ಬೆಂಗಳೂರಲ್ಲಿ ಹೆಚ್ಚಾದ ಕೋವಿಡ್; ಮೈಸೂರಿನಲ್ಲಿ ಅಲರ್ಟ್
ಮೈಸೂರು, ಜನವರಿ 07; ಕರ್ನಾಟಕದ ರಾಜಾಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಇದು ಸಹಜವಾಗಿಯೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆತಂಕ ಸೃಷ್ಟಿಸಿದ್ದು, ಜಿಲ್ಲಾಡಳಿತ, ಆರೋಗ್ಯ ಇಲಾಖೆ ಕೋವಿಡ್ ರೂಪಾಂತರಿ ಓಮಿಕ್ರಾನ್ ಮಣಿಸಲು ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುತ್ತಿದೆ.
ಉದ್ಯೋಗ ಹಾಗೂ ಶಿಕ್ಷಣಕ್ಕೆ ಮೈಸೂರಿನ ಬಹುತೇಕರು ಬೆಂಗಳೂರನ್ನು ಆಶ್ರಯಿಸಿದ್ದಾರೆ. ಹೀಗಾಗಿ ರೋಗ ಲಕ್ಷಣ ರಹಿತರು ಏನಾದರೂ ನಗರದಲ್ಲಿ ಓಡಾಡಿದರೆ ಇದರಿಂದ ಸೋಂಕು ಮತ್ತಷ್ಟು ಜನರಿಗೆ ಹರಡುವ ಸಾಧ್ಯತೆ ಇದೆ.
ಪ್ರತಿನಿತ್ಯ ಬಸ್ ಹಾಗೂ ರೈಲಿನಲ್ಲಿ ಸಾಕಷ್ಟು ಜನರು ಬೆಂಗಳೂರು-ಮೈಸೂರು ನಡುವೆ ಸಂಚಾರ ನಡೆಸುತ್ತಾರೆ. ಇದರಿಂದ ಮೈಸೂರಿಗೂ ಬೆಂಗಳೂರು ಪರಿಸ್ಥಿತಿ ಬರಬಹುದೆಂದು ಅಂದಾಜಿಸಿರುವ ಜಿಲ್ಲಾಡಳಿತ ಲಸಿಕೀಕರಣಕ್ಕೆ ವೇಗ ನೀಡಿದೆ. ಅಲ್ಲದೆ, ನಿತ್ಯ 6 ಸಾವಿರ ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಲು ಮುಂದಾಗಿದೆ.

ಹಾಸಿಗೆಗಳು ಸಜ್ಜು; ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಡೆಲ್ಟಾ ಹಾಗೂ ರೂಪಾಂತರಿ ಓಮಿಕ್ರಾನ್ ಹೆಚ್ಚಿನ ಪ್ರಮಾಣದಲ್ಲಿ ಹರಡಿದರೆ ಅದನ್ನು ಎದುರಿಸಲು ಈಗಿನಿಂದಲೇ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದೀಗ ತಕ್ಷಣಕ್ಕೆ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳು ಸೇರಿದಂತೆ ಒಟ್ಟು 5,350 ಹಾಸಿಗೆ ಸಿದ್ಧಪಡಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 250 ಹಾಸಿಗೆಗಳಿವೆ. ಹೆಚ್ಚುವರಿಯಾಗಿ 160 ವೈದ್ಯರು ನೇಮಕಗೊಂಡಿದ್ದು, 11 ಆಕ್ಸಿಜನ್ ಜನರೇಶನ್ ಪ್ಲಾಂಟ್ಗಳಿದ್ದು, ಅಗತ್ಯ ಆಂಬ್ಯುಲೆನ್ಸ್ ವ್ಯವಸ್ಥೆಯನ್ನೂ ಮಾಡಲಾಗಿದೆ.
ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ಆಕ್ಸಿಜನ್ ಉತ್ಪಾದನಾ ಪ್ಲಾಂಟ್ಗಳನ್ನು ಅಳವಡಿಸಲಾಗಿದೆ. ಇನ್ನು ಮೂರು ದಿನಗಳಲ್ಲಿ ಮತ್ತೆ ಮೂರು ಸಾವಿರ ಹಾಸಿಗೆಗಳನ್ನು ಸಿದ್ಧಪಡಿಸಲಾಗುತ್ತದೆ.
ಸಹಾಯವಾಣಿ ಆರಂಭ; ವಿದೇಶದಿಂದ ಅಥವಾ ಹೊರ ರಾಜ್ಯದಿಂದ ಬಂದವರ ಮೇಲೆ ತೀವ್ರ ನಿಗಾ ಇಡಲಾಗಿದ್ದು, ಸೋಂಕಿನ ಲಕ್ಷಣ ಕಂಡು ಬಂದರೆ ಕ್ವಾರಂಟೈನ್ಗೆ ಒಳಪಡಿಸಿ ವಾರಗಳ ನಿಗಾ ವಹಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.
ಅಲ್ಲದೆ, ಮತ್ತೆ ಕೋವಿಡ್ ವಾರ್ ರೂಂ ಹಾಗೂ ಸಹಾಯವಾಣಿಯನ್ನು ಆರಂಭಿಸಲಾಗುತ್ತಿದೆ. ಸಿದ್ದಾರ್ಥನಗರದಲ್ಲಿ ನೂತನ ಡಿಸಿ ಕಚೇರಿ ಸಂಕೀರ್ಣ ಕಟ್ಟಡದಲ್ಲಿ ವಾರ್ ರೂಂ ಹಾಗೂ ಸಹಾಯವಾಣಿ ಆರಂಭವಾಗಲಿದೆ.
ಮೈಸೂರು ವಿಮಾನ ನಿಲ್ದಾಣದಲ್ಲಿ 72 ಗಂಟೆಗಳ ಆರ್ಟಿಪಿಸಿಆರ್ ಕೋವಿಡ್ ನೆಗೆಟಿವ್ ವರದಿ ಇದ್ದರಷ್ಟೇ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಲಾಗುತ್ತಿದೆ. ಹೊರ ರಾಜ್ಯದ ವಿಮಾನ ನಿಲ್ದಾಣಗಳಲ್ಲೂ ಪ್ರಯಾಣಿಕರನ್ನು ತಪಾಸಣೆ ಮಾಡಿಯೇ ಬಿಡಲಾಗುತ್ತಿದೆ. ಮೈಸೂರು ಅರಮನೆಯಲ್ಲೂ ಎರಡು ಡೋಸ್ ಪಡೆದವರಿಗಷ್ಟೇ ಪ್ರವೇಶ ನೀಡಲಾಗುತ್ತಿದೆ. ಇಲ್ಲದಿದ್ದರೆ ಸ್ವ್ಯಾಬ್ ಟೆಸ್ಟ್ ಮಾಡಿಸಬೇಕು. ಚಾಮುಂಡಿಬೆಟ್ಟ ಹಾಗೂ ಮೃಗಾಲಯದಲ್ಲಿ ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯಗೊಳಿಸಲಾಗಿದೆ.
ಲಸಿಕಾ ಅಭಿಯಾನ ಚುರುಕು; ಕಳೆದ ಎರಡು ತಿಂಗಳಿನಿಂದ ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕಿದ್ದ ಜನರು ಈಗ ಓಮಿಕ್ರಾನ್ ವೈರಸ್ ಹರಡುತ್ತಿದ್ದಂತೆ ಲಸಿಕೆ ಪಡೆದುಕೊಳ್ಳಲು ಮುಂದಾಗಿದ್ದಾರೆ. ಅದರಲ್ಲೂ ಜಿಲ್ಲೆಯಲ್ಲಿ ಒಂದೂವರೆ ಲಕ್ಷ ಮಂದಿ ಇನ್ನೂ ಎರಡನೇ ಡೋಸ್ ಪಡೆದಿಲ್ಲ.
ಡಿಎಚ್ಒ ಕೆ. ಎಚ್. ಪ್ರಸಾದ್ ಈ ಕುರಿತು ಮಾತನಾಡಿದ್ದು, "ಆರೋಗ್ಯ ಇಲಾಖೆ ಆರಂಭಿಸಿರುವ ಲಸಿಕಾ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲದೆ ಮೈಸೂರು ಪಾಲಿಕೆ ವ್ಯಾಪ್ತಿಯೊಳಗೆ 65 ಮೊಬೈಲ್ ಯೂನಿಟ್ ಸೇರಿದಂತೆ ಮೈಸೂರು ಜಿಲ್ಲೆಯಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಸಿಕೆ ಅಭಿಯಾನ ನಡೆಸಲು ಒಟ್ಟು 400 ತಂಡ ರಚಿಸಲಾಗಿದೆ" ಎಂದು ಹೇಳಿದ್ದಾರೆ.
ಗುರುವಾರದ ಹೆಲ್ತ್ ಬುಲೆಟಿನ್ ಪ್ರಕಾರ ಮೈಸೂರು ಜಿಲ್ಲೆಯಲ್ಲಿ 65 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 274 ಆಗಿದೆ.












Click it and Unblock the Notifications