ತಮ್ಮದೇ ಪಕ್ಷದವರ ಮೇಲೆ ಹರಿಹಾಯ್ದ ಶ್ರೀನಿವಾಸಪ್ರಸಾದ್
ಮೈಸೂರು, ಡಿಸೆಂಬರ್ 30: ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವ ವಿ.ಶ್ರೀನಿವಾಸ ಪ್ರಸಾದ್ ತಮ್ಮದೇ ಪಕ್ಷದ ಸಚಿವರು, ಮುಖಂಡರ ಮೇಲೆ ಹರಿಹಾಯ್ದಿದ್ದಾರೆ.
ವಿವಾದಾತ್ಮಕ ಹೇಳಿಕೆ, ಅನಂತ್ ಕುಮಾರ್ ಹೆಗಡೆ ವಿರುದ್ಧ ದೂರು
ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮತ್ತು ಗೋ. ಮಧುಸೂದನ್ ಅವರು ಮತಾಂಧರು, ಅವಿವೇಕಿಗಳು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ತಮ್ಮದೇ ಪಕ್ಷದ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.
ಮೈಸೂರಿನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಂವಿಧಾನದ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಾ ಮೋದಿ ಸರ್ಕಾರಕ್ಕೆ ಅವಮಾನ ಮಾಡಿರುವ ಇಬ್ಬರಿಗೂ ಪಕ್ಷದ ವರಿಷ್ಠರು ಎಚ್ಚರಿಕೆ ನೀಡಬೇಕು. ಇದೇ ತಪ್ಪು ಮುಂದುವರಿಸಿದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಂಬೇಡ್ಕರ್ ವಿರಚಿತ ಸಂವಿಧಾನವನ್ನು ಹೊಗಳಿದ ಅವರು, ಚಹಾ ಮಾರುತ್ತಿದ್ದ ವ್ಯಕ್ತಿ ದೇಶದ ಪ್ರಧಾನಿಯಾಗಲು ನಮ್ಮಲ್ಲಿರುವ ಸಂವಿಧಾನವೇ ಕಾರಣ ಎಂದು ನರೇಂದ್ರ ಮೋದಿಯೇ ಹೇಳಿದ್ದಾರೆ. ಸಂವಿಧಾನವೇ ಶ್ರೇಷ್ಠ ಗ್ರಂಥ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಆದರೆ ಐದು ಸಲ ಸಂಸದರಾಗಿ ಆಯ್ಕೆಯಾಗಿರುವ ಅನಂತಕುಮಾರ್ ಹೆಗಡೆಗೆ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಲು ಆಗದಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಪಾಪದ ಪಿಂಡ ಸಿದ್ದರಾಮಯ್ಯ ಅವರನ್ನ ಮುಗಿಸಿಬಿಡಿ, ಅಂದ್ರು ಅನಂತ್ ಕುಮಾರ್ ಹೆಗಡೆ
'ಕೇಂದ್ರ ಸಚಿವ' ಎಂಬ ಸ್ಥಾನದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ವ್ಯಕ್ತಿಗೆ ಸಂವಿಧಾನದ ಬಗ್ಗೆ ಕನಿಷ್ಠ ಜ್ಞಾನ ಇಲ್ಲವೇ? ಜಾತ್ಯತೀತತೆಯ ಅರ್ಥ ತಿಳಿದಿಲ್ಲವೇ? ಇವರ ಹೇಳಿಕೆಯಿಂದಾಗಿ ಜನರು ಬೀದಿಗಿಳಿದು ಪ್ರತಿಭಟಿಸುವಂತಾಗಿದೆ ಎಂದು ಅವರು ಕಿಡಿಕಾರಿದರು.
ಸಂವಿಧಾನವನ್ನು ಒಪ್ಪುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ದ ಬಿಜೆಪಿ ಮುಖಂಡ ಗೋ.ಮಧುಸೂದನ್ ಬಗ್ಗೆಯೂ ಕಿಡಿಕಾರಿದ ಶ್ರೀನಿವಾಸ ಪ್ರಸಾದ್ 'ವಿಧಾನ ಪರಿಷತ್ ಸದಸ್ಯನಾಗಿದ್ದ ಗೋ.ಮಧುಸೂದನ್ಗೆ ಇನ್ನೂ ಬುದ್ದಿ ವಿಕಾಸವಾಗಿಲ್ಲ. ಸಂವಿಧಾನದ ಬಗ್ಗೆ ಅನಾವಶ್ಯಕವಾಗಿ ಮಾತನಾಡಿ, ಅದನ್ನು ಸಮರ್ಥಿಸಿಕೊಳ್ಳುವ ಆತನಿಗೆ ನಾಚಿಕೆಯಾಗಬೇಕು' ಎಂದರು.
ಗೋ.ಮಧುಸೂದನ್ ಅವರ ಹೆಸರಿನ ಬಗ್ಗೆ ವ್ಯಂಗ್ಯ ಮಾಡಿದ ಅವರು ಆತನ ಹೆಸರಿನಲ್ಲೇ ಗೋ.. ಗೋ.. ಇದೆ ಆತನನ್ನು ಯಾರೂ ಕಮ್ ಅನ್ನಲ್ಲ ಎಂದರು.