೆ. ಹಾಗಾಗಿ ಸುಮ್ಮನೆ ಇದ್ದೇನೆ. ಯಾವಾಗ ನಾನು ಸಿಎಂ ಆಗಬೇಕೆಂಬ ಕೂಗು ರಾಜ್ಯದೆಲ್ಲೆಡೆ ಕೇಳಿ ಬರುತ್ತದೋ ಅಂದು ನನ್ನನ್ನು ಸಿಎಂ ಮಾಡುವಂತೆ ವರಿಷ್ಠರ ಬಳಿ ಕೇಳುತ್ತೇನೆ ಎಂದು ಹೇಳಿದರು.

ಇದೇ ವೇಳೆ ಲಿಂಗಾಯತ ಸಿಎಂಗಳು ಹೆಚ್ಚು ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಯನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಖಂಡಿಸಿದ್ದಾರೆ. ಇಡೀ ಲಿಂಗಾಯತ ಸಮುದಾಯವನ್ನು ಭ್ರಷ್ಟಾಚಾರಿಗಳು ಎಂದು ಹೇಳಿರುವುದು ಸರಿಯಲ್ಲ. ಸಿದ್ಧರಾಮಯ್ಯ ಅಸಹನೆಯಿಂದ ಈ ಮಾತು ಹೇಳಿದ್ದಾರೆ. ಇಡೀ ಕಾಂಗ್ರೆಸ್ ನೀತಿಯೇ ಸಮಾಜವನ್ನು ಒಡೆಯುವುದಾಗಿದೆ. ವರುಣದಲ್ಲಿ ಸಿದ್ದರಾಮಯ್ಯ ಚಕ್ರವ್ಯೆಹದಲ್ಲಿ ಸಿಲುಕಿದ್ದಾರೆ. ಆದರೆ, ಅವರನ್ನು ಕಾಪಾಡುವ ಕೃಷ್ಣ ನಮ್ಮ ಬಳಿ ಇದ್ದಾನೆ. ಪರಮೇಶ್ವರ್ ಅವರನ್ನು ಸೋಲಿಸಿದ ಶಾಪ ಕೂಡ ಸಿದ್ದರಾಮಯ್ಯ ಮೇಲಿದೆ ಎಂದು ತಿಳಿಸಿದರು.
ಬಿಜೆಪಿ ಶಿಸ್ತಿನ ಮತ್ತು ಕಾರ್ಯಕರ್ತರ ಪಕ್ಷ. ಹಳೆ ಬೇರು, ಹೊಸ ಚಿಗುರು ಮಾದರಿಯಲ್ಲಿ ವರಿಷ್ಠರು ಟಿಕೆಟ್ ಹಂಚಿಕೆ ಮಾಡಿದ್ದಾರೆ. ಟಿಕೆಟ್ ನೀಡುವ ಮುನ್ನ ಪಕ್ಷವು ಕಾರ್ಯಕರ್ತರ ಬ್ಯಾಲೆಟ್ ಮೂಲಕ ಅಭಿಪ್ರಾಯ ಸಂಗ್ರಹ ಮಾಡಿತ್ತು. ಜಿಲ್ಲಾ ಹಾಗೂ ರಾಜ್ಯ ಕೋರ್ ಸಮಿತಿ ಸಲಹೆ ಪಡೆದುಕೊಂಡಿತ್ತು. ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುವ ಜತೆಗೆ ಅದರ ಆಶಯವನ್ನು ಅಳವಡಿಸಿಕೊಂಡಿದೆ. ಹಾಗಾಗಿ 70 ಜನ ಹೊಸಬರಿಗೆ ಅವಕಾಶ ನೀಡಲಾಗಿದೆ. ಈ ಸಾಲಿನಲ್ಲಿ ವಕೀಲರು, ವೈದ್ಯರು, ಐಎಎಸ್ ಅಧಿಕಾರಿಗಳು ಇದ್ದಾರೆ ಎಂದರು.
ಏ.25, 26ರಂದು ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಮಹಾ ಪ್ರಚಾರ ಅಭಿಯಾನ ಆರಂಭಿಸಲಾಗುತ್ತಿದೆ. ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ನಾಯಕರು ಇದರಲ್ಲಿ ಭಾಗವಹಿಸುತ್ತಾರೆ. ಬೂತ್ ಹಂತದವರೆಗೆ ಪ್ರಚಾರ ಕಾರ್ಯ ನಡೆಯುತ್ತದೆ. ಏಕಕಾಲದಲ್ಲಿ ರಾಜ್ಯದ 224 ಕ್ಷೇತ್ರದಲ್ಲಿ ಈ ಅಭಿಯಾನ ನಡೆಯಲಿದೆ.

98 ಕೇಂದ್ರದ ಸಚಿವರು, 13 ರಾಷ್ಟ್ರೀಯ ನಾಯಕರು ಈ ಅಭಿಯಾನದಲ್ಲಿ ಪಾಲ್ಗೊಳಲ್ಲಿದ್ದಾರೆ. ಹಾಲಿ, ಮಾಜಿ ಮುಖ್ಯಮಂತ್ರಿಗಳು ಇದರಲ್ಲಿ ಇರಲಿದ್ದಾರೆ. 150 ಸ್ಥಾನ ಗೆಲ್ಲಬೇಕೆಂಬ ಗುರಿ ಇಟ್ಡುಕೊಳ್ಳಲಾಗಿದೆ. ನಿರ್ಮಲ ಸೀತಾರಾಮನ್, ಅಣ್ಣಾಮಲೈ, ಯೋಗಿ ಆದಿತ್ಯನಾಥ್, ಸ್ಮೃತಿ ಇರಾನಿ ನಮ್ಮ ಪ್ರಚಾರದ ಪ್ರಮುಖ ಆಕರ್ಷಣೆ ಆಗಲಿದ್ದಾರೆ ಎಂದು ಹೇಳಿದರು.
ಸದೃಢ ಸರ್ಕಾರಕ್ಕಾಗಿ ನಮಗೆ ಸ್ಪಷ್ಟ ಬಹುಮತ ಕೊಡಿ ಎಂಬುದು ನಮ್ಮ ಬೇಡಿಕೆ ಆಗಿದೆ. ಹಾಗಾಗಿ ಈ ಬಾರಿ ಮೈತ್ರಿ ಸರ್ಕಾರ ಬರುವುದಿಲ್ಲ. ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ. ಒಡೆಯುವುದು ಕಾಂಗ್ರೆಸ್ನ ಚಾಳಿ. ದೇಶವನ್ನೇ ಒಡೆದ ಹೆಗ್ಗಳಿಕೆ ಅವರದು. ಒಡೆಯುವುದು ಅವರ ರಾಜಕೀಯ ಸಿದ್ಧಾಂತದ ಒಂದು ಭಾಗ. ಮೊದಲು ಲಿಂಗಾಯತರ ಡ್ಯಾಂ ಒಡೆಯಲು ಯತ್ನಿಸಿದರು. ಆದರೆ, ನಾವು ಹಿಂದುತ್ವದ ಡ್ಯಾಂ ಅನ್ನು ಎತ್ತರಿಸಿದ್ದೇವೆ ಎಂದು ತಿಳಿಸಿದರು.
ಈ ವೇಳ ರಾಜೇಂದ್ರ, ಮೈ.ವಿ.ರವಿಶಂಕರ್, ಮಂಗಳಾ ಸೋಮಶೇಖರ್, ವಸಂತ್ ಕುಮಾರ್, ದೇವನೂರು ಪ್ರತಾಪ್ ಸೇರಿದಂತೆ ಇತರರು ಉಪಸ್ಥಿತರಿದ್ದರು.












Click it and Unblock the Notifications