ಮೈಸೂರು ಮೇಯರ್: ಜೆಡಿಎಸ್ ಆಟ, ಬಿಜೆಪಿ ಒಳತಂತ್ರ, ಕಾಂಗ್ರೆಸ್ ಪಲ್ಟಿ
ಮೈಸೂರು, ಸೆ 6: ಕೊನೆಯ ಕ್ಷಣದಲ್ಲಿ ಜೆಡಿಎಸ್ ಆಡಿದ ರಾಜಕೀಯ ಮತ್ತು ಬಿಜೆಪಿಯ ಒಳತಂತ್ರದ ಅರಿವಿಲ್ಲದೇ ಮೈಸೂರು ಮಹಾನಗರಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಮಕಾಡೆ ಮಲಗಿಕೊಂಡಿದೆ.
ಮೈಸೂರು ಮಹಾನಗರಪಾಲಿಕೆಯ ತನ್ನ ಎಲ್ಲಾ ಜನಪ್ರತಿನಿಧಿಗಳ ಜೊತೆಗೆ ಕೆಲವೊಂದು ಜೆಡಿಎಸ್ಸಿನ ಶಾಸಕರು/ಕಾರ್ಪೋರೇಟರುಗಳು ಕೈಜೋಡಿಸಿದ್ದರಿಂದ, ಬಿಜೆಪಿಯ ಗೇಂ ಪ್ಲ್ಯಾನ್ ವರ್ಕೌಟ್ ಆಗಿದೆ. ಬಿಜೆಪಿಯ ಶಿವಕುಮಾರ್ ಮೇಯರ್ ಆಗಿ, ರೂಪಾ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
Breaking: ಮೈಸೂರು ಮೇಯರ್,ಉಪಮೇಯರ್ ಬಿಜೆಪಿಗೆ: ಜೆಡಿಎಸ್ಗೆ ಶಾಕ್!
ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಹಿರಿಯ ನಾಯಕರ ಸೂಚನೆಯ ಮೇರೆಗೆ ಮೈಸೂರಿನಲ್ಲಿ ಕೂತು ರಣತಂತ್ರ ಮಾಡಿದ್ದ ನಿರ್ಮಲ್ ಕುಮಾರ್ ಸುರಾನಾ ಅವರ ಒಳ ರಾಜಕೀಯ ಬಿಜೆಪಿಯ ಪರ ಕೆಲಸ ಮಾಡಿದೆ.
ಮೇಯರ್ ಬಿಜೆಪಿಗೆ ಮತ್ತು ಉಪ ಮೇಯರ್ ಜೆಡಿಎಸ್ಸಿಗೆ ಎನ್ನುವ ಒಪ್ಪಂದವಾಗಿತ್ತು ಎಂದು ಹೇಳಲಾಗುತ್ತಿತ್ತು. ಆದರೆ, ಜೆಡಿಎಸ್ ಅಭ್ಯರ್ಥಿಯ ತನ್ನದೇ ತಪ್ಪಿನಿಂದ ಆ ಹುದ್ದೆಯೂ ಬಿಜೆಪಿ ಪಾಲಾಗುವ ಮೂಲಕ, ಕಾಂಗ್ರೆಸ್ ಕೈಕೈ ಹಿಸುಕಿಕೊಳ್ಳುವಂತಾಗಿದೆ.
ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ
ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ, ಪರಿಷತ್ತಿನ ಸದಸ್ಯ ಮರಿತಿಬ್ಬೇಗೌಡ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿದ್ದಾರೆ. 20 ಮತಗಳ ಅಂತರದಿಂದ ಮೇಯರ್ ಆಗಿ ಶಿವಕುಮಾರ್ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಸದಸ್ಯ ಸೈಯದ್ ಹಸ್ರತ್ ಉಲ್ಲಾ ಪರ 28 ಮತ ಚಲಾವಣೆಯಾದರೆ, ಬಿಜೆಪಿ ಪರ 48 ಜನಪ್ರತಿನಿಧಿಗಳು ಮತ ಚಲಾಯಿಸಿದ್ದಾರೆ. ಎಲ್ಲಾ ಮೂರು ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದವು.
ಮೈಸೂರು ಮಹಾನಗರಪಾಲಿಕೆಯ ಮೇಯರ್ ಮತ್ತು ಉಪ ಮೇಯರ್
ಉಪ ಮೇಯರ್ ಹುದ್ದೆಯ ಕಣದಲ್ಲಿ ರೇಷ್ಮಾ ಅವರು ಜೆಡಿಎಸ್ ಅಭ್ಯರ್ಥಿಯಾಗಿದ್ದರು, ಆದರೆ, ರೇಷ್ಮಾ ಬಿಸಿಎ ಪ್ರಮಾಣಪತ್ರ ಸಲ್ಲಿಸಲು ವಿಫಲರಾಗಿದ್ದರಿಂದ ಅವರ ನಾಮಪತ್ರ ಅಸಿಂಧುಗೊಂಡಿತ್ತು. ಹಾಗಾಗಿ, ಜೆಡಿಎಸ್ ಜನಪ್ರತಿನಿಧಿಗಳು ಬಿಜೆಪಿ ಅಭ್ಯರ್ಥಿ ಮತ ಚಲಾಯಿಸಿದ್ದರು. "ಅಲ್ಪಸಂಖ್ಯಾತ ಸಮುದಾಯದವರು ಗೆಲ್ಲಬಾರದು ಎನ್ನುವ ಕಾರಣಕ್ಕಾಗಿ ಜೆಡಿಎಸ್ ಉದ್ದೇಶಪೂರ್ವಕವಾಗಿಯೇ ಬಿಜೆಪಿಗೆ ಬೆಂಬಲ ಸೂಚಿಸಿತ್ತು. ಮುಂದಿನ ಚುನಾವಣೆಯಲ್ಲಿ ಮತದಾರರು ಜೆಡಿಎಸ್ಸಿಗೆ ಪಾಠ ಕಲಿಸಲಿದ್ದಾರೆ"ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ ಹತಾಶೆ ವ್ಯಕ್ತ ಪಡಿಸಿದ್ದಾರೆ.
ನಾಯಕ ಜನಾಂಗದ ಶಿವಕುಮಾರ್ ಮತ್ತು ಉಪ್ಪಾರ ಜನಾಂಗದ ರೂಪಾ
"ನಾಯಕ ಜನಾಂಗದ ಶಿವಕುಮಾರ್ ಮತ್ತು ಉಪ್ಪಾರ ಜನಾಂಗದ ರೂಪಾ ಅವರು ಮೇಯರ್ ಮತ್ತು ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ರೂಪಾ ಅವರು ಪಿಎಚ್ಡಿ ಪದವೀಧರೆ. ನಾವು ಗೆಲ್ಲಲು ಏನು ಮಾಡಬೇಕೋ ಅದನ್ನು ಮಾಡಿದ್ದೇವೆ. ಸುರುನಾ ಅವರು ಒಗ್ಗಟ್ಟು ಪ್ರದರ್ಶಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಾವು ಯಾರಿಗೂ ಬೆಂಬಲ ಕೊಡಿ ಎಂದು ದಂಬಾಲು ಬಿದ್ದಿಲ್ಲ"ಎಂದು ಸಚಿವ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿಯೂ ಆಗಿರುವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ನಡುವಿನ ರಾಜಕೀಯ ಮೇಲಾಟ
ಮೈಸೂರು ಪಾಲಿಕೆ ಚುನಾವಣೆಯಲ್ಲಿ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರು. ಆದರೆ, ಬಿಜೆಪಿ ಮತ್ತು ಜೆಡಿಎಸ್ ನಡುವಿನ ರಾಜಕೀಯ ಮೇಲಾಟದ ಮುಂದೆ ಕಾಂಗ್ರೆಸ್ ಆಟ ನಡೆಯಲಿಲ್ಲ. ಬಿಸಿಎ ಪ್ರಮಾಣಪತ್ರ ನೀಡದೇ ಇರುವುದು ಬಿಜೆಪಿ-ಜೆಡಿಎಸ್ ಗೇಂ ಪ್ಲ್ಯಾನಿನ ಭಾಗ ಎಂದು ಕಾಂಗ್ರೆಸ್ ನಾಯಕರು ದೂರುತ್ತಿದ್ದಾರೆ. ಒಟ್ಟಿನಲ್ಲಿ ಬಿಜೆಪಿಯ ಆಪರೇಶನ್ ಕಮಲ ಇಲ್ಲೂ ವರ್ಕೌಟ್ ಆಗಿದೆ.