ಕಥೆಯಾಗಿ ಹೇಳುತ್ತಿದ್ದ ದೊಡ್ಡ ನಂದಿ ವಿಗ್ರಹ ಅರಸನಕೆರೆಯಲ್ಲಿ ಕಣ್ಣೆದುರು ಕಂಡಿತು
ಮೈಸೂರು, ಜುಲೈ 15: ನಂದಿಯ ಬೃಹತ್ ವಿಗ್ರಹವೊಂದು ಭಾನುವಾರ ಮೈಸೂರಿನಲ್ಲಿ ಪತ್ತೆಯಾಗಿದೆ. ನಗರದ ಜಯಪುರ ಹೋಬಳಿಯ ಅರಸನಕೆರೆ ಗ್ರಾಮದಲ್ಲಿ ಪತ್ತೆ ಆಗಿರುವ ನಂದಿ ಮೈಸೂರು ಅರಸರ ಆಳ್ವಿಕೆಯದ್ದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
"ನಮ್ಮ ಪೂರ್ವಜರ ಕಾಲದಲ್ಲಿ ಸ್ವಾಮೀಜಿಯೊಬ್ಬರು ಇಲ್ಲಿ ನಂದಿ ಇರುವ ಬಗ್ಗೆ ಮಾಹಿತಿ ನೀಡಿದ್ದರು. ಅವರ ಮಾತಿನಂತೆಯೇ ಹಳ್ಳವನ್ನು ಅಗೆಯುವಾಗ ನಂದಿ ವಿಗ್ರಹ ಕಂಡು ಬಂದಿದೆ. ಆದರೆ ಅದನ್ನು ಪೂರ್ಣ ಪ್ರಮಾಣದಲ್ಲಿ ತೆಗೆಯಲು ಅಂದಿನಿಂದ ಇಂದಿಗೂ ಸಾಧ್ಯವಾಗಿಲ್ಲ. ಅಲ್ಲಿ ಎರಡು ನಂದಿ ವಿಗ್ರಹಗಳು ಮುಖಾಮುಖಿ ಇದ್ದು, ಅದರ ಜೊತೆಗೆ ಒಂದು ಕಂಚಿನ ವಿಗ್ರಹವೂ ಹೂತು ಹೋಗಿದೆ" ಎಂದು ಗ್ರಾಮದ ಹಿರಿಯರಾದ ಮಹದೇವಪ್ಪ ಹೇಳಿದ್ದಾರೆ.
"ಗ್ರಾಮದಲ್ಲಿರುವ ಬೃಹತ್ ನಂದಿ ಬಗ್ಗೆ ಕುತೂಹಲದಿಂದ ಚಾಮರಾಜ ಒಡೆಯರ್ ಅವರು ನಂದಿಯನ್ನು ಮೇಲೆ ತೆಗೆಸಲು ಪ್ರಯತ್ನಿಸಿದ್ದರು. ಆದರೆ ಆಗ ಮಳೆ ಬಂದ ಕಾರಣ ಹೂಳು ತೆಗೆದಿದ್ದ ಜಾಗದಲ್ಲಿ ನೀರು ತುಂಬಿಕೊಂಡು ಮಹಾರಾಜರ ಪ್ರಯತ್ನವೂ ವಿಫಲವಾಗಿ, ಅವರು ಹಿಂಜರಿದಿದ್ದರು" ಎಂಬುದನ್ನು ಕಥೆಯ ರೂಪದಲ್ಲಿ ಅನೇಕ ಹಿರಿಯರು ಹೇಳುತ್ತಾರೆ.

ಈ ಸ್ಥಳದಲ್ಲಿ ಹೂತಿರುವ ನಂದಿಯನ್ನು 35 ವರ್ಷಗಳಿಂದ ಗ್ರಾಮಸ್ಥರೇ ಹುಡುಕುತ್ತಿದ್ದರು. ಅಂತಿಮವಾಗಿ ಅರಸನಕೆರೆಯ ಗ್ರಾಮಸ್ಥರೇ ವಿಗ್ರಹವನ್ನು ಹುಡುಕಿದ್ದು, ಇಂತಹ ಇನ್ನಷ್ಟು ವಿಗ್ರಹಗಳನ್ನು ಪುರಾತತ್ವ ಇಲಾಖೆ ಹುಡುಕಿ, ಇತಿಹಾಸದ ಮಹತ್ವವನ್ನು ತಿಳಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.












Click it and Unblock the Notifications