ಬಿಜೆಪಿಗರು ಜೆಡಿಎಸ್ ಅನುಮೋದಿತ ಕಾಮಗಾರಿ ರದ್ದುಗೊಳಿಸಿದ್ದೇಕೆ: ಸಾ ರಾ ಮಹೇಶ್ ಆರೋಪ
ಮೈಸೂರು, ಸೆಪ್ಟೆಂಬರ್ 9: "ಜಿಲ್ಲೆಯ ವಿವಿಧ ಕ್ಷೇತ್ರಗಳಿಗೆ 9 ತಿಂಗಳ ಹಿಂದೆ ಸುಮಾರು 80 ಕೋಟಿ ವೆಚ್ಚದಲ್ಲಿ ಮಂಜೂರಾಗಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಬಿಜೆಪಿ ಸರ್ಕಾರ ಏಕಾಏಕಿ ತಡೆಹಿಡಿದು ಸೇಡಿನ ರಾಜಕಾರಣ ನಡೆಸುತ್ತಿದೆ" ಎಂದು ಶಾಸಕ ಸಾ.ರಾ.ಮಹೇಶ್ ದೂರಿದ್ದಾರೆ.
"ಜಿ.ಟಿ.ದೇವೇಗೌಡ ಅವರಷ್ಟು ವಿಶಾಲ ಹೃದಯ ನನಗಿಲ್ಲ" ಮತ್ತೆ ಸಾರಾ ಮಹೇಶ್ ವಾಕ್ಸಮರ
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದಸರಾ ಮಹೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ನಮ್ಮ ಸಹಕಾರ ಕೋರಿದ್ದಾರೆ. ಆದರೆ, ಆಡಳಿತ ಪಕ್ಷದವರು ಈ ರೀತಿ ವರ್ತಿಸಿದರೆ ನಾವು ಸಹಕಾರ ಕೊಡುವುದಾದರೂ ಹೇಗೆ? ತಡೆ ತೆರವುಗೊಳಿಸಿ ಕಾಮಗಾರಿ ಕೈಗೆತ್ತಿಕೊಳ್ಳಲು ಅವಕಾಶ ನೀಡಬೇಕು. ಇಲ್ಲವಾದರೆ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ" ಎಂದು ಎಚ್ಚರಿಸಿದರು.
"ದಸರಾ ಮಹೋತ್ಸವಕ್ಕೆ ಸಿದ್ಧತೆ ನಡೆಯುತ್ತಿದ್ದು, ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಹೆಚ್ಚು ಅನುದಾನ ಬಿಡುಗಡೆ ಮಾಡಬೇಕಿತ್ತು. ಆದರೆ, ಜಿಲ್ಲೆಯ ಕೆ.ಆರ್.ನಗರ, ಪಿರಿಯಾಪಟ್ಟಣ, ತಿ.ನರಸೀಪುರ ಸೇರಿದಂತೆ ಎಂಟು ಕ್ಷೇತ್ರಗಳ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿಗೆಂದು ಲೋಕೋಪಯೋಗಿ ಇಲಾಖೆ ಕರೆದಿದ್ದ ಟೆಂಡರ್ ರದ್ದುಪಡಿಸಲಾಗಿದೆ. ಇದ್ಯಾವ ನ್ಯಾಯ?, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆಂದು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಒಂದೊಂದು ಕ್ಷೇತ್ರಕ್ಕೆ 8ರಿಂದ 10 ಕೋಟಿ ಅನುದಾನ ನೀಡಿದ್ದರು. ಆಡಳಿತಾತ್ಮಕ ಮಂಜೂರಾತಿ ಲಭಿಸಿ ಇನ್ನೇನು ಕೆಲಸ ಆರಂಭಿಸಬೇಕು ಎನ್ನುವಷ್ಟರಲ್ಲಿ ಕಾಮಗಾರಿ ತಡೆ ಹಿಡಿದಿದ್ದಾರೆ" ಎಂದು ದೂರಿದ್ದಾರೆ.
ತಮ್ಮ ವಿರುದ್ಧ ವೈಯಕ್ತಿವಾಗಿ ಜಿಟಿಡಿ ಟೀಕೆ ಮಾಡುತ್ತಿರುವ ಕುರಿತು ಪ್ರತಿಕ್ರಿಯಿಸಿ, "ಜಿಟಿಡಿ ನಮ್ಮ ನಾಯಕರು. ಅವರು ಪಕ್ಷದಲ್ಲಿ ಇರುವವರೆಗೆ ನನ್ನನ್ನು ತಿದ್ದುವ ಹಕ್ಕು ಹೊಂದಿದ್ದಾರೆ. ಅವರ ಜತೆ ಕುಳಿತು ಒಮ್ಮೆ ಮಾತುಕತೆ ಮಾಡುತ್ತೇನೆ. ನಿನ್ನೆ ನಗರ ಪಾಲಿಕೆ ಜೆಡಿಎಸ್ ಸದಸ್ಯರು ಜಿ.ಟಿ. ದೇವೇಗೌಡ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಸ್ವಲ್ಪ ದಿನಗಳ ಕಾಲ ತಟಸ್ಥವಾಗಿ ಇರುತ್ತೇನೆ ಎಂದು ತಿಳಿಸಿದ್ದಾರೆ. ಅವರು ನನ್ನನು ಆಕ್ಟಿಂಗ್ ಸಿಎಂ ಅಂದಿದ್ದಾರೆ. ನಾನು ಬಹಳ ಬುದ್ಧಿವಂತ ಎಂದೂ ಹೇಳಿದ್ದಾರೆ. ಆದರೆ ನನ್ನ ಪ್ರಕಾರ ನಾನು ದಡ್ಡ" ಎಂದರು.