ಅವಧಿಗೆ ಮೊದಲೇ ಯಡಿಯೂರಪ್ಪ ಸರ್ಕಾರ ಪತನ!
ಮೈಸೂರು, ಜನವರಿ 25 : "ಸರ್ಕಾರದ ವ್ಯವಸ್ಥೆ ನೋಡಿದರೆ ಹಿಂದಿನ ಯಡಿಯೂರಪ್ಪ ಸರ್ಕಾರದಂತೆ ಬೇಗ ಬೀಳಲಿದೆ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಹೇಳಿದ್ದಾರೆ.
ಸೋಮವಾರ ಆರ್. ಧ್ರುವನಾರಾಯಣ್ ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದರು. ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಬಿಜೆಪಿ ಸರ್ಕಾರ ಇರುವಂತಹ ಅನುದಾನಗಳನ್ನು ಸರಿಯಾಗಿ ಬಳಸಿಕೊಂಡಿಲ್ಲ. ಇರುವಂತಹ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ" ಎಂದು ಆರೋಪಿಸಿದರು.
"ಕೇಂದ್ರದಿಂದಲೂ ಸಹಕಾರ ದೊರೆಯುತ್ತಿಲ್ಲ. ಆದ್ದರಿಂದ, ರಾಜ್ಯದಲ್ಲಿ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿಲ್ಲ. ಯಾವುದೇ ಜನಪರ ಕೆಲವು ನಡೆಯುತ್ತಿಲ್ಲ. ಸಚಿವರ ನಡುವೆ ಖಾತೆ ಬದಲಾವಣೆಯಾಗುತ್ತಿದೆ. ಹಿರಿಯ ನಾಯಕರ ನಡುವೆ ಆಂತರಿಕ ಕಿತ್ತಾಟ ಹೆಚ್ಚಾಗಿದೆ" ಎಂದು ದೂರಿದರು.

"ಇದು ಬಿಜೆಪಿಯಲ್ಲಿ ಹೊಸದೇನಲ್ಲ. ಈ ಹಿಂದೆ ಅವರ ಸರ್ಕಾರ ಇದ್ದಾಗಲೂ ಇದೆ ಮಾದರಿಯ ಆಂತರಿಕ ಕಚ್ಚಾಟವಾಗಿತ್ತು. ಈ ಎಲ್ಲಾ ಬೆಳವಣಿಗೆ ನೋಡುತ್ತಿದ್ದರೆ ಈ ಹಿಂದೆ ಆಗಿದ್ದ ಬೆಳವಣಿಗೆ ಉಂಟಾಗಬಹುದು ಎಂಬ ಸಂಶಯ ಮೂಡುತ್ತಿದೆ" ಎಂದು ಆರ್. ಧ್ರುವನಾರಾಯಣ್ ಹೇಳಿದರು.
ನಮ್ಮ ಬೆಂಬಲವಿದೆ; "ಜನವರಿ 26ರ ಗಣರಾಜ್ಯೋತ್ಸವ ದಿನದಂದು ರೈತರು ನಡೆಸುವ ರೈತ ರಾಜ್ಯೋತ್ಸವಕ್ಕೆ ನಮ್ಮ ಬೆಂಬಲವಿದೆ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಹೇಳಿದ್ದಾರೆ.
"ದೇಶದ ಇತಿಹಾಸದಲ್ಲಿ ಗಣರಾಜ್ಯೋತ್ಸವವನ್ನು ಬಹಳ ಸಂತೋಷದಿಂದ ಆಚರಿಸಲಾಗುತ್ತಿತ್ತು. ಆದರೆ, ಈ ಬಾರಿಯ 72 ನೇ ಗಣರಾಜ್ಯೋತ್ಸವ ಆಚರಣೆ ವೇಳೆ ಗಣತಂತ್ರ ವ್ಯವಸ್ಥೆಗೆ ಧಕ್ಕೆ ಬಂದಿದೆ. ರೈತರ ಆಹವಾಲುಗಳನ್ನು ಸರ್ಕಾರ ಪರಿಗಣಿಸದೇ ಇರೋದು ಶೋಚನೀಯ" ಎಂದರು.
"ಇಡೀ ದೇಶದ ಎಲ್ಲಾ ಭಾಗದಲ್ಲೂ ರೈತರು ಮಂಗಳವಾರ ಪ್ರತಿಭಟನೆ ಮಾಡುತ್ತಿದ್ದಾರೆ. ರೈತರ ಪರವಾಗಿ ನಮ್ಮ ಪಕ್ಷ ಇದೆ. ಮಂಗಳವಾರ ನಡೆಯುವ ಟ್ರಾಕ್ಟರ್ ಜಾಥಾಕ್ಕೆ ನಮ್ಮ ಬೆಂಬಲವಿದೆ" ಎಂದು ಸ್ಪಷ್ಟಪಡಿಸಿದರು.
ಬೇಜವಾಬ್ದಾರಿ ಹೇಳಿಕೆ; "ಕುರುಬ ಸಮುದಾಯದಿಂದ ಮಾಜಿ ಸಿಎಂ ಸಿದ್ದರಾಮಯ್ಯಗೆ ಬಹಿಷ್ಕಾರ ಮಾಡಲಾಗುತ್ತದೆ" ಎಂಬ ಬಿಜೆಪಿ ನಾಯಕ ಹೆಚ್. ವಿಶ್ವನಾಥ್ ಹೇಳಿಕೆ ಬಗ್ಗೆ ಧ್ರುವನಾರಾಯಣ್ ಆಕ್ರೋಶ ವ್ಯಕ್ತಪಡಿಸಿದರು.
"ವಿಶ್ವನಾಥ್ ಹಿರಿಯ ನಾಯಕರು. ನಮ್ಮ ಪಕ್ಷದಲ್ಲಿ ಬಹಳಷ್ಟು ದಿನ ಇದ್ದವರು. ಸಿದ್ದರಾಮಯ್ಯ ಅವರ ಬಗ್ಗೆ ಇಂತಹ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಇದು ಬೇಜಾವಾಬ್ದಾರಿ ಹೇಳಿಕೆ. ರಾಜ್ಯದಲ್ಲಿ ಸಿದ್ದರಾಮಯ್ಯ ಮಾಸ್ ಲೀಡರ್. ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸಿದ ನಾಯಕರು" ಎಂದರು.












Click it and Unblock the Notifications