ಬಸನಗೌಡ ಯತ್ನಾಳ್ ವಿರುದ್ಧ ರೊಚ್ಚಿಗೆದ್ದ ಬಿಜೆಪಿ ನಾಯಕರು; ದುಷ್ಟ ಸಂಹಾರ ಖಚಿತ ಎಂದಿದ್ಯಾಕೆ?
ಕರ್ನಾಟಕ ಬಿಜೆಪಿಯ ಹಿಂದೂ ಫೈರ್ ಬ್ರಾಂಡ್ ಎಂದೇ ಬಿಂಬಿಸಲಾಗುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಹೇಳಿಕೆಗಳಿಂದ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಯತ್ನಾಳ್ ಟೀಂ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಇತ್ತೀಚೆಗೆ ಬಸವಣ್ಣನವರ ಕುರಿತು ಅವರು ನೀಡಿರುವ ಹೇಳಿಕೆ ಇದೀಗ ಬಿಜೆಪಿ ನಾಯಕರನ್ನು ಕೆರಳಿಸಿದ್ದು, ಬಸನಗೌಡ ಪಾಟೀಲ್ರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎನ್ನುವ ಕೂಗು ಹೆಚ್ಚಾಗಿದೆ. ಬಿಎಸ್ವೈ ಬೆಂಬಲಿಗ ಬಣ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಯತ್ನಾಳ್ ವಿರುದ್ಧ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಬಿಜೆಪಿ ನಾಯಕರಾದ ರೇಣುಕಾಚಾರ್ಯ ಮತ್ತು ಬಿ.ಸಿ.ಪಾಟೀಲ್ ನೇತೃತ್ವದಲ್ಲಿ ಬಿಜೆಪಿಯ 20ಕ್ಕೂ ಹೆಚ್ಚು ಮಾಜಿ ಶಾಸಕರು, ಸಚಿವರು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡುವಂತೆ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ಸಿ.ಪಾಟೀಲ್, ಯತ್ನಾಳ್ ಮತ್ತು ಅವರ ಗುಂಪಿನಿಂದ ಕಾರ್ಯಕರ್ತರಿಗೆ ಬೇಸರವಾಗಿದೆ. ಅದಕ್ಕಾಗಿ ಪಕ್ಷದಿಂದ ನಾವೆಲ್ಲ ಒಟ್ಟಿಗೆ ಸೇರಿ ಸ್ಪಷ್ಟ ಸಂದೇಶ ರವಾನೆ ಮಾಡುತ್ತಿದ್ದೇವೆ. ಶೀಘ್ರದಲ್ಲೇ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ಆಗಲಿದೆ. ಪಕ್ಷದಲ್ಲಿ ಕೆಲವು ಆಂತರಿಕ ದುಷ್ಟ ಶಕ್ತಿಗಳಿದ್ದು, ಅವುಗಳಿಂದ ಪಕ್ಷಕ್ಕೆ ಧಕ್ಕೆಯಾಗುತ್ತಿದೆ ಎಂದರು.
ಹೊರಗಿನವರಾಗಿದ್ದರೆ ಶೀಘ್ರ ಕ್ರಮ ಆಗುತ್ತಿತ್ತು. ಆದರೆ ಅವರು ಹಿರಿಯರು ತಿದ್ದುಕೊಳ್ಳಲಿ ಅಂತ ಬಿಟ್ಟಿದ್ದಾರೆ. ಹಿರಿಯರಾದ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವುದು ಸರಿಯಲ್ಲ. ಯತ್ನಾಳ್ಗೆ ಬಿಎಸ್ವೈ, ವಿಜಯೇಂದ್ರ ವಿರುದ್ಧ ಅಸಮಾಧಾನ ಇದ್ದರೆ ನಾಲ್ಕು ಗೋಡೆ ಮಧ್ಯೆ ಚರ್ಚಿಸಲಿ. ಮಾಧ್ಯಮದಲ್ಲಿ ಬರಬೇಕೆಂಬ ಹುಚ್ಚಿನಿಂದ ಪಕ್ಷದ ವರಿಷ್ಠರ ವಿರುದ್ಧ ಮಾತನಾಡಿದರೆ, ಪಕ್ಷದ ನಾಯಕರನ್ನು ಟೀಕಿಸಿದರೆ ಹೆಸರು ಬರುವುದಿಲ್ಲ ಎಂದರು.
ಬಿಜೆಪಿ ಸೋಲಿಗೆ ಯತ್ನಾಳ್ ಕಾರಣ
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಉಪಚುನಾವಣೆಯಲ್ಲಿ ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲಲು ಯತ್ನಾಳ್ ಕಾರಣ. ಯಡಿಯೂರಪ್ಪ ಕುಟುಂಬದ ಬಗ್ಗೆ ದ್ವೇಷ ಇದ್ದರೆ, ಕೇಂದ್ರದ ನಾಯಕರನ್ನು ಭೇಟಿಯಾಗಿ ಚರ್ಚೆ ಮಾಡಿ, ತಮಗೆ ಬೇಕಾದ ಸ್ಥಾನ ಪಡೆದುಕೊಳ್ಳಲಿ. ಬಸನಗೌಡ ಪಾಟೀಲ್ ಯತ್ನಾಳ್ ಅವರ ನಡೆಯಿಂದ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಕುಗ್ಗಿದೆ ಎಂದರು.
ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದಾಗಿನಿಂದ ಎಲ್ಲಾ ಕಡೆ ಸಂಚಾರ ನಡೆಸಿ ಪಕ್ಷ ಸಂಘಟಿಸುತ್ತಿದ್ದಾರೆ. ಅವರ ನೇತೃತ್ವದಲ್ಲಿ ನಡೆದ ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣದ ಹೋರಾಟದಿಂದ ಸಿಎಂ ಸಿದ್ದರಾಮಯ್ಯ ಆತಂಕಗೊಂಡಿದ್ದಾರೆ, ಇದು ಪಕ್ಷದ ಗೆಲುವು ಎಂದಿದ್ದಾರೆ.
ಬಿಎಸ್ ಯಡಿಯೂರಪ್ಪ ಆಪ್ತ ರೇಣುಕಾಚಾರ್ಯ ಯತ್ನಾಳ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇಂದು ಚಾಮುಂಡೇಶ್ವರಿ ತಾಯಿಗೆ ದುಷ್ಟ ಸಂಹಾರ ಮಾಡುವಂತೆ ಬೇಡಿಕೊಂಡಿದ್ದೇವೆ. ಪಕ್ಷದ ಬಾಹ್ಯ ಮತ್ತ ಆಂತರಿಕ ದುಷ್ಟಶಕ್ತಿಗಳನ್ನು ಶೀಘ್ರದಲ್ಲೇ ಸಂಹರಿಸಲಾಗುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications